ಶಾಹೀನ್ ಸಂಸ್ಥೆ ವಿರುದ್ಧ 'ದೇಶದ್ರೋಹ' ಪ್ರಕರಣ: ರಾಜ್ಯ ಸರಕಾರದ ಕ್ರಮ ಖಂಡಿಸಿ ನಿರ್ಣಯ ಅಂಗೀಕಾರಕ್ಕೆ ಮನವಿ
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಫೆ. 7: ಬೀದರ್ನ ಶಾಹೀನ್ ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದ ಬಾಲಕಿ ತಾಯಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡಿದ ಮಹಾದ್ರೋಹ. ಹೀಗಾಗಿ ಸರಕಾರದ ಈ ಕ್ರಮವನ್ನು ಖಂಡಿಸಿ 85ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಕೋರಿ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರಿಗೆ, ಕಸಾಪ ಅಜೀವ ಸದಸ್ಯ ಎಚ್.ವಿ.ಅನಂತಸುಬ್ಬರಾವ್ ಪತ್ರ ಬರೆದಿದ್ದಾರೆ.
ಸರಕಾರವನ್ನು ಟೀಕಿಸುವುದೇ ಅಪರಾಧವಾದರೆ, ಅಂತಹ ಸರ್ವಾಧಿಕಾರಕ್ಕೆ ಸಾಹಿತ್ಯ ಸಮ್ಮೇಳನ ಧಿಕ್ಕಾರ ಹೇಳಬೇಕು. ಕನ್ನಡಿಗರ ಹಿರಿಯ ಸಂಸ್ಥೆಯಾದ ಸಾಹಿತ್ಯ ಪರಿಷತ್ ಸಮ್ಮೇಳನ ಸಂವಿಧಾನ ಉಳಿಸುವ, ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ವೇದಿಕೆಯಾಗಬೇಕೆಂದು ಅವರು ಮನವಿ ಮಾಡಿದ್ದಾರೆ.
ಸಂಸದರು ಸೇರಿ ಕೆಲ ನಾಯಕರು ಗಾಂಧಿ, ನೆಹರೂ ಬಗ್ಗೆ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ. ಸಂಸದರೊಬ್ಬರು ಸ್ವಾತಂತ್ರ ಹೋರಾಟವನ್ನೆ ನಾಟಕವೆಂದು ಜರಿದಿದ್ದಾರೆ. ಆ ಮೂಲಕ ಸ್ವಾತಂತ್ರಕ್ಕಾಗಿ ತ್ಯಾಗ ಮಾಡಿದ ದೇಶಪ್ರೇಮಿಗಳ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ಗಾಂಧಿ ಹಂತಕ ಗೋಡ್ಸೆ ವೈಭವೀಕರಿಸಿದವರನ್ನು ಸೆರೆಮನೆಗೆ ಕಳುಹಿಸಲು ಈ ಕಾನೂನುಗಳಿಗೆ ಶಕ್ತಿ ಇಲ್ಲವೆ ಎಂದು ಅನಂತಸುಬ್ಬರಾವ್ ಪ್ರಶ್ನಿಸಿದ್ದಾರೆ.