ಬೀದಿ ನಾಯಿಗಳಿಗೆ ವಿಷ ನೀಡಿ ಕೊಂದ ಪ್ರಕರಣ: ಆರೋಪಿ ಸೆರೆ
ಬೆಂಗಳೂರು, ಫೆ.1: ಬೀದಿ ನಾಯಿಗಳಿಗೆ ಆಹಾರದಲ್ಲಿ ವಿಷ ಹಾಕಿ, ಸಾವಿಗೆ ಕಾರಣವಾಗಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಇಲ್ಲಿನ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಜೋಸೆಫ್ ಫ್ರಾನ್ಸಿಸ್ ಬಂಧಿತ ಆರೋಪಿಯಾಗಿದ್ದು, ಈತ ಪುಟ್ಟೇನಹಳ್ಳಿಯ ಅನಾಥಾಶ್ರಮವೊಂದರ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಜ.27ರಂದು ಅನಾಥಾಶ್ರಮದಲ್ಲಿ ಉಳಿದ ಆಹಾರವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದನಂತೆ. ಇದೇ ಊಟವನ್ನು ಸೇವಿಸಿ ಆರು ನಾಯಿಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ನಾಲ್ಕು ನಾಯಿಗಳು ಅಸ್ವಸ್ಥವಾಗಿದ್ದವು. ಇನ್ನು ಈ ಸಂಬಂಧ ಸ್ಥಳೀಯರೊಬ್ಬರು ನೀಡಿದ ದೂರಿನ ಮೇರೆಗೆ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ನಾಯಿಗಳಿಗೆ ಆಹಾರ ಹಾಕಿದ್ದು ನಿಜ. ಆದರೆ ಊಟದಲ್ಲಿ ವಿಷ ಹಾಕಿಲ್ಲ ಎಂದು ಪೊಲೀಸರ ವಿಚಾರಣೆಯಲ್ಲಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ವಿಷ ಸೇವಿಸಿದ ಆಹಾರ ಮಾದರಿಯನ್ನು ಎಫ್ಎಸ್ಎಲ್ ವಿಭಾಗಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





