ತೊಕ್ಕೊಟ್ಟು: ಪುತ್ರ, ಸೊಸೆಯಿಂದ ವೃದ್ಧೆಗೆ ಗೃಹ ಬಂಧನ
ಸರಕಾರಿ ಪ್ರಾಯೋಜಿತ ಸಂಸ್ಥೆಯಿಂದ ಕೃತ್ಯ ಬೆಳಕಿಗೆ

ಮಂಗಳೂರು, ಫೆ.5: ಪುತ್ರ ಮತ್ತು ಸೊಸೆಯಿಂದ ವಯೋವೃದ್ಧೆ ತಾಯಿ ಮನೆಯೊಂದರಲ್ಲಿ ದಿಗ್ಬಂಧನಕ್ಕೊಳಗಾದ ಪ್ರಕರಣ ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ಬುಧವಾರ ಬೆಳಕಿಗೆ ಬಂದಿದೆ.
ಸಂತ್ರಸ್ತೆ ವೃದ್ಧೆಯನ್ನು ರಕ್ಷಿಸಲೆಂದು ಸರಕಾರಿ ಪ್ರಾಯೋಜಿತ ಸಂಸ್ಥೆಯೊಂದರ ಪದಾಧಿಕಾರಿಗಳು ಈ ಮನೆಗೆ ಧಾವಿಸಿದರೂ ಆ ವೇಳೆ ದಂಪತಿ ಮನೆಯಲ್ಲಿಲ್ಲದ ಕಾರಣ ಅವರಿಗಾಗಿ ಎಂಟು ಗಂಟೆ ಕಾಯುವಂತಾಯಿತು.
ಘಟನೆ ವಿವರ: ತೊಕ್ಕೊಟ್ಟು ಸಮೀಪದ ಕಲ್ಲಾಪು ನಾಗನಕಟ್ಟೆ ಬಳಿಯಿರುವ ಫ್ಲ್ಯಾಟ್ ಒಂದರಲ್ಲಿ ವಾಸವಿರುವ ನಾಗೇಶ್ ಶೆಟ್ಟಿಗಾರ್ ತನ್ನ ತಾಯಿ ಸರಸ್ವತಿ ಮತ್ತು ಪತ್ನಿ ಗೀತಾ ಜೊತೆ ಕಳೆದ ಮೂರು ವರ್ಷಗಳಿಂದ ವಾಸವಾಗಿದ್ದಾರೆ ಎನ್ನಲಾಗಿದೆ.
ನಾಗೇಶ್ ಜಾತ್ರೆ, ಧಾರ್ಮಿಕ ಉತ್ಸವಗಳ ಸಂದರ್ಭ ಬೆಡ್ಶೀಟ್ ವ್ಯಾಪಾರ ಮಾಡುತ್ತಿದ್ದರೆ, ಪತ್ನಿ ಶಿಕ್ಷಕಿಯಾಗಿದ್ದರು ಎನ್ನಲಾಗಿದೆ. ಈ ದಂಪತಿಗೆ ಮಕ್ಕಳಿಲ್ಲದ ಕಾರಣ ಮಗುವೊಂದನ್ನು ಇತ್ತೀಚೆಗೆ ದತ್ತು ಪಡೆದಿದ್ದಾರೆ ಎನ್ನಲಾಗಿದೆ. ಸರಸ್ವತಿಗೆ ಸುಮಾರು 80 ವರ್ಷ ಪ್ರಾಯವಾಗಿದ್ದು, ಪಾರ್ಶ್ವವಾಯು ಪೀಡಿತರಾಗಿದ್ದಾರೆ.
ಈ ದಂಪತಿ ಮನೆಯಿಂದ ಹೊರಹೋಗುವ ಸಂದರ್ಭ ವೃದ್ಧೆ ಸರಸ್ವತಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಹೋಗುವುದರಿಂದ ಅನ್ನಾಹಾರ ಇಲ್ಲದೆ ವೃದ್ಧೆ ಸಂಪೂರ್ಣ ಸೊರಗಿ ಜೀವನ್ಮರಣ ಸ್ಥಿತಿಗೆ ತಲುಪಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ವೃದ್ಧೆಯನ್ನು ಇದೇ ಸ್ಥಿತಿಯಲ್ಲಿ ಬಿಟ್ಟು ಹಲವು ದಿನಗಳ ಬಳಿಕ ಮನೆಗೆ ಮರಳಿದ್ದರು ಎನ್ನಲಾಗಿದೆ. ಅಲ್ಲದೆ ವೃದ್ಧೆ ಮಲಗಿದಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದುದರಿಂದ ಫ್ಲ್ಯಾಟ್ ನಲ್ಲಿ ದುರ್ನಾತ ಬರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಂಗಳವಾರ ಈ ದಂಪತಿಯು ಮನೆಯಿಂದ ಹೊರಹೋಗಿದ್ದು, ರಾತ್ರಿಯವರೆಗೂ ಮನೆಗೆ ಬಾರದಿದ್ದರಿಂದ ಈ ಮನೆಯಿಂದ ಮಲಮೂತ್ರದ ದುರ್ನಾತ ಬರುತ್ತಿದ್ದುದರಿಂದ ಪಕ್ಕದ ನಿವಾಸಿಗಳು ಹಿರಿಯ ನಾಗರಿಕರ ರಕ್ಷಣಾ ಸಮಿತಿಗೆ ಮಾಹಿತಿ ನೀಡಿದ್ದರು. ಬುಧವಾರವೂ ಮನೆಯ ಬಾಗಿಲು ಮುಚ್ಚಲ್ಪಟ್ಟಿದ್ದರಿಂದ ಹಿರಿಯ ನಾಗರಿಕ ಸಹಾಯವಾಣಿಯ ಸಹ ಸಂಯೋಜಕಿ ಲಿರ್ವಿನ್ ಲೋಬೋ, ಮಾನವ ಹಕ್ಕು ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಯು.ಕೆ. ಮುಹಮ್ಮದ್ ಮುಸ್ತಫಾ, ಮಹಿಳಾ ವಿಭಾಗ ಸಂಯೋಜಕಿ ಉಷಾ ನಾಯಕ್, ಸದಸ್ಯರಾದ ರಝಿಯಾ ಇಬ್ರಾಹಿಂ, ಶಬೀರ್ ಉಳ್ಳಾಲ, ದೀಪಕ್ ರಾಜೇಶ್ ಕುವೆಲ್ಲೋ, ಸಮಾಜ ಸೇವಕ ಅಬ್ದುರ್ರಹ್ಮಾನ್ (ಮುನ್ನ ಕಮ್ಮರಡಿ), ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಸೇವಾ ವಿದ್ಯಾರ್ಥಿನಿ ದೀಪಾ ಚೌಧರಿ ಬೆಳಗ್ಗೆ 10:30ಕ್ಕೆ ಫ್ಲ್ಯಾಟ್ ಗೆ ತೆರಳಿ ನಾಗೇಶ್ ಮೊಬೈಲ್ ಸಂಖ್ಯೆ ಸಂಗ್ರಹಿಸಿ ಕರೆ ಮಾಡಿದಾಗ ತಾನು ಪುತ್ತೂರಿನಲ್ಲಿದ್ದು ಸಂಜೆ 5 ಗಂಟೆಯ ಬಳಿ ಬರುವುದಾಗಿ ತಿಳಿಸಿದ್ದರು. ಅದರಂತೆ ವೃದ್ದೆಯನ್ನು ರಕ್ಷಿಸಲು ಮುಂದಾದವರು ಸಂಜೆಯವರೆಗೂ ಕಾದು ಕುಳಿತರು.
ಆಸ್ಪತ್ರೆಯಲ್ಲಿ ಉಪಚರಿಸಲು ಜನರಿಲ್ಲ ಎಂದರು !
ಸಂಜೆ 6ರ ಬಳಿಕ ದಂಪತಿ ಮನೆಗೆ ಆಗಮಿಸುವ ಮೊದಲೇ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಯಮುನಾ ಕೂಡ ಆಗಮಿಸಿದ್ದರು. ವೃದ್ಧೆಯ ಬಗ್ಗೆ ಸಮಿತಿಯವರು ಈ ದಂಪತಿಯ ಬಳಿ ಪ್ರಶ್ನಿಸಿದಾಗ, ತಾಯಿಯನ್ನು ತನ್ನ ತಮ್ಮ ಇಲ್ಲಿಗೆ ಬಿಟ್ಟು ಹೋಗಿದ್ದು, ನಮ್ಮಿಂದಾಗುವ ರೀತಿಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದೇನೆ. ನಾವು ಮಗುವಿನ ದತ್ತು ಪ್ರಕ್ರಿಯೆಗೆ ಹೋಗಿದ್ದೆವು. ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಹಣ ಇಲ್ಲ ಎಂದು ನಾಗೇಶ ಹೇಳಿದ್ದಾರೆ. ಆಸ್ಪತ್ರೆಗೆ ನಾವೇ ಸಾಗಿಸುತ್ತೇವೆ, ಚಿಕಿತ್ಸೆಯನ್ನೂ ಕೊಡಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದಾಗ ಆಸ್ಪತ್ರೆಯಲ್ಲಿ ಉಪಚರಿಸಲು ಯಾರೂ ಜನರಿಲ್ಲ ಎಂದು ದಂಪತಿ ತಿಳಿಸಿದ್ದಾರೆ.
ಅಧಿಕಾರಿಗಳು ಸಾಧ್ಯವಿರುವ ರೀತಿಯಲ್ಲಿ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಕೊನೆಗೆ ನಾಗೇಶ, ತಾಯಿಯನ್ನು ಮನೆಯಲ್ಲಿಟ್ಟುಕೊಂಡೇ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವೃದ್ಧೆಯನ್ನು ಮನೆಯಲ್ಲಿರಲು ಒಪ್ಪಿದರು. ಎರಡು ದಿನಕ್ಕೊಮ್ಮೆ ತಾವು ಆಗಮಿಸಿ ಪರಿಶೀಲನೆ ನಡೆಸುವ ಎಚ್ಚರಿಕೆ ನೀಡಿ ತೆರಳಿದ್ದಾರೆ.
''ಮುಂದಕ್ಕೆ ಇಂತಹ ಪ್ರಕರಣ ಮರುಕಳಿಸಿದಂತೆ ತಾಯಿಯನ್ನು ನೋಡಿಕೊಳ್ಳಬೇಕು ಎನ್ನುವ ಎಚ್ಚರಿಕೆ ನೀಡಲಾಗಿದೆ, ಅಲ್ಲದೆ ಎರಡು ದಿನಕ್ಕೊಮ್ಮೆ ಹಿರಿಯ ನಾಗರಿಕರ ಸಹಾಯವಾಣಿಯ ಪ್ರತಿನಿಧಿಯನ್ನು ಪರಿಶೀಲನೆಗೆ ಕಳುಹಿಸಲಾಗುವುದು, ಕೆಲವು ದಿನ ನೋಡಿ ಪ್ರಕರಣ ಮರುಕಳಿಸಿದರೆ ಹಿರಿಯ ನಾಗರಿಕರ ಕಾಯ್ದೆಯಡಿ ಸುಮೊಟೋ ಕೇಸು ದಾಖಲಿಸುತ್ತೇವೆ''
- ಯಮುನಾ, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ.
ಪೊಲೀಸರ ನಿರ್ಲಕ್ಷ: ಸಾರ್ವಜನಿಕರು ನೀಡಿದ ಮಾಹಿತಿ ಪಡೆದು ನಾವು ಈ ಮನೆಗೆ ತೆರಳಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಗಮನ ಸೆಳೆದೆವು. ಆದರೆ ಆರಂಭದಲ್ಲಿ ಅವರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಬಳಿಕ ಡಿಸಿಯ ಗಮನಕ್ಕೆ ತಂದ ಬಳಿ ಅಧೀನ ಅಧಿಕಾರಿಗಳು ಸಹರಿಸಿದರು.
- ಯುಕೆ ಮುಹಮ್ಮದ್ ಮುಸ್ತಫಾ, ಅಧ್ಯಕ್ಷರು, ಮಾನವ ಹಕ್ಕು ಹೋರಾಟ ಸಮಿತಿ, ದ.ಕ. ಜಿಲ್ಲೆ
ನಾನು ತಾಯಿಯನ್ನು ಬಿಟ್ಟು ಹೋಗುವುದಿಲ್ಲ. ನನ್ನ ತಾಯಿಗಾಗಿ ಪತ್ನಿ ಗೀತಾ ಟೀಚರ್ ಕೆಲಸ ಬಿಟ್ಟಿದ್ದಾರೆ. ಚಿಕಿತ್ಸೆ ಕೊಡಿಸಲು ಹಣ ಇಲ್ಲ. ಕಷ್ಟದ ಜೀವನ ನಮ್ಮದು. ಹೇಳಿ ಹೋಗುವ ಅಂದರೆ ಅಕ್ಕಪಕ್ಕದವರು ಗಮನಿಸುವುದಿಲ್ಲ. ತುರ್ತು ಕೆಲಸ ಇದ್ದ ಕಾರಣ ಇಂದು ಹೋಗಿದ್ದೇವೆ.
-ನಾಗೇಶ್ ಶೆಟ್ಟಿಗಾರ್, ಸರಸ್ವತಿಯ ಪುತ್ರ







