ಕವಿಯಾದ ನನ್ನನ್ನೂ ಬಂಧಿಸಿ: ಬಸವರಾಜ ಸಬರದ ಸವಾಲು
► 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಕಲಬರಗಿ, ಫೆ.7: ಪ್ರಭುತ್ವದ ಜನವಿರೋಧಿ ನೀತಿಗಳ ವಿರುದ್ಧ ಕವಿತೆ ವಾಚಿಸಿದ್ದ ಸಿರಾಝ್ ಬಿಸರಳ್ಳಿ ಹಾಗೂ ರಾಜು ಬಕ್ಷಿ ಮೇಲೆ ಎಫ್ಐಆರ್ ಹಾಕವುದಾದರೆ ಕವಿಯಾದ ನನ್ನ ವಿರುದ್ಧವು ಎಫ್ಐಆರ್ ಹಾಕಿ ಬಂಧಿಸಿಯೆಂದು ಹಿರಿಯ ಕವಿ ಡಾ. ಬಸವರಾಜ ಸಬರದ ಸವಾಲು ಹಾಕಿದರು.
ಶುಕ್ರವಾರ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ ಕವಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಭುತ್ವದ ಅನೀತಿಗಳ ವಿರುದ್ಧ ಮಾತನಾಡುವವರನ್ನು ಬಂಧಿಸುವುದಾದರೆ ನಾನು ಸಿರಾಜ್ ಬಿಸರಳ್ಳಿ, ನಾನು ಕೆ. ನೀಲಾ, ನಾನು ಆರ್.ಕೆ. ಹುಡುಗಿ ಆಗಲು ಬಯಸುತ್ತೇನೆ. ಪ್ರಗತಿಪರರೆಲ್ಲರೂ ಇದರ ಸಾಲಿನಲ್ಲಿ ಇರುತ್ತಾರೆ. ಎಲ್ಲರನ್ನು ಬಂಧಿಸಿ ಎಂದರು.
ಪ್ರಭುತ್ವ ಕವಿಗಳಾದ ಸಿರಾಜ್ ಬಿಸರಳ್ಳಿ ಹಾಗೂ ರಾಜು ಬಕ್ಷಿ ಮುಸ್ಲಿಮ್ ಎನ್ನುವ ಕಾರಣಕ್ಕೆ ಎಫ್ಐಆರ್ ದಾಖಲಿಸಿ, ಬೆದರಿಸಲು ಪ್ರಯತ್ನಿಸಲಾಗಿದೆ. ಅದರಲ್ಲೂ ಕೋಮು ರಾಜಕಾರಣ ಮಾಡುತ್ತಿದೆ. ಇದು ಹೀಗೆಯೆ ಮುಂದುವರೆದರೆ, ದೇಶದಾದ್ಯಂತ ಕವಿಗಳು, ಪ್ರಗತಿಪರರೆಲ್ಲರೂ ಜೈಲು ಬರೋ ಚಳವಳಿ ನಡೆಸುವ ಮೂಲಕ ತಕ್ಕ ಪಾಠ ಕಲಿಸಲಿದ್ದೇವೆಂದು ಅವರು ಎಚ್ಚರಿಕೆ ನೀಡಿದರು.
ಇವತ್ತು ದೇಶದಲ್ಲಿ ಜಾಗತೀಕರಣ, ಸಿಎಎ, ಎನ್ಆರ್ ಸಿ, ಎನ್ಪಿಆರ್ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿವೆ. ಇದರ ಬಗ್ಗೆ ಕವಿತೆ ಬರೆಯದೆ ಇನ್ಯಾವ ವಿಷಯದ ಕುರಿತು ಕವಿತೆ ಬರೆಯಬೇಕು. ಪ್ರಭುತ್ವಕ್ಕೆ ಹೆದರಿಕೊಂಡು ಮೌನವಾದರೆ ಕೋಮುವಾದಿಗಳಿಗೂ ಕವಿಗಳಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲವೆಂದು ಅವರು ಹೇಳಿದರು.
ಕವಿಗೋಷ್ಟಿಯಲ್ಲಿ ಕವಿಗಳಾದ ಸತ್ಯಮಂಗಲ ಮಹಾದೇವ, ನೂತನ ದೊಶೆಟ್ಟಿ, ವಸಂತಕುಮಾರ್, ಅಶಾ ಕಡಪಟ್ಟಿ ಸೇರಿದಂತೆ ಹಲವರು ತಮ್ಮ ಕವತೆಯನ್ನು ವಾಚಿಸಿದರು. ಈ ವೇಳೆ ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶ ಮೂರ್ತಿ, ಕಸಾಪ ಅಧ್ಯಕ್ಷ ಮನು ಬಳಿಗಾರ್ ಮತ್ತಿತರರಿದ್ದರು.
ನಮಗೆ ಬಿಲ್ಲುಬಾಣ ಹಿಡಿದ ರಾಮ ಬೇಡ. ಬದಲಿಗೆ, ಶೂದ್ರ ತಪಸ್ವಿಯನ್ನು ನಮಿಸಿದ ರಾಮಬೇಕು. ತ್ರಿಶೂಲ ಹಿಡಿದ ಶಿವಬೇಡ, ಭಕ್ತರಿಗೆ ಸೇವೆ ಮಾಡಿದ ಶಿವಬೇಕು. ಹಿಂಸೆಯನ್ನು ಪ್ರಚೋದಿಸುವಂತಹ ಯಾರು ನಮಗೆ ಬೇಡ. ಶಾಂತಿ, ಸೌಹಾರ್ದತೆಯ ಚಿಂತನೆಯನ್ನು ಬೆಳೆಸುವಂತಹ ವ್ಯಕ್ತಿಗಳು ನಮಗೆ ಆದರ್ಶವಾಗಬೇಕು.
- ಬಸವರಾಜ ಸಬರದ, ಹಿರಿಯ ಕವಿ







