ಫೆ.16ರಿಂದ ಪಾಂಬೂರು ಪರಿಚಯ ರಂಗೋತ್ಸವ
ಶಿರ್ವ, ಫೆ.10: ಪಾಂಬೂರು ಪರಿಚಯ ಸಂಸ್ಥೆಯ ವತಿಯಿಂದ ‘ಪರಿಚಯ ರಂಗೋತ್ಸವ-2020’ ಬಹುಭಾಷಾ ನಾಟಕ ಪ್ರದರ್ಶನವನ್ನು ಪಾಂಬೂರು ಹೋಲಿಕ್ರಾಸ್ ಚರ್ಚ್ ವಠಾರದಲ್ಲಿ ಫೆ.16ರಿಂದ ಫೆ.22ರವರೆಗೆ ಪ್ರತೀದಿನ ಸಂಜೆ ಗಂಟೆ 6:30ರಿಂದ ಹಮ್ಮಿಕೊಳ್ಳಲಾಗಿದೆ.
ಫೆ.16ರಂದು ಸಂಜೆ 6:30ಕ್ಕೆ ರಂಗೋತ್ಸವವನ್ನು ರಂಗಕರ್ಮಿ ಡಾ.ಶ್ರೀಪಾದ ಭಟ್ ಉದ್ಘಾಟಿಸಲಿರುವರು. ಹೋಲಿಕ್ರಾಸ್ ಚರ್ಚ್ನ ಧರ್ಮಗುರು ರೆ.ಫಾ. ಹೆನ್ರಿ ಮಸ್ಕರೇನ್ಹಸ್ ಆಶೀರ್ವಚನ ನೀಡಲಿರುವರು. ಪರಿಚಯದ ಗೌರವಾಧ್ಯಕ್ಷ ಡಾ.ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಲಿರುವರು. ನಂತರ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ಕಂಸಾಯಣ ಕನ್ನಡ ನಾಟಕ ಪ್ರದರ್ಶನ ಗೊಳ್ಳಲಿದೆ.
ಫೆ.17ರಂದು ಭೂಮಿಗೀತಾ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ ನೆತ್ತರ ಕಲ್ಯಾಣ ತುಳು ನಾಟಕ, 18ರಂದು ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ವಾಲಿ ವಧೆ ಕನ್ನಡ ನಾಟಕ, 19ರಂದು ಆಯನ ನಾಟಕದ ಮನೆ ಮಂಗಳೂರು ಇವರಿಂದ ದ್ವೀಪ ಕನ್ನಡ ನಾಟಕ, 20ರಂದು ಅಸ್ತಿತ್ವ ಮಂಗಳೂರು ಇವರಿಂದ ಹ್ಯಾಂಗರ್ಸ್ ಕೊಂಕಣಿ ನಾಟಕ, 21ರಂದು ಮಂದಾರ ಬೈಕಾಡಿ ಬ್ರಹ್ಮಾವರ ಇವರಿಂದ ಕೊಳ್ಳಿ ಕನ್ನಡ ನಾಟಕ ಪ್ರದರ್ಶನಗೊಳ್ಳಲಿವೆ.
ಫೆ.22ರಂದು ಸಂಜೆ 6:30ಕ್ಕೆ ಜರಗುವ ಸಮಾರೋಪ ಸಮಾರಂಭದಲ್ಲಿ ಕವಿ ವಿಲ್ಸನ್ ಕಟೀಲ್ ಭಾಗವಹಿಸಲಿರುವರು. ಬಳಿಕ ಲೋಗೋಸ್ ಥಿಯೇಟರ್ ಟ್ರೂಪ್ ಮಂಗಳೂರು ಇವರಿಂದ ನಾಗ್ಡಿ ಕೊಂಕಣಿ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.