ಭಾಗವತ ದಿ.ನಗರ ಸುಬ್ರಹ್ಮಣ್ಯ ಆಚಾರ್ ಅಭಿಮಾನಿಗಳ ಬಳಗದಿಂದ ಯಕ್ಷ ಕಲಾವಿದನ ಬಡಕುಟುಂಬಕ್ಕೆ ನಿಧಿ ಸಂಗ್ರಹ
ಉಡುಪಿ, ಫೆ.8: ಇತ್ತೀಚೆಗೆ ಮಂಗಳೂರಿನಲ್ಲಿ ಅಕಾಲಿಕವಾಗಿ ಮರಣ ಹೊಂದಿದ ಬಡಗುತಿಟ್ಟು ಯಕ್ಷಗಾನದ ಹೆಸರಾಂತ ಭಾಗವತ ಹಾಗೂ ಉದಯೋನ್ಮುಖ ಕಲಾವಿದರಾದ ನಗರ ಸುಬ್ರಹ್ಮಣ್ಯ ಆಚಾರ್ ಅವರ ಬಡ ಕುಟುಂಬಕ್ಕೆ ಸಹಾಯ ಮಾಡಲು ಅವರ ಅಭಿಮಾನಿಗಳು ನಿರ್ಧರಿಸಿದ್ದು, ಇದಕ್ಕಾಗಿ ಭಾಗವತ ದಿ.ನಗರ ಸುಬ್ರಹ್ಮಣ್ಯ ಆಚಾರ್ ಅಭಿಮಾನಿ ಬಳಗವನ್ನು ರಚಿಸಿಕೊಂಡು ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಬಳಗದ ಅಧ್ಯಕ್ಷ, ಖ್ಯಾತ ವಕೀಲರಾದ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ ಈ ವಿಷಯ ತಿಳಿಸಿದರು. 43ರ ಹರೆಯದ ಆಚಾರ್ ಅವರ ಸಾವಿನ ಕುರಿತು ತಮಗೆ ಸಂಶಯವಿದ್ದು, ಈ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಬೇಕೆಂದು ಅಭಿಮಾನಿ ಬಳಗ ಒತ್ತಾಯಿಸುತ್ತದೆ ಎಂದರು.
ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಕಲಿತು ಸುಬ್ರಹ್ಮಣ್ಯ ಆಚಾರ್, ಅಲ್ಲಿ ಹಾಗೂ ಇಡಗುಂಜಿ ಯಕ್ಷಗಾನ ಕೇಂದ್ರದಲ್ಲಿ ಗುರುವಾಗಿ ಸೇವೆ ಸಲ್ಲಿಸಿದ್ದರು. ತನ್ನ 18ರ ಹರೆಯದಲ್ಲಿ ಗೋಳಿಗರಡಿ ಮೇಳದಲ್ಲಿ ಭಾಗವತರಾಗಿ ಕಲಾ ಜೀವನ ಆರಂಭಿಸಿದ ಅವರು ಬಳಿಕ ಕಮಲಶಿಲೆ ಮೇಳ ಹಾಗೂ ಮಂದಾರ್ತಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ‘ನಡುಮನೆ ಯಕ್ಷಗಾನ’ ಎಂಬ ಹೊಸ ಪ್ರಕಾರವನ್ನು ಯಕ್ಷಗಾನಕ್ಕೆ ಪರಿಚಯಿಸಿದವರೂ ಇವರಾಗಿದ್ದಾರೆ ಎಂದು ಹೆಗ್ಡೆ ತಿಳಿಸಿದರು.
ಉಡುಪಿಯ ಕೆಳಾರ್ಕಳಬೆಟ್ಟಿನವರಾದ ಆಚಾರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಲ್ಯಾಣಪುರದಲ್ಲಿ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ಅವರ ಇಬ್ಬರು ಮಕ್ಕಳು ಹಾಗೂ ಪತ್ನಿ ಇದೀಗ ಕುಟುಂಬದ ಆಧಾರಸ್ಥಂಭವನ್ನೇ ಕಳೆದುಕೊಂಡಿದ್ದಾರೆ. ಆಚಾರ್ ಕುಟುಂಬಕ್ಕೆ ಆಧಾರವಾಗಲು ಅವರ ಅಭಿಮಾನಿಗಳು ಸೇರಿ ದೊಡ್ಡಮೊತ್ತದ ನಿಧಿ ಸಂಗ್ರಹಿಸಲು ನಿರ್ಧರಿಸಿದ್ದು, ಇದಕ್ಕಾಗಿ ಮಂದಾರ್ತಿ ದೇವಸ್ಥಾನದಲ್ಲಿ ಸಭೆ ಸೇರಿ ಚರ್ಚಿಸಲಾಗಿದೆ ಎಂದು ಪೃಥ್ವಿರಾಜ ಹೆಗ್ಡೆ ತಿಳಿಸಿದರು.
ಮಂದಾರ್ತಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಧನಂಜಯ ಶೆಟ್ಟಿ ಬಳಗದ ಗೌರವಾಧ್ಯಕ್ಷರಾಗಿದ್ದು, ಮಂದಾರ್ತಿ ಮೇಳದ ಕಲಾವಿದರು, ಜಿಲ್ಲೆಯ ವಿವಿಧ ಯಕ್ಷ ಕಲಾವಿದರು, ಅಭಿಮಾನಿಗಳು, ಸಾರ್ವಜನಿಕರು ಸಮಿತಿಯಲ್ಲಿದ್ದಾರೆ. ಸಮಿತಿ ಬಳಗದ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆಯೊಂದನ್ನು ತೆರೆದಿದ್ದು, ಸಹಾಯಹಸ್ತ ಚಾಚಲು ಮುಂದಾಗುವವರು ಈ ಖಾತೆಗೆ ಹಣ ಹಾಕುವಂತೆ ಸೂಚಿಸಲಾಗಿದೆ.
ಮುಂದಿನ ಮೇ31ರವರೆಗೆ ಹಣ ಕಳುಹಿಸಲು ಅವಕಾಶವಿದ್ದು, ಅಂದು ಆಯೋಜಿಸುವ ಕಾರ್ಯಕ್ರಮದಲ್ಲಿ ಆಚಾರ್ ಕುಟುಂಬಕ್ಕೆ ಬ್ಯಾಂಕ್ ಠೇವಣಿ ಮೂಲಕ ನಿಧಿಯನ್ನು ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು. ಬಡಕುಟುಂಬಕ್ಕೆ ಸಹಾಯ ಮಾಡಲಿಚ್ಛಿಸುವವರು ಈ ಕೆಳಗಿನ ಖಾತೆಗೆ ನಿಧಿ ಕಳುಹಿಸುವಂತೆ ಅವರು ಮನವಿ ಮಾಡಿದರು.
ಖಾತೆಯ ವಿವರ: ‘ಭಾಗವತ ದಿವಂಗತ ನಗರ ಸುಬ್ರಹ್ಮಣ್ಯ ಆಚಾರ್ ಅಭಿಮಾನಿಗಳ ಬಳಗ, ಕಾರ್ಪೋರೇಷನ್ ಬ್ಯಾಂಕ್ ಇಂದ್ರಾಳಿ ಶಾಖೆ, ಉಳಿತಾಯ ಖಾತೆ ನಂ. 520101266351279, ಐಎಫ್ಎಸ್ಸಿ ಕೋಡ್: ಸಿಓಆರ್ಪಿ 0003087, ಎಂಐಸಿಆರ್ ಕೋಡ್:576017021.
ಪತ್ರಿಕಾಗೋಷ್ಠಿಯಲ್ಲಿ ಬಳಗದ ಪ್ರಧಾನ ಕಾರ್ಯದರ್ಶಿ ದಿನಕರ ನಡೂರು, ಕೋಶಾಧಿಕಾರಿ ರವಿ ಆರ್.ಆಚಾರ್ಯ, ಜೊತೆ ಕಾರ್ಯದರ್ಶಿ ವೌನೇಶ ಆಚಾರ್ಯ ಪರ್ಕಳ, ವಾಸು ಆಚಾರ್ ಉಪಸ್ಥಿತರಿದ್ದರು.







