ಮಡಿವಾಳ ಮಾಚಿದೇವ- ಸವಿತಾ ಮಹರ್ಷಿ ಜಯಂತಿ ಆಚರಣೆ

ಮಂಗಳೂರು, ಫೆ. 1: ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಇಂದು ನಗರದ ತುಳುಭವನದಲ್ಲಿ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸಲಾಯಿತು.
ದ.ಕ. ಜಿಲ್ಲಾ ಮಡಿವಾಳರ ಸಂಘ, ದ.ಕ. ಜಿಲ್ಲಾ ಸವಿತಾ ಸಮಾಜದ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಹನೀಯರಾದ ಮಾಚಿದೇವ ಹಾಗೂ ಸವಿತಾ ಮಹಿರ್ಷಿಗಳು ಸಮಾಜಕ್ಕೆ ನೀಡಿದ ಸಂದೇಶ, ಅವರ ತ್ಯಾಗಮಯ ವ್ಯಕ್ತಿತ್ವವನ್ನು ಗುರುತಿಸುವ ನಿಟ್ಟಿನಲ್ಲಿ ಸರಕಾರದಿಂದ ಈ ಆಚರಣೆಯನ್ನು ನಡೆಸುತ್ತಿರು ವುದು ಹೆಮ್ಮೆಯ ಸಂಗತಿ. ಜಾತಿ, ಮತ, ಬೇಧಗಳನ್ನು ಮರೆತು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡಿದ ಈ ಮಹಾನ್ ಸಂತರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಸವಿತಾ ಮಹರ್ಷಿ ಬಗ್ಗೆ ಉಪನ್ಯಾಸ ನೀಡಿದ ಕರಾವಳಿ ಬಿಎಡ್ ಕಾಲೇಜಿನ ಉಪನ್ಯಾಸಕಿ ಮಾಧುರಿ ಶ್ರೀರಾಮ್, ಸವಿತಾ ಮಹಿರ್ಷಿ ಪರಿಪೂರ್ಣತೆ ಹಾಗೂ ವೈವಿಧ್ಯಮಯ ಆಚಾರ ವಿಚಾರ ಹೊಂದಿರುವ ವ್ಯಕ್ತಿತ್ವ ಹೊಂದಿದ್ದವರು ಎಂದರು.
ಸವಿತಾ ಮಹಿರ್ಷಿಯ ಜನನದ ಕುರಿತಂತೆ ಪುರಾಣದ ಕಥೆಯನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ 1.24 ಕೋಟಿ ಹಾಗೂ ಕರ್ನಾಟಕದಲ್ಲಿ 394000 ಜನಸಂಖ್ಯೆಯನ್ನು ಸವಿತಾ ಸಮುದಾಯ ಹೊಂದಿದೆ ಎಂದವರು ಹೇಳಿದರು.
ಮಾಚಿದೇವರ ಬಗ್ಗೆ ಉಪನ್ಯಾಸ ನೀಡಿದ ಸುರತ್ಕಲ್ ಎನ್ಐಟಿಕೆಯ ನಿವೃತ್ತ ಅಧ್ಯಾಪಕ ವಿಶ್ವನಾಥ ಪಿ. ಕಾಟಿಪಳ್ಳ, ಬಸವಣ್ಣನವರ ಮುಖ್ಯ ಅನುಯಾಯಿಗಳಲ್ಲಿ ಮಾಚೀದೇವರು ಒಬ್ಬರಾಗಿದ್ದು, 12ನೆ ಶತಮಾನದಲ್ಲಿನ ಅಸ್ಪಶ್ಯತೆ, ದುರ್ಬಲರ ಮೇಲಿನ ಶೋಷಣೆ ವಿರುದ್ಧ ಧ್ವನಿ ಎತ್ತಿದವರು ಎಂದರು.
3000ಕ್ಕೂ ಅಧಿಕ ವಚನಗಳನ್ನು ಮಾಚಿದೇವರು ಬರೆದಿರುವುದಾಗಿ ಅಂದಾಜಿಸಲಾಗಿದ್ದು, ಅವುಗಳಲ್ಲಿ 800ರಷ್ಟು ತಾಳೆಗರಿಯ ವಚನಗಳು ಶಿಥಾಲಗೊಂಡು ಸಂಶೋಧನೆಗೊಳಪಟ್ಟಿವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ದ.ಕ. ಜಿಲ್ಲಾ ಸವಿತಾ ಸಮಾಜದ ಅಧ್ಯಕ, ಆನಂದ ಭಂಡಾರಿ ಹೊಸಬೆಟ್ಟು, ಮಡಿವಾಳರ ಸಂಘದ ಕಾರ್ಯದರ್ಶಿ ಭಾಸ್ಕರ ಬೇಕಲ, ತಹಶೀಲ್ದಾರ್ ಗುರುಪ್ರದಾಸ್ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಕಾಳಿಂಗ ಮರ್ದನ ನೃತ್ಯ ಪ್ರದರ್ಶಿಸಿದರು.














