ಕೋಲ್ಕತಾ:ಶಂಕಿತ ಉಗ್ರನಿಂದ ನ್ಯಾಯಾಧೀಶರತ್ತ ಶೂ ಎಸೆತ
ಕೋಲ್ಕತಾ,ಫೆ.5: ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿ ವಿಚಾರಣೆಯನ್ನು ಎದುರಿಸುತ್ತಿರುವ ಶಂಕಿತ ಉಗ್ರ ಅಬು ಮೂಸಾ ನ್ಯಾಯಾಧೀಶರತ್ತ ಶೂ ಎಸೆದ ಘಟನೆ ಮಂಗಳವಾರ ಕೋಲ್ಕತಾದ ಬ್ಯಾಂಕ್ಶಾಲ್ ನ್ಯಾಯಾಲಯದಲ್ಲಿ ನಡೆದಿದೆ.
ಶೂ ಎಸೆತದಿಂದ ನ್ಯಾಯಾಧೀಶ ಪ್ರಸೇನಜಿತ್ ಬಿಸ್ವಾಸ್ ಅವರು ತಪ್ಪಿಸಿಕೊಂಡರಾದರೂ ಅದು ಎನ್ಐಎ ವಕೀಲ ತಮಲ್ ಮುಖರ್ಜಿ ಅವರಿಗೆ ಬಡಿದಿತ್ತು. ಈ ದಾಳಿಯಿಂದ ತನಗೆ ಗಾಯವಾಗಿದೆ ಎಂದು ಮುಖರ್ಜಿ ಹೇಳಿದ್ದಾರೆ.
ಐಸಿಸ್ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ 2016ರಲ್ಲಿ ಬಂಧಿಸಲ್ಪಟ್ಟಿದ್ದ ಮೂಸಾ ನ್ಯಾಯಾಂಗ ಬಂಧನದಲ್ಲ್ಲಿದ್ದು,ಯುವಜನರ ಮೂಲಭೂತೀಕರಣದಲ್ಲಿ ಪಾತ್ರ ವಹಿಸಿದ್ದ ಆರೋಪದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ.
ಜೈಲಿನಲ್ಲಿ ಕೆಟ್ಟ ನಡವಳಿಕೆ ಮತ್ತು ಹಿಂಸಾ ಕೃತ್ಯಗಳ ದಾಖಲೆಯನ್ನು ಹೊಂದಿರುವ ಮೂಸಾ ಶೂ ಎಸೆಯುವ ಮುನ್ನ,ಮಾನವ ಮಾಡಿರುವ ಕಾನೂನುಗಳನ್ನು ತಾನು ನಂಬುವುದಿಲ್ಲ ಮತ್ತು ತನಗೆ ನ್ಯಾಯ ದೊರೆಯುವುದಿಲ್ಲ ಎಂದು ಕೂಗಿದ್ದ ಎಂದು ಮುಖರ್ಜಿ ತಿಳಿಸಿದರು.
2018ರಲ್ಲಿ ಮೂಸಾ ಜೈಲ್ ವಾರ್ಡನ್ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ.