ಭಾರತದಲ್ಲಿ ಈಗಲೂ ಪ್ರಜಾಪ್ರಭುತ್ವ ಇದೆಯೇ ?: ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ, ಫೆ. 5: ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿಯವರನ್ನು ವಶಕ್ಕೆ ತೆಗೆದುಕೊಂಡು 6 ತಿಂಗಳು ಕಳೆಯಿತು ಎಂದು ಹೇಳಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಭಾರತದಲ್ಲಿ ಈಗಲೂ ಪ್ರಜಾಪ್ರಭುತ್ವ ಇದೆಯೇ ಎಂದು ಪ್ರಶ್ನಿಸಿದ್ದಾರೆ ? ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ಕೇಂದ್ರ ಸರಕಾರ ಕಳೆದ ವರ್ಷ ಆಗಸ್ಟ್ನಲ್ಲಿ ರದ್ದುಗೊಳಿಸಿತ್ತು. ಅನಂತರ ಅಲ್ಲಿನ ಮುಖ್ಯವಾಹಿನಿಯ ರಾಜಕಾರಣಿಗಳಾದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರನ್ನು ಬಂಧನದಲ್ಲಿ ಇರಿಸಿತ್ತು. ಅಲ್ಲದೆ ರಾಜ್ಯವನ್ನು ಜಮ್ಮುಕಾಶ್ಮೀರ ಹಾಗೂ ಲಡಾಕ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. ಯಾವುದೇ ಆರೋಪ ಇಲ್ಲದೆ ಮಾಜಿ ಮುಖ್ಯಮಂತ್ರಿಯನ್ನು ಬಂಧನದಲ್ಲಿ ಇರಿಸಿ 6 ತಿಂಗಳು ಕಳೆಯಿತು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು. ಈ ಕ್ರಮ ಎಷ್ಟು ಕಾಲ ಮುಂದುವರಿಯಲಿದೆ ಎಂದು ನಾವು 6 ತಿಂಗಳ ಹಿಂದೆ ಪಶ್ನಿಸಿದ್ದೆವು. ಈಗ ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೇ ? ಇಲ್ಲವೇ ? ಎಂದು ಪ್ರಶ್ನಿಸುತ್ತಿದ್ದೇನೆ ಎಂದು ಅವರು ಹೇಳಿದರು.