ಕೊರೋನ ವೈರಸ್ ಭೀತಿ: ಚೀನಾ ಪ್ರವಾಸಿಗರ ಮೇಲೆ ತೀವ್ರ ನಿಗಾ- ಮೈಸೂರು ಜಿಲ್ಲಾಧಿಕಾರಿ

ಮೈಸೂರು, ಜ.31: ಎಲ್ಲೆಡೆ ಕೊರೋನ ವೈರಸ್ ಆತಂಕ ಹರಡಿರುವ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವ ಚೀನಾ ಪ್ರವಾಸಿಗರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಕೊರೋನ ವೈರಸ್ ಆತಂಕದ ವಿಚಾರ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕೊರೋನ ವೈರಸ್ ಪತ್ತೆಗೆ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ಲ್ಯಾಬ್ ಸ್ಥಾಪನೆ ಮಾಡಲಾಗಿದೆ. ಹೋಟೆಲ್ ಉದ್ಯಮ, ಟ್ರಾವೆಲ್ ಏಜೆನ್ಸಿ ಮೂಲಕ ಕೊರೋನಾ ವೈರಸ್ ಬಾಧಿತರ ಪತ್ತೆಗೆ ವ್ಯವಸ್ಥೆ ಮಾಡಲಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ಚೀನಾ ಹಾಗೂ ಮೈಸೂರು ನಡುವೆ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಸದ್ಯ ಮೈಸೂರಿನಲ್ಲಿ ಯಾವುದೇ ಆತಂಕ ಇಲ್ಲ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಚೀನಾ ಪ್ರವಾಸ ಹೋಗಿದ್ದು ಅವರು ಬಂದ ತಕ್ಷಣ ಅವರನ್ನು ಪರೀಕ್ಷಿಸಲಾಗುವುದು. ಅದಕ್ಕಾಗಿ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ಸಹ ತೆರಯಲಾಗಿದೆ. ಅವರನ್ನು ಮುಂಜಾಗ್ರತಾ ದೃಷ್ಟಿಯಿಂದ ಪರೀಕ್ಷೆಗೊಳಪಡಿಸಲಾಗುವುದು ಎಂದು ಅವರು ತಿಳಿಸಿದರು.
ಕೇರಳ ರಾಜ್ಯದಿಂದ ಕೊರೋನ ವೈರಸ್ ಬಾಧಿತರು ಬಂದಿಲ್ಲ. ಇದರ ಬಗ್ಗೆ ಆತಂಕ ಬೇಡ, ಆದರೂ ಮುಂಜಾಗ್ರತೆ ಇರಲಿ. ಸಾಮಾನ್ಯ ವೈರಲ್ ಜ್ವರಕ್ಕೂ ಮೊದಲು ಚಿಕಿತ್ಸೆ ಪಡೆಯಿರಿ. ಇದಕ್ಕಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ಲ್ಯಾಬ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.







