ಮಂಗಳವಾರದಿಂದ ಶಿವಮೊಗ್ಗದಲ್ಲಿ ರಣಜಿ ಕಲರವ: ನಾಕೌಟ್ನತ್ತ ಕರ್ನಾಟಕದ ಚಿತ್ತ

ಶಿವಮೊಗ್ಗ, ಫೆ.3: ಕಳೆದ ವಾರ ದಿಲ್ಲಿಯ ಕರ್ನೈಲ್ ಸಿಂಗ್ ಸ್ಟೇಡಿಯಂನಲ್ಲಿ ರೈಲ್ವೇಸ್ ವಿರುದ್ದ ಜಯ ಸಾಧಿಸಿ ಏಳಂಕವನ್ನು ಗಳಿಸಿ ನಿಟ್ಟುಸಿರುಬಿಟ್ಟಿದ್ದ ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ಶಿವಮೊಗ್ಗದ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ರಣಜಿ ಟ್ರೋಫಿಯ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.
ಮೂರನೇ ಬಾರಿಗೆ ಶಿವಮೊಗ್ಗದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ರಣಜಿ ಪಂದ್ಯವನ್ನು ಆಯೋಜಿಸ ಲಾಗುತ್ತಿದ್ದು, ಪಂದ್ಯಾವಳಿಗಾಗಿ ಸಕಲ ಸಿದ್ದತೆ ಮಾಡಿಕೊಳ್ಳ ಲಾಗಿದ್ದು, ವ್ಯವಸ್ಥಿತ ಸೌಲಭ್ಯ ಕಲ್ಪಿಸಲಾಗಿದೆ. ಇದುವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಡೆಯುತ್ತಿರುವ ಕರ್ನಾಟಕ ತಂಡ ಮಧ್ಯಪ್ರದೇಶ ವಿರುದ್ಧದ ಪಂದ್ಯವನ್ನು ಗೆದ್ದು ಕ್ವಾರ್ಟರ್ ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳುವ ಕಾತರದಲ್ಲಿದೆ.
ಕರ್ನಾಟಕ ತಂಡ ರಣಜಿಯಲ್ಲಿ ಈ ತನಕ ಆಡಿರುವ ಆರು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಹಾಗೂ ಇನ್ನು ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿ ಒಟ್ಟು 24 ಅಂಕದೊಂದಿಗೆ ಎಲೈಟ್ ಎ ಹಾಗೂ ಬಿ ವಿಭಾಗದ ಜಂಟಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನಾಲ್ಕು ಪಂದ್ಯದಲ್ಲಿ ಡ್ರಾ ಸಾಧಿಸಿ, ಎರಡು ಪಂದ್ಯದಲ್ಲಿ ಸೋಲಿನ ರುಚಿ ಅನುಭವಿಸಿರುವ ಮಧ್ಯಪ್ರದೇಶ ತಂಡ ರಣಜಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಈ ವರ್ಷದ ರಣಜಿ ಋತುವಿನಲ್ಲಿ ಒಂದೂ ಗೆಲುವು ಕಾಣದೇ ಕಂಗೆಟ್ಟಿರುವ ಮಧ್ಯಪ್ರದೇಶ ಈ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲ್ಲೇಬೇಕಾದ ಗುರಿ ಹೊಂದಿದೆ. ಈ ಹಿಂದೆ ಹೈದರಾಬಾದ್ ಮತ್ತು ರೈಲ್ವೇಸ್ ವಿರುದ್ದ ನಡೆದ ಎರಡು ರಣಜಿ ಪಂದ್ಯಗಳಲ್ಲಿ ಕರ್ನಾಟಕ ತಂಡ ಜಯ ಗಳಿಸಿತ್ತು. ಈ ಬಾರಿಯೂ ಕರ್ನಾಟಕವೇ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿದೆ.
ಕರ್ನಾಟಕ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ದೇವದತ್ತ ಪಡಿಕ್ಕಲ್ರನ್ನು ಹೆಚ್ಚು ಅವಲಂಬಿಸಿದೆ. ಪಡಿಕ್ಕಲ್ 11 ಇನಿಂಗ್ಸ್ಗಳಲ್ಲಿ ಒಟ್ಟು 504 ರನ್ ಗಳಿಸಿದ್ದಾರೆ. ಪಡಿಕ್ಕಲ್ ಹೊರತುಪಡಿಸಿ ಉಳಿದ ಬ್ಯಾಟ್ಸ್ಮನ್ಗಳು 300ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ. ನವುಲೆ ಸ್ಟೇಡಿಯಂ ಪಿಚ್ ಹುಲ್ಲುಹಾಸಿನಿಂದ ಕೂಡಿದ್ದು ಮೊದಲೆರಡು ದಿನಗಳ ಆಟದಲ್ಲಿ ಪಿಚ್ ವೇಗದ ಬೌಲರ್ಗಳಿಗೆ ನೆರವಾಗಬಹುದು ಎಂದು ಉಭಯ ತಂಡಗಳ ಲೆಕ್ಕಾಚಾರವಾಗಿದೆ. ರೈಲ್ವೇಸ್ ವಿರುದ್ಧ ಪಂದ್ಯದಲ್ಲಿ ಕೊನೆಯ ದಿನದಾಟದಲ್ಲಿ ಕರ್ನಾಟಕಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದ ರೋನಿತ್ ಮೋರೆ ತವರು ನೆಲದಲ್ಲಿ ಮತ್ತೊಂದು ಶ್ರೇಷ್ಠ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ.







