ಸಿಎಎ, ಎನ್ಆರ್ಸಿ ದೇಶಕ್ಕೆ ಕಂಟಕ: ಫಾ.ವಿಲಿಯಂ ಮಾರ್ಟಿಸ್
ಸಿಎಎ ವಿರುದ್ಧ ಅಡ್ಡೂರಿನಲ್ಲಿ ಪ್ರತಿಭಟನಾ ಸಭೆ

ಮಂಗಳೂರು, ಫೆ.7: ಕೇಂದ್ರ ಸರಕಾರದ ವಿವಾದಾತ್ಮಕ ಕಾಯ್ದೆಗಳಾದ ಸಿಎಎ, ಎನ್ಆರ್ಸಿ, ಎನ್ಪಿಆರ್ ಎಲ್ಲ ಧರ್ಮಗಳ ಜನರಿಗೂ ಸಮಸ್ಯೆ ನೀಡಲಿದ್ದು, ದೇಶಕ್ಕೆ ಕಂಟಕವಾಗಲಿವೆ ಎಂದು ಪ್ರಗತಿಪರ ಚಿಂತಕ ಉಡುಪಿಯ ಫಾ.ವಿಲಿಯಂ ಮಾರ್ಟಿಸ್ ತಿಳಿಸಿದ್ದಾರೆ.
ಬಜ್ಪೆ ಸಮೀಪದ ಅಡ್ಡೂರಿನಲ್ಲಿ ‘ಸಂವಿಧಾನ ಸಂರಕ್ಷಣಾ ಸಮಿತಿ’ಯು ಶುಕ್ರವಾರ ಹಮ್ಮಿಕೊಂಡಿದ್ದ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಉತ್ತರ ಭಾರತದಲ್ಲಿ ನಾಗಸಾಧುಗಳಾದ ಹಿಂದೂಗಳು ಇದರ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಈ ಕಂಟಕ ಕೇವಲ ಮುಸ್ಲಿಮರಿಗಲ್ಲ, ಹಿಂದೂಗಳು, ಕ್ರಿಶ್ಚಿಯನ್ನರ ಸಹಿತ ಎಲ್ಲ ಧರ್ಮಗಳಿಗೂ ಕಂಟಕ ತಂದೊಡ್ಡುವ ಸಂಗತಿ ಎಂದರು.
ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿ ಅಮೂಲ್ಯ ಮಾತನಾಡಿ, ರಾಷ್ಟ್ರಪ್ರೇಮವನ್ನು ಪೋಸ್ಟ್ ಕಾರ್ಡ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವುದಲ್ಲ. ಅದು ಹೃದಯದಲ್ಲಿರಬೇಕು. ಹೃದಯವೇ ಇಲ್ಲದ ಹಿಂದೂಗಳೆಂಬ ಮುಖವಾಡ ಹಾಕಿರುವವರು ಬಡ ಹಾಗೂ ಯುವ ಜನರಲ್ಲಿ ಗನ್ ಕೊಟ್ಟು, ಜಾತಿ ಮತ್ತು ದೇಶದ ಹೆಸರಲ್ಲಿ ಕಚ್ಚಾಡುವಂತೆ ಮಾಡುತ್ತಿದ್ದಾರೆ ಎಂದು ಸಂಘಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕ್ರಾಂತಿ ಪ್ರತಿಯೊಬ್ಬರ ಮನೆಯಿಂದ ಆರಂಭವಾಗಬೇಕು. ಪ್ರತಿ ಮನೆಯಲ್ಲೂ ಗಾಂಧೀಜಿ, ಭಗತ್ ಸಿಂಗ್ ಕಾಣುವಂತಾಗಬೇಕು. ಜೈ ಶ್ರೀ ರಾಮ್ ಎನ್ನುವಾಗ ‘ಜೈ ಸಂವಿಧಾನ್, ಜೈ ಭೀಮ್’ ಎನ್ನುವ ಮಂದಿ ಹುಟ್ಟಿ ಬರಬೇಕು. ಹಿಂದುತ್ವದ ಹೆಸರಿನಲ್ಲಿ ದ್ವೇಷ ರಾಜಕಾರಣ ಮಾಡುವ ಇವರಲ್ಲಿ ಆರೆಸ್ಸೆಸ್ ಮನಸ್ಥಿತಿ ಕೆಲಸ ಮಾಡುತ್ತಿದೆ ಎಂದರು.
ಮತ್ತೊಬ್ಬ ಚಿಂತಕ ಅಶ್ರಫ್ ಮಾಚಾರ್ ಮಾತನಾಡಿ, ಬೆದರಿಕೆಯೊಡ್ಡಿ ಈ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ದೇಶ ವಿಭಜನೆ ಗಾಗಿ ಜಾತಿಯ ಹೆಸರಲ್ಲಿ ಅಧಿಕಾರ ಹಂಚಿಕೆಯಾಗಿದೆ. ಮುಸ್ಲಿಮರು ಭಯೋತ್ಪಾದಕರು ಎಂದು ಬಿಂಬಿಸಿ, ಅವರನ್ನು ಪ್ರತ್ಯೇಕಗೊಳಿಸಿ, ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುವ ಪ್ರಯತ್ನ ಈ ಪೌರತ್ವ ಕಾಯ್ದೆಯಡಿ ಅಡಗಿದೆ ಎಂದರು.
ಆರೆಸ್ಸೆಸ್ ತಲೆಗಳು ಮನುವಾದದ ಹಿಂದೆ ಬಿದ್ದಿದ್ದಾರೆ. ಕೇಂದ್ರ ಸರಕಾರವು ಸಮಾನತೆ ಹೆಸರಲ್ಲಿ ದೇಶವನ್ನು ಒಡೆದು ಆಳುವ ನೀತಿಯತ್ತ ಒಲವು ತೋರಿಸುತ್ತಿದೆ. ಯಾವುದೇ ಕಾರಣಕ್ಕೂ ಭಾರತೀಯರಲ್ಲಿ ಪೌರತ್ವ ಕೇಳುವ ಸಾಹಸಕ್ಕೆ ಕೈಹಾಕಬೇಡಿ ಎಂದು ಗುಡುಗಿದರು.
ಮಹಿಳಾ ಚಿಂತಕಿ ನಜ್ಮಾ ನಝೀರ್ ಚಿಕ್ಕನೇರಳೆ ಮಾತನಾಡಿ, ಇದುವರೆಗೂ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಇಷ್ಟಪಡದ ಆರೆಸ್ಸೆಸ್, ಬಿಜೆಪಿ ಮೂಲಕ ಈ ದೇಶದ ನಾಗರಿಕರಲ್ಲಿ ಒಡಕು ಹುಟ್ಟಿಸುವಂತಹ ಕೆಲಸಗಳಿಗೆ ಪ್ರಚೋದನೆ ನೀಡುತ್ತಿದೆ. ಮೋದಿ ಸರಕಾರ ಮುಸ್ಲಿಮರಿಗೆ ಮುಂದಿನಿಂದ ಚೂರಿಯಿಂದ ಇರಿದರೆ, ಹಿಂದೂಗಳಿಗೆ ಹಿಂದಿನಿಂದ ಇರಿಯುತ್ತಿದೆ. ಮುಸ್ಲಿಂ ಮಹಿಳೆಯರು ವಿದ್ಯಾವಂತರಾಗಬೇಕು. ಇಂತಹ ಹೋರಾಟಗಳಿಗೆ ಶಿಕ್ಷಣ ಕ್ರಾಂತಿ ಇನ್ನಷ್ಟು ಬಲ ತುಂಬುತ್ತದೆ ಎಂದರು.
ಬೆಂಗಳೂರಿನ ಚಿಂತಕ ಭಾಸ್ಕರ್ ಪ್ರಸಾದ್ ಮಾತನಾಡಿ, ಆರೆಸ್ಸೆಸ್ ಮುಖಂಡರು ತನ್ನ ಬಳಗಕ್ಕೆ ತಮ್ಮ ಬೇಳೆ ಬೇಯಿಸಿಕೊಳ್ಳಬಹುದಾದ ಮಂದಿಯ ಕತೆಗಳನ್ನು ಮಾತ್ರ ಹೇಳುತ್ತಿದೆ. ಅವರು ಯಾವತ್ತೂ ಗಾಂಧೀಜಿ, ಸಂವಿಧಾನ, ಅಂಬೇಡ್ಕರರ ಕತೆ ಹೇಳುವುದಿಲ್ಲ. ಈಗಿನ ಬಿಜೆಪಿ ತನ್ನ ಬೆಂಬಲಕ್ಕೆ ನಿಂತವರನ್ನು ದೇಶಪ್ರೇಮಿಗಳು, ಹಿಂದೂಗಳೆಂದು ಹೇಳುತ್ತಿದೆ. ಆದರೆ ಈ ಮೂಲಕ ದೇಶದ ಜನತೆಯಲ್ಲಿ ಆತಂಕ ಮೂಡುತ್ತಿದೆ ಎಂದವರನ್ನು ಪ್ರತ್ಯೇಕವಾಗಿಡಲಾಗುತ್ತಿದೆ ಎಂದರು.
ಸುಫ್ಯಾನ್ ಸಖಾಫಿ ಮಾತನಾಡಿ, ಸಂವಿಧಾನ ಗಂಡಾಂತರದಲ್ಲಿದೆ. ನಾವು ಮುಸ್ಲಿಮರ ವಿರುದ್ಧ ಕೇಳಿ ಬಂದಿರುವ ಇತರ ಕೆಲವು ಗಂಭೀರ ವಿಚಾರ, ನಿಂದನೆಗಳ ವಿರುದ್ಧ ಹೋರಾಟ ನಡೆಸಬೇಕಿದ್ದರೂ, ಅದೆಲ್ಲವನ್ನೂ ಸಹಿಸಿಕೊಂಡಿದ್ದೇವೆ. ದೇಶದ ಪ್ರತಿಯೊಬ್ಬ ನಾಗರಿಕರ ಅಸ್ತಿತ್ವ ವನ್ನೇ ಪ್ರಶ್ನಿಸುವ ಪೌರತ್ವ ಕಾಯ್ದೆ ಎದುರಾದಾಗ ನಾವು ಪ್ರಶ್ನಿಸುತ್ತಿದ್ದೇವೆ. ಇದು ಎಲ್ಲರಿಗೂ ಸಮಸ್ಯೆಯಾಗಲಿದೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ರಾಜ್ಯಾಧ್ಯಕ್ಷ ಇಬ್ರಾಹೀಂ ಬಾತಿಷ್ ಕೋಡ್ಲಿಪೇಟೆ ಮಾತನಾಡಿದರು
ಅಡ್ಡೂರು ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಯು.ಪಿ. ಇಬ್ರಾಹೀಂ ಸ್ವಾಗತಿಸಿ, ಸಮಾವೇಶ ಮಹತ್ವ ತಿಳಿಸಿದರು. ಸಮಿತಿಯ ನೌಫಾಲ್ ಕೆಬಿಎಸ್ ಕಾರ್ಯಕ್ರಮ ನಿರೂಪಿಸಿದರು. ಅಸ್ತಾರ್ ಅಡ್ಡೂರು ವಂದಿಸಿದರು. ಫಾರೂಕ್ ಅಡ್ಡೂರು ಹಾಗೂ ನಜ್ಮಾ ನಝೀರ್ ತಂಡ ‘ಆಝಾದಿ’ ಘೋಷಣೆಗಳೊಂದಿಗೆ ನೆರೆದ ಸಭಿಕರಲ್ಲಿ ಪೌರತ್ವ ವಿರುದ್ಧ ಹೊಸ ಸಂಚಲನ ಮೂಡಿಸಿದರು.












