ಸಮಾಜಕ್ಕೆ ನೀಡುವ ಅತ್ಯುತ್ತಮ ಸೇವೆಯೇ ರಕ್ತದಾನ: ವಿ.ಜಿ.ಶೆಟ್ಟಿ
ಶಿರ್ವ, ಫೆ.8: ವಿದ್ಯಾರ್ಥಿಗಳು ಜೀವನದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು. ಜೀವನವೇ ಒಂದು ಅವಕಾಶವಾಗಿದ್ದು, ವಿದ್ಯಾರ್ಥಿ ದೆಸೆ ಯಲ್ಲಿಯೇ ಕಲಿಕೆಯ ಜೊತೆಯಲ್ಲಿಯೇ ಸೇವಾ ಮನೋಭಾವ ರೂಢಿಸಿ ಕೊಳ್ಳಬೇಕು. ಜೀವವನ್ನು ರಕ್ಷಿಸುವ ರಕ್ತಕ್ಕೆ ಅಪಾರ ಬೇಡಿಕೆಯಿದ್ದು, ಸಮಾಜಕ್ಕೆ ನೀಡುವ ಅತ್ಯುತ್ತಮ ಸೇವೆಯೇ ರಕ್ತದಾನ ಎಂದು ಲಯನ್ಸ್ ಜಿಲ್ಲೆ 317 ಸಿ ಇದರ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ ಹೇಳಿದ್ದಾರೆ.
ಶಿರ್ವ ಸಂತಮೇರಿ ಕಾಲೇಜಿನ ಯೂತ್ ರೆಡ್ಕ್ರಾಸ್, ಎನ್ಎಸ್ಎಸ್, ರೋವರ್ಸ್, ರೇಂಜರ್ಸ್, ಸ್ಟೂಡೆಂಟ್ ಕೌನ್ಸಿಲ್, ಸ್ನಾತಕೋತ್ತರ ವಿಭಾಗ, ಐಕ್ಯೂಎಸಿ, ಲಯನ್ಸ್ ಕ್ಲಬ್ ಶಿರ್ವ, ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ 27ನೇ ವಾರ್ಷಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜನ್ ವಿ.ಎನ್. ವಹಿಸಿದ್ದರು. ಕೆಎಂಸಿ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾ.ದೀಪಿಕಾ ಸಿನ್ಹಾ ರಕ್ತದಾನದ ಕುರಿತು ಮಾಹಿತಿ ನೀಡಿದರು. ಡಾ.ಅಶ್ವಿನ್, ಲಯನ್ಸ್ ವಲಯಾಧ್ಯಕ್ಷ ಜುಲಿಯಾನ್ ರೊಡ್ರಿಗಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲ ನಾಧಿಕಾರಿ ಪ್ರೊ.ವಿಠಲ ನಾಯಕ್, ಯೂತ್ ರೆಡ್ಕ್ರಾಸ್ನ ನಿರ್ದೇಶಕ ಪ್ರೊ.ಶಮೀನ್ ಫೆರ್ನಾಂಡಿಸ್, ಲಯನ್ಸ್ ಕಾರ್ಯದರ್ಶಿ ಲ್ಯಾನ್ಸಿ ಕೋರ್ಡಾ, ಕೋಶಾಧಿಕಾರಿ ಸ್ಟ್ಯಾನಿ ಡಿಸೋಜ, ಉಪಸ್ಥಿತರಿದ್ದರು.
ಲಯನ್ಸ್ ಅಧ್ಯಕ್ಷ ಕ್ಯಾನ್ಯೂಟ್ ಮಥಾಯಸ್ ಸ್ವಾಗತಿಸಿದರು. ಡಾ.ಪ್ರಜ್ಞಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಪ್ರೊ.ಮೆಲ್ವಿನ್ ಕೆಸ್ತಲಿನೊ ವಂದಿಸಿದರು.