ದ.ಕ.: ಪ್ರಾಕೃತಿಕ ವಿಕೋಪ ಪರಿಹಾರ ಬಾಕಿ; ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ
ಇಒ, ಪಿಡಿಒಗಳ ಸಭೆ ನಡೆಸಿ ಪರಿಶೀಲನೆ: ಸಿಇಒ
ಮಂಗಳೂರು, ಫೆ. 10: ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆ- ಪ್ರವಾಹದ ಸಂದರ್ಭ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಸರಕಾರದಿಂದ ಘೋಷಿಸಲ್ಪಟ್ಟ ಪರಿಹಾರ ಹಣ ಸಮರ್ಪಕವಾಗಿ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಎಂಬ ಅಸಮಾಧಾನ ಜಿಲ್ಲಾ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿಂದು ಸದಸ್ಯರಿಂದ ವ್ಯಕ್ತವಾಯಿತು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ವಿನೋದ್ ಕುಮಾರ್ ಅವರು ವಿಷಯ ಪ್ರಸ್ತಾಪಿಸಿ, ತಮ್ಮ ಕ್ಷೇತ್ರದ ತೋಕೂರು ಹಾಗೂ ಸಸಿಹಿತ್ಲು ಬಳಿ ಸಂಪೂರ್ಣ ಮನೆ ಹಾನಿಯಾಗಿದ್ದು ಪರಿಹಾರ ದೊರಕಿಲ್ಲ ಎಂದರು.
ಈ ಸಂದರ್ಭ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಮಾತನಾಡಿ, ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಂಬಂಧಿಸಿ ಮುಖ್ಯಮಂತ್ರಿಯವರು ಸಂಪೂರ್ಣ ಮನೆ ಹಾನಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದು, ಅದನ್ನು ವಿತರಿಸುವ ಕಾರ್ಯ ನಡೆಯುತ್ತಿದೆ. ಬಳಿಕ ಅಕ್ಟೋಬರ್, ನವೆಂಬರ್ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪರಿಹಾರ ಘೋಷಣೆಯಾಗಿಲ್ಲ. ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದರು.
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ದ.ಕ. ಜಿಲ್ಲೆಗೆ ಸಂಪೂರ್ಣ ಮನೆ ಹಾನಿಯಾಗಿರುವ ಕುರಿತಂತೆ ಒಟ್ಟು 5.56 ಕೋಟಿ ರೂ. ಮಂಜೂರಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕಚೆೀರಿ ಅಧಿಕಾರಿ ಮಾಹಿತಿ ನೀಡಿದರು.
ಸದಸ್ಯರಾದ ಜನಾರ್ದನ ಗೌಡ ಮಾತನಾಡಿ, ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪ್ರತಿ ಹಂತದಲ್ಲೂ ಪರಿಹಾರ ಹಣ ಫಲಾನುಭವಿಗೆ ಬಾಕಿ ಇದೆ. ಮನೆ ಪೂರ್ತಿ ಆದರೂ ಕೇವಲ 1 ಲಕ್ಷ ರೂ. ಮಾತ್ರ ಬಂದಿದೆ ಎಂದು ಸದಸ್ಯರಾದ ಎಂ.ಎಸ್. ಮುಹಮ್ಮದ್, ತುಂಗಪ್ಪ ಬಂಗೇರ, ಮವುತಾ ಗಟ್ಟಿ ಆಕ್ಷೇಪಿಸಿದರು.
ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ, ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ನೆರೆ ಪ್ರವಾಹಕ್ಕೆ ಸಂಬಂಧಿಸಿ ಪೂರ್ತಿ ಮನೆ ಹಾನಿ ಪರಿಹಾರ ಬಹುತೇಕವಾಗಿ ಫಲಾನುಭವಿಗಳಿಗೆ ದೊರಕಿದೆ. ಭಾಗಶ: ಹಾನಿ ಅಥವಾ ಬಳಿಕ ನಡೆದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪರಿಹಾರಕ್ಕೆ ಸಂಬಂಧಿಸಿ ಪರಿಹಾರವೇ ದೊರಕಿಲ್ಲ ಎಂಬ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ನಿರ್ದಿಷ್ಟ ಪ್ರಕರಣಗಳನು್ನ ಉಲ್ಲೇಖಿಸಿ ಚರ್ಚಿಸಬೇಕು ಎಂದರು.
ಈ ಬಗ್ಗೆ ಕೆಲಹೊತ್ತು ಸದನದಲ್ಲಿ ಸದಸ್ಯರೊಳಗೆ ಚರ್ಚೆ ನಡೆದು, ಕೊನೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ ಪ್ರತಿಕ್ರಿಯಿಸಿ, ಫಲಾನುಭವಿಗಳ ಪಟ್ಟಿ ಪಡೆದು ಇಒ, ಪಿಡಿಒಗಳ ಜತೆ ಸಭೆ ನಡೆಸಿ ಪರಿಶೀಲಿಸುವುದಾಗಿ ಸದಸ್ಯರಿಗೆ ಭರವಸೆ ನೀಡಿದರು.
ಸರಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಬ್ಯಾನರ್: ಆರೋಪ- ಪ್ರತ್ಯಾರೋಪ
ಬೆಳ್ತಂಗಡಿಯಲ್ಲಿ ಇತ್ತೀಚೆಗೆ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಪಕ್ಷದ ಬ್ಯಾನರ್ ಹಾಕಿರುವುದರಲ್ಲದೆ, ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರನ್ನೇ ಕಡೆಗಣಿಸಲಾಗಿದೆ ಎಂದು ಸದಸ್ಯ ಶಾಹುಲ್ ಹಮಿೀದ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸದಸ್ಯ ವಿನೋದ್ ಕುಮಾರ್ ಪ್ರತಿಕ್ರಿಯಿಸಿ ನಮಗೆ ಹಿಂದೆ ಈ ಅನುಭವ ಆಗಿದೆ. ನಮಗೆ ಕಲಿಸಿ ನೀವೇ ಕೊಟ್ಟಿದ್ದೀರಿ ಎಂದು ಹಾಸ್ಯವಾಡಿದರೆ, ಸದಸ್ಯ ಎಂ.ಎಸ್. ಮುಹಮ್ಮದ್ ಪ್ರತಿಕ್ರಿಯಿಸಿ, ಹಾಗಿದ್ದರೆ ನಾವು ಕಲಿಸಿದ್ದನ್ನು ನೀವು ಕಲಿಯುತ್ತೀರಿ ಎಂದಾಯಿತು ಎಂದು ಪ್ರತಿ ಹಾಸ್ಯ ಮಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಮಾತನಾಡಿ, ಉಳ್ಳಾಲದ ಒಂಭತ್ತುಕೆರೆಯಲ್ಲಿ ಸಚಿವರು ಶಿಲಾನ್ಯಾಸ ಮಾಡಿ ಹೋದ ಕಾಮಗಾರಿ ಸ್ಥಳದಲ್ಲಿ ಸ್ಥಳೀಯ ಶಾಸಕರ ಕಾರ್ಯಕರ್ತರು ಪಕ್ಷದ ಬೋರ್ಡ್ ಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಈ ಸಂದರ್ಭ ಶಾಹುಲ್ ಹಮೀದ್ರವರು ಮಾತನಾಡಿ, ಬೆಳ್ತಂಗಡಿಯಲ್ಲಿ ಈ ರೀತಿ ಸರಕಾರಿ ಕಾರ್ಯಕ್ರಮದಲ್ಲಿ ಈ ಹಿಂದೆ ಪಕ್ಷದ ಬ್ಯಾನರ್ ಹಾಕಿರುವ ಘಟನೆ ತೋರಿಸಿ ಕೊಟ್ಟರೆ ನಾನು ಜಿ.ಪಂ.ಗೆ ಕಾಲಿಡುವುದೇ ಇಲ್ಲ. ಈ ರೀತಿ ಜಿ.ಪಂ. ಸದಸ್ಯರಿಗೆ ಅವವಾನ ಮಾಡುವುದು ಬೇಡ ಎಂದರು.
ಈ ಬಗ್ಗೆ ಕೆಲ ಹೊತ್ತು ಚರ್ಚೆ ನಡೆದು, ಈ ಬಗ್ಗೆ ಮುಂದೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸುವ ಎಂದು ಸದಸ್ಯರು ಪ್ರತಿಕ್ರಿಯಿಸಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಮತಾ, ರವೀಂದ್ರ ಕಂಬಳಿ ಉಪಸ್ಥಿತರಿದ್ದರು.
ಶುದ್ಧ ಕುಡಿಯುವವ ನೀರಿನ ಘಟಕ: ಕೆಆರ್ಐಡಿಎಲ್ನಿಂದ ಮುಕ್ತಗೊಳಿಸಲು ನಿರ್ಣಯ
ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತಾದ ಚರ್ಚೆ ಇಂದಿನ ಜಿ.ಪಂ. ಸಾಮಾನ್ಯ ಸಭೆಯಲ್ಲೂ ನಡೆದು, ಘಟಕಗಳ ಸ್ಥಾಪನೆ ಜವಾಬ್ದಾರಿ ಯಿಂದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ಐಡಿಎಲ್) ವನ್ನು ಮುಕ್ತಗೊಳಿಸುವುದು ಮತ್ತು ಈ ಜವಾಬ್ದಾರಿ ಯನ್ನು ಸರಕಾರದ ನೀರು ಸರಬರಾಜು ಇಲಾಖೆಗೆ ಹಸ್ತಾಂತರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಕಾಮಗಾರಿ ಆರಂಭಿಸಿದ ಮತ್ತು ಶೆಡ್ ನಿರ್ಮಿಸಿದ ಘಟಕಗಳ ಜವಾಬ್ದಾರಿಯಿಂದ ಕೆಆರ್ಐಡಿಎಲ್ ಅನ್ನು ಈ ಹಂತದಲ್ಲೇ ಕೈಬಿಡುವುದು ಮತ್ತು ಹೊಸ ಯಾವುದೇ ಘಟಕಗಳ ಜವಾಬ್ದಾರಿಯನ್ನು ಆ ಸಂಸ್ಥೆಗೆ ಕೊಡದಂತೆ ತೀರ್ಮಾನಿಸಲಾಯಿತು. ಎಲ್ಲ ಶುದ್ಧ ನೀರಿನ ಘಟಕಗಳ ತಪಾಸಣೆ ನಡೆಸಲಾಗಿದ್ದು, 125 ಘಟಕಗಳಲ್ಲಿ 60 ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಗೊಂಡಿದ್ದು, ಕಾರ್ಯಾಚರಣೆಯಲ್ಲಿವೆ ಎಂದು ಜಿ.ಪಂ. ಯೋಜನಾ ನಿರ್ದೇಶಕರು ತಿಳಿಸಿದರು.
ಪರಿಶಿಷ್ಟ ಪಂಗಡದ ಅನುದಾನ ದುರ್ಬಳಕೆ: ಆರೋಪ
ತೋಕೂರು ಎಸ್ಕೋಡಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಅನುದಾನವನ್ನು ದುರ್ಬಳಕೆ ಮಾಡಲಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಅವರು ಆರೋಪಿಸಿದರು.
ಹಿಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಇಂಜಿನಿಯರಿಂಗ್ ಅಧಿಕಾರಿಗಳ ನೇತೃತ್ವದ ತಂಡ ರಚಿಸಿ ತನಿಖೆ ಮಾಡಲು ತಿಳಿಸಲಾಗಿತ್ತು. ಇದೀಗ ವರದಿಯ ಪ್ರಕಾರ, ಸದ್ರಿ ಕಾಮಗಾರಿ ಆರಂಭಿಸುವಾಗ ಗ್ರಾಮ ಪಂಚಾಯತ್ನಲ್ಲಿ ವರದಿ ಪಡೆಯಲಾಗಿತ್ತು. ಆ ಸಂದರ್ಭ ಅಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಕುಟುಂಬಗಳು ವಾಸ್ತವ್ಯ ಹೊಂದಿದ್ದವು. ಆದರೆ ಇದೀಗ ಅಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳು ಇಲ್ಲ ಎಂದು ತಿಳಿಸಲಾಗಿದೆ. ಇದರರ್ಥ ಏನು ಎಂದು ಪ್ರಶ್ನಿಸಿದ ಕಸ್ತೂರಿ ಪಂಜ, ಪರಿಶಿಷ್ಟ ಪಂಗಡದ ಅನುದಾನ ಮಂಜೂರಾತಿಗೆ ಕನಿಷ್ಠ ಆ ಪ್ರದೇಶದಲ್ಲಿ ಪಂಗಡದ ಐದು ಮನೆಗಳಾದರೂ ಇರಬೇಕೆಂಬ ನಿಯಮವಿದೆ. ವರದಿಯಲ್ಲಿ ಮನೆಯೇ ಇಲ್ಲವೆಂದಾಗ ಅನುದಾನ ಹೇಗೆ ಬಳಕೆ ಮಾಡಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.