ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿದ್ದರೆ ಒಂದನ್ನು ರದ್ದುಪಡಿಸಿ : ಮುನೀಷ್ ಮೌದ್ಗಿಲ್

ಉಡುಪಿ, ಫೆ.4: ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಬ್ಬನೇ ಮತದಾರನ ಹೆಸರು ಎರಡು ಕಡೆಗಳಲ್ಲಿ ನೊಂದಾಯಿತವಾಗಿದ್ದರೆ, ಆತ ವಾಸವಿ ಲ್ಲದ ಕ್ಷೇತ್ರದ ಮತದಾರರ ಪಟ್ಟಿಯ ಹೆಸರನ್ನು ರದ್ದುಪಡಿಸುವಂತೆ ಭೂಮಾಪನದ ಆಯುಕ್ತ, ಪದನಿಮಿತ್ತ ನಿರ್ದೇಶಕರು ಭೂಮಿ ಹಾಗೂ ಯುಪಿಓಆರ್ ಮತ್ತು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಮುನೀಷ್ ಮೌದ್ಗಿಲ್ ಸೂಚಿಸಿದ್ದಾರೆ.
ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಮತದಾರರ ಪಟ್ಟಿಯ ಸೇರ್ಪಡೆ, ತಿದ್ದುಪಡಿ, ರದ್ದುಗೊಳಿಸುವಿಕೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಒಬ್ಬನೇ ಮತದಾರನ ಹೆಸರು ಎರಡು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನೊಂದಾಯಿತವಾಗಿರುವ ಬಗ್ಗೆ ಚುನಾವಣಾ ಆಯೋಗದ ತಂತ್ರಾಂಶದ ಮೂಲಕ ಹುಡುಕಲು ಸಾಧ್ಯವಿದೆ. ಒಬ್ಬನೇ ವ್ಯಕ್ತಿಯ ಭಾವಚಿತ್ರಗಳನ್ನು ತಂತ್ರಾಂಶ ನಿಖರವಾಗಿ ಪತ್ತೆ ಹಚ್ಚಲಿದ್ದು, ಅಂತಹ ಮತದಾರರ ಪಟ್ಟಿಯನ್ನು ಸಿದ್ದಪಡಿಸಿ, ಬಿಎಲ್ಓಗಳ ಮೂಲಕ ವಿಳಾಸವನ್ನು ಪರಿಶೀಲಿಸಿ, ಮತದಾರರು ಪ್ರಸ್ತುತ ವಾಸ್ತವ್ಯವಿರುವ ಕ್ಷೇತ್ರದಲ್ಲಿ ಆತನ ಹೆಸರು ಉಳಿಸಿಕೊಂಡು, ಮತ್ತೊಂದು ಹೆಸರನ್ನು ಮತದಾರರ ಪಟ್ಟಿಯಿಂದ ರದ್ದುಗೊಳಿಸಲು ಕ್ರಮ ಕೈಗೊಳ್ಳಿ ಎಂದವರು ಅಧಿಕಾರಿಗಳಿಗೆ ಸೂಚಿಸಿದರು.
ಒಬ್ಬನ ಹೆಸರು ಎರಡು ಕಡೆ ನೊಂದಾವಣೆಯಾಗಿರುವ ಕುರಿತಂತೆ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ನೀಡುವ ಆಕ್ಷೇಪಣೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುನೀಷ್ ಮೌದ್ಗಿಲ್ ಸೂಚಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಚುನಾವಣಾ ಅಯೋಗದ ಸೂಚನೆಯಂತೆ, ಒಟ್ಟು ಜನಸಂಖ್ಯೆಯ ಪ್ರಮಾಣಕ್ಕೆ ನಿಗದಿಪಡಿಸಿದ ಪ್ರಮಾಣ ದಲ್ಲಿ ಮತದಾರರ ಸಂಖ್ಯೆ ಇರುವ ಬಗ್ಗೆ ಪರಿಶೀಲಿಸಿ, ವ್ಯತ್ಯಾಸ ಕಂಡುಬಂದಲ್ಲಿ ಮತ್ತೊಮ್ಮೆ ಕ್ಷೇತ್ರಮಟ್ಟದಲ್ಲಿ ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿರುವ ಜಿಲ್ಲೆಯಲ್ಲಿನ ರಾಜಕೀಯ ಮುಖಂಡರು ಮತ್ತು ಗಣ್ಯ ವ್ಯಕ್ತಿಗಳ ಪಟ್ಟಿಯನ್ನು ಸಿದ್ದಪಡಿಸಿಟ್ಟುಕೊಳ್ಳಿ. ಚುನಾವಣಾ ಸಂದರ್ಭದಲ್ಲಿ ಅವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಾತ್ರಿ ಪಡಿಸಿ ಕೊಳ್ಳಿ ಎಂದು ಮೌದ್ಗಿಲ್ ತಿಳಿಸಿದರು.
ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಪ್ರತಿನಿಧಿಗಳು, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾ ಧಿಕಾರಿ ರಾಜು, ಜಿಲ್ಲಾ ಚುನಾವಣಾ ತಹಶೀಲ್ದಾರ್ ಆನಂದಪ್ಪ ನಾಯಕ್ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರ್ಗಳು ಉಪಸ್ಥಿತರಿದ್ದರು.







