ಆರ್ಥಿಕತೆಯಲ್ಲಿ ಬದಲಾವಣೆ ತರುವ ಯಾವುದೇ ಅಂಶ ಇಲ್ಲ: ಬಜೆಟ್ ಬಗ್ಗೆ ಆಮ್ ಆದ್ಮಿ ಪಕ್ಷ
ಬೆಂಗಳೂರು, ಫೆ.1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡೂವರೆ ಗಂಟೆಯ ಸುದೀರ್ಘವಾದ ಬಜೆಟ್ ಭಾಷಣದಲ್ಲಿ, ಭಾರತದ ಕುಂಠಿತಗೊಂಡಿರುವ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆಯಾಗುವಂತಹ ಯಾವುದೇ ಅಂಶ ಕಂಡು ಬರಲಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕ ಶಾಂತಲಾ ದಾಮ್ಲೆ ಟೀಕಿಸಿದ್ದಾರೆ.
ಜಿಡಿಪಿ ದರ ವೃದ್ಧಿ ಮುಂದಿನ ವರ್ಷ ಶೇ.10 ಏರುವಂತಹ ಸೂಚನೆ ಕಂಡು ಬರಲಿಲ್ಲ. ಶೇರು ಮಾರುಕಟ್ಟೆ ಶೇ.1ರಷ್ಟು ಕುಸಿತ ತನ್ನದೇ ಕತೆ ಹೇಳುತ್ತದೆ. ಚೆನ್ನೈ ಬೆಂಗಳೂರು ದ್ರೂತಗತಿ ಮಾರ್ಗ, 100 ಹೊಸ ವಿಮಾನ ನಿಲ್ದಾಣ, ರೇಲ್ವೆ ಮಾರ್ಗ ವಿದ್ಯುತೀಕರಣ, ಬ್ಯಾಂಕ್ ಡಿಪಾಸಿಟ್ ವಿಮೆ ಮಿತಿ ಒಂದರಿಂದ ಐದು ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದ್ದಾರೆ.
ವೈಯಕ್ತಿಕ ತೆರಿಗೆ ಸರಳೀಕರಣ ಮತ್ತು ಅದರ ಲಾಭ ಯಾರಿಗೆ ಎನ್ನುವುದಕ್ಕೆ ಸಂಪೂರ್ಣ ವಿವರದ ಅಧ್ಯಯನ ಮಾಡಬೇಕಿದೆ. ತೆರಿಗೆ ಕಳ್ಳತನವನ್ನು ಅಪರಾಧ ಕಾನೂನಿನ ವ್ಯಾಪ್ತಿಯಿಂದ ಹೊರಹಾಕಿದ್ದು ಸರಿಯಿಲ್ಲ, ಇದರಿಂದ ಇನ್ನಷ್ಟು ಜನ ಹೆದರಿಕೆ ಇಲ್ಲದೆ ಕಳ್ಳತನ ಮಾಡಲು ಪರೋಕ್ಷವಾಗಿ ಸೂಚಿಸಿದಂತಿದೆ ಎಂದು ಶಾಂತಲಾ ದಾಮ್ಲೆ ಹೇಳಿದ್ದಾರೆ.
ಆರ್ಥಿಕ ಖೋತಾ ನಿರೀಕ್ಷೆಗಿಂತ ಜಾಸ್ತಿಯಾಗಿದೆ, ಕಂದಾಯ ವಸೂಲಿಯೂ ಗುರಿ ಮುಟ್ಟಿಲ್ಲ. ಕಳೆದ ಬಜೆಟ್ನಲ್ಲಿ ಮಂಡಿಸಿದ ಅನೇಕ ಅಂಶಗಳು ಜಾರಿಗೆ ಬಂದಿಲ್ಲ. ಹಾಗಾಗಿ ಕಳೆದ ಆರು ವರ್ಷದಲ್ಲಿ ಮಂಡನೆಯಾದ ಅತ್ಯುತ್ತಮ ಬಜೆಟ್ ಇದೆಂದು ಅವರು ತಮಗೆ ತಾವೇ ಹೇಳಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.