ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳಲ್ಲಿ ಆಟದ ಮೈದಾನ ನಿರ್ಮಿಸಿ: ಎಂ.ಮಹೇಶ್ವರ್ ರಾವ್

ಉಡುಪಿ, ಜ.31: ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಶಾಲೆಗಳಿಗೆ ಆಟದ ಮೈದಾನಗಳನ್ನು ನಿರ್ಮಿಸಿ, ಮಕ್ಕಳ ಆಟೋಟಗಳಿಗೆ ಹೆಚ್ಚಿನ ಒತ್ತು ನೀಡಿ ಅವರ ಸಮಗ್ರ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಎಂ. ಮಹೇಶ್ವರ ರಾವ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಒಟ್ಟು 580 ಸರಕಾರಿ ಶಾಲೆಗಳಿದ್ದು, ಇವುಗಳಲ್ಲಿ ಮೊದಲ ಹಂತದಲ್ಲಿ ಕನಿಷ್ಠ 30 ಶಾಲೆಗಳ ಗುರಿ ನಿಗದಿ ಮಾಡಿಕೊಂಡು ಶಾಲಾ ಮಕ್ಕಳ ಆಟ-ಪಾಠಕ್ಕೆ ಉಪಯೋಗವಾಗುವಂತಹ ವಿಶಾಲವಾದ ಆಟದ ಮೈದಾನ ಗಳನ್ನು ನಿರ್ಮಿಸಿಕೊಡಲು ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿ, ಎಲ್ಲಾ ಶಾಲೆಗಳ ದೈಹಿಕ ಶಿಕ್ಷಕರು ಮತ್ತು ಜಿಲ್ಲಾ ಯುವಜನ ಸಬಲೀಕರಣ ಇಲಾಖಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಇದನ್ನು ಅನುಷ್ಠಾನ ಗೊಳಿಸುವಂತೆ ಸೂಚಿಸಿದರಲ್ಲದೇ, ಮುಂದಿನ ಸಭೆಯಲ್ಲಿ ಅನುಷ್ಠಾನ ವರದಿಯ ಜೊತೆ ಹಾಜರಾಗಬೇಕೆಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಕೃಷಿ ಮತ್ತು ತೋಟಗಾರಿಕೆ ಕೇಂದ್ರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಗದ್ದೆಗಳಲ್ಲಿ ಸಿಹಿ ನೀರಿನ ಮೀನುಗಾರಿಕೆ ಮಾಡಲು ಸಾಧ್ಯವೆ ಎಂದು ಪರಿಶೀಲಿಸಿ ಆಸಕ್ತಿ ಉಳ್ಳವರಿಗೆ ಪ್ರೋತ್ಸಾಹ ನೀಡಿ ಮೀನುಗಾರಿಕೆಗೆ ಉತ್ತೇಜಿಸಬೇಕು. ನಬಾರ್ಡ್ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನಾ ನಿಧಿಯನ್ನು ಸಂಪೂರ್ಣವಾಗಿ ಬಳಕೆ ಮಾಡಲು ಸಾಧ್ಯವಾಗುವ ಪ್ರಸ್ತಾವನೆಗಳನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದರು.
ಬೇಸಿಗೆಯಲ್ಲಿ ಜಿಲ್ಲೆಯ ನದಿಗಳು ಒಣಗುವ ಸಾಧ್ಯತೆಗಳಿದ್ದು, ನದಿ ಪಾತ್ರದಲ್ಲಿರುವ ರೈತರು ಸೂಕ್ಷ್ಮ ನೀರಾವರಿ ಪದ್ದತಿಯನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳುವಂತೆ ಅವರ ಮನವೊಲಿಸಬೇಕು ಎಂದು ಮಹೇಶ್ವರ ರಾವ್, ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿ ಕಾಮಗಾರಿ ಮತ್ತು ನಿರ್ಮಿತಿ ಕೇಂದ್ರದಿಂದ ಬಾಕಿ ಉಳಿದಿರುವ ಶಾಲಾ ಕಟ್ಟಡದ ದುರಸ್ತಿ ಕಾರ್ಯಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂಣಗೊಳಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕದ ಬಗ್ಗೆ ಮಾಹಿತಿ ಕೇಳಿದಾಗ, ಅಣೆಕಟ್ಟಿನಲ್ಲಿ ನೀರು ಶೇಖರಿಸಲಾಗಿದೆ. ನೀರಿನ ಸಂಪರ್ಕ ನೀಡಲಾಗಿದ್ದು, ವಿದ್ಯುತ್ ಸಂಪರ್ಕದ ಕೆಲಸ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು.
ಅಂಗನವಾಡಿ ಭೇಟಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿ ಕೊಳ್ಳಲಾಗಿದೆ. 39 ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. 22 ಅಧಿಕಾರಿಗಳು ಮೊದಲನೆ ಸುತ್ತಿನ ವರದಿಯನ್ನು ಇಲಾಖೆಗೆ ನೀಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಆರ್. ಶೇಷಪ್ಪ ತಿಳಿಸಿದರು.
ಜಿಲ್ಲಾಸ್ಪತ್ರೆಯ ನೀಲನಕ್ಷೆ: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಕಟ್ಟಡದ ನೀಲನಕ್ಷೆ ತಯಾರಿಸಲಾಗಿದ್ದು ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾವನೆ ಯಾಗಲಿದೆ. ಜಿಲ್ಲೆಯಲ್ಲಿ 299 ವೈದ್ಯಕೀಯ ಯಂತ್ರೋಪಕರಣಗಳು ಕಾರ್ಯ ನಿರ್ವಹಿಸುತ್ತಿದ್ದು, 40 ಉಪಕರಣಗಳು ಹಾಳಾಗಿವೆ ಎಂದು ಜಿಲ್ಲಾ ಸರ್ಜನ್ ಮಧುಸೂಧನ್ ನಾಯಕ್ ತಿಳಿಸಿದರು. ರಿಪೇರಿ ಆಗಬೇಕಾದ ಉಪಕರಣಗಳ ಲೆಕ್ಕಪರಿಶೋಧನೆ ನಡೆಸಿ ರಿಪೇರಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.
ಅರಣ್ಯ ಇಲಾಖೆಯ ಡೀಮ್ಡ್ ಪಾರೆಸ್ಟ್ ಮತ್ತು ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಜಮೀನಿನ ಸರ್ವೆ ನಡೆಯದಿರುವುದರಿಂದ ಜನರಲ್ಲಿ ಗೊಂದಲ ಉಂಟಾಗಿದ್ದು, ಕ್ವಾರಿ ಕ್ರಷರ್ಗಳಿಗೆ ಅನುಮತಿ ನೀಡಲು ತೊಂದರೆಯಾಗು ತ್ತಿರುವುದನ್ನು ಮನಗಂಡ ಉಸ್ತುವಾರಿ ಕಾರ್ಯ ದರ್ಶಿಗಳು, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಸರ್ವೆಯರ್ಗಳು ಜಂಟಿಯಾಗಿ ಸರ್ವೆ ನಡೆಸಿ ಗೊಂದಲಗಳನ್ನು ಪರಿಹರಿಸಿ ಕ್ವಾರಿ ಕ್ರಷರ್ಗಳನ್ನು ಸ್ಥಾಪಿಸಲು ಅನುಮ ಮಾಡಿ ಕೊಡಬೇಕು. ತಾಲೂಕುಗಳ ತಹಶೀಲ್ದಾರ್ಗಳು ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಗಳು ನಡೆಯಬೇಕು ಎಂದು ಸೂಚಿಸಿದರು.
ಕುಂದಾಪುರ ಎಸಿ ಕೆ.ರಾಜು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಜಿಲ್ಲಾ ಅರಣ್ಯ ಸಂರಕ್ಷಣಾ ಧಿಕಾರಿ ಕಮಲ, ಕಾರ್ಕಳ ಮತ್ತು ಕುದುರೆಮುಖ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುಥ್ರೇನ್, ಎಲ್ಲಾ ತಾಲೂಕುಗಳ ತಹಶೀಲ್ದಾರ್ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.








