ತಪ್ಪು ಗ್ರಹಿಕೆಯಿಂದಾದ ಪ್ರತಿಭಟನೆಯಲ್ಲ
ಮಾನ್ಯರೇ,
ಸಿಎಎ, ಎನ್ಆರ್ಸಿ, ಎನ್ಪಿಆರ್ ಪರ ಮತ್ತು ವಿರೋಧವಾಗಿ ದೇಶದಾದ್ಯಂತ ಜನ ಜಾಗೃತಿ ಸಭೆಗಳು ನಡೆಯುತ್ತಿವೆ. ಪರ ವಾದಿಸುವವರು ಮುಸ್ಲಿಮರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ಅಂದರೆ ಭಾರತೀಯ ಮುಸ್ಲಿಮರು ಭಯದಿಂದ ಬೀದಿಗಿಳಿದಿದ್ದಾರೆ. ಮುಸ್ಲಿಮರ ಬಳಿ ಸೂಕ್ತ ದಾಖಲೆಗಳಿಲ್ಲ. ಎಲ್ಲರೂ ಡಿಟೆಂಕ್ಷನ್ ಸೆಂಟರ್ಗೆ ಹೋಗಬೇಕಾಗಿದೆ ಎಂದು ಭಾವಿಸಿರುವುದಾದರೆ ಅದು ತಪ್ಪುಗ್ರಹಿಕೆಯಾಗಿದೆ. ಪ್ರತಿಭಟಿಸುವ ಮುಸ್ಲಿಮರಲ್ಲಿ ಖಂಡಿತ ದಾಖಲೆಗಳಿವೆ. ಮಾತ್ರವಲ್ಲ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಂದ ದೌರ್ಜನ್ಯಕ್ಕೊಳಗಾದವರಿದ್ದರೆ ಪೌರತ್ವ ನೀಡುವ ಸರಕಾರದ ನಿಲುವನ್ನು ಕೂಡ ಮುಸ್ಲಿಮರು ಗೌರವಿಸುತ್ತಾರೆ. ಆದರೆ (ಎನ್ಆರ್ಸಿ)ಪೌರತ್ವದ ಹೆಸರಿನಲ್ಲಿ ಸರಕಾರ ಇಡೀ ಭಾರತೀಯರನ್ನು ಪೌರತ್ವ ಪರೀಕ್ಷೆಗೆ ಒಳಪಡಿಸಿ ಬಡವರ ನಿರ್ಗತಿಕರ ಸಮಯವನ್ನೂ, ರಕ್ತವನ್ನೂ ಹೀರುವ ಮಾರ್ಗವನ್ನು ಖಂಡಿತ ಸಹಿಸಲಾರರು. ಸಮಾಜದ ದುರ್ಬಲ ವರ್ಗಗಳಿಗಾಗಿ ಬೀದಿಗಿಳಿದು ಮುಸ್ಲಿಮರು ಹೋರಾಟ ಮಾಡುತ್ತಿದ್ದಾರೆಯೇ ವಿನಃ ಯಾವ ಸ್ವಾರ್ಥ ಲಾಭವೂ ಇದರಲ್ಲಿ ಅಡಕವಾಗಿಲ್ಲ. ಇನ್ನೊಂದು ನಾಚಿಕೆಗೇಡಿನ ಸಂಗತಿ ಎನ್ಆರ್ಸಿಯಿಂದಾಗಿ ದಾಖಲೆ ನೀಡಲು ಸಾಧ್ಯವಾಗದ ಮುಸ್ಲಿಮೇತರ ಬಾಂಧವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಭಾರತೀಯ ಪೌರತ್ವ ಸಿಗುವುದಾದರೂ ಹೊರದೇಶಗಳಿಂದ ಬಂದವರು ಎಂಬುದಾಗಿ ಸುಳ್ಳು ಹೇಳಬೇಕೇ? ಇದಕ್ಕಿಂತ ದೊಡ್ಡ ದೌರ್ಜನ್ಯ ಬೇರೇನಿದೆ? ದೇಶದ ಆತ್ಮವನ್ನೇ ಘಾಸಿಗೊಳಿಸುವ ಕರಾಳ ಕಾಯ್ದೆ, ಕಾನೂನುಗಳು ಜಾರಿಯಾಗದಂತೆ ಸರಕಾರ ಎಚ್ಚರವಹಿಸಲಿ.ದೇಶ ಮತ್ತು ದೇಶವಾಸಿಗಳ ಹಿತಬಯಸಲಿ. ಪರೋಕ್ಷವಾಗಿ ಯಾರನ್ನೂ ಅವಮಾನಿಸದಿರಲಿ.