ದ.ಕ: ಲೋಕ ಅದಾಲತ್ ಮೂಲಕ 1558 ಪ್ರಕರಣಗಳು ಇತ್ಯರ್ಥ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ
5.7 ಕೋಟಿ ರೂ ಮೊತ್ತ ಪರಿಹಾರ
ಮಂಗಳೂರು, ಫೆ .8: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಶನಿವಾರ ಜಿಲ್ಲೆಯಲ್ಲಿ ನಡೆದ ಲೋಕ ಅದಾಲತ್ ಮೂಲಕ ಒಟ್ಟು 1558 ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು 5.7,03,001 ರೂ ಮೊತ್ತದ ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ನಡೆದ ಲೋಕ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಉಳಿದಿದ್ದ 1424 ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು 4,02,90,450 ರೂ ಪರಿಹಾರ ನೀಡಲು ತೀರ್ಮಾನಿಸಲಾಗಿದೆ .ಈ ಪೈಕಿ ಮೋಟಾರು ವಾಹನ ಪ್ರಕರಣಗಳ 75 ಪ್ರಕರಣಗಳಲ್ಲಿ 1,85,72,000 ರೂ. ಪರಿಹಾರ, ಸಿವಿಲ್ 93 ಪ್ರಕರಣಗಳಲ್ಲಿ 57,31,010ರೂ ಪರಿಹಾರ, ಕ್ರಿಮಿನಲ್ 1256 ಪ್ರಕರಣಗಳಲ್ಲಿ 1,59,87,440 ರೂ ಪರಿಹಾರ ನೀಡಲು ತೀರ್ಮಾನಿಸಿದೆ.
ಇತ್ಯರ್ಥವಾಗದೆ ಇದ್ದ ಬ್ಯಾಂಕ್ ಹಾಗೂ ಇತರ ಪ್ರಕರಣಗಳಲ್ಲಿ 134 ರ ಪೈಕಿ 1,68,12,551 ರೂ ಪರಿಹಾರ ನೀಡಲು ತೀರ್ಮಾನಿಸಿದೆ. ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರದ ಹಾಲಿ ವರ್ಷದ ಪ್ರಥಮ ಅದಾಲತ್ನಲ್ಲಿ ಒಟ್ಟು 1558 ಪ್ರಕರಣಗಳು ಇತ್ಯರ್ಥಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದಾಲತ್ನಲ್ಲಿ 600 ಪ್ರಕರಣಳು ಇತ್ಯರ್ಥ ವಾಗುವ ನಿರೀಕ್ಷೆ ಮಾಡಲಾಗಿತ್ತು. ಎ. 11, ಜುಲೈ 11, ಸೆ. 12, ಡಿ.12 ರಂದು ಮುಂದಿನ ನಾಲ್ಕು ಲೋಕ ಅದಾಲತ್ ನಡೆಯಲಿದೆ.
ಫೆ.8ರ ಅದಾಲತ್ಗೆ 6 ಸಾವಿರ ಪ್ರಕರಣಗಳಿಗೆ ಸಂಬಂಧಿಸಿದಂತೆ ನೊಟೀಸು ನೀಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 42 ನ್ಯಾಯಾಲಯಗಳ ಪೈಕಿ ಒಟ್ಟು 51 ಸಾವಿರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಕಳೆದ ವರ್ಷ ಒಟ್ಟು 4820 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿತ್ತು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.