ಮಾನವೀಯತೆ ಇಲ್ಲದೆ ಕುರುಡರಾದ ಪೊಲೀಸರು : ಶ್ಯಾಮಲಾ ಕುಂದರ್
ಪುತ್ತೂರು ಆ್ಯಸಿಡ್ ದಾಳಿ ಸಂತ್ರಸ್ತೆ ಭೇಟಿಯಾದ ಎನ್ಸಿಡಬ್ಲ್ಯೂ ಸದಸ್ಯೆ

ಮಂಗಳೂರು, ಫೆ.11: ಪುತ್ತೂರಿನಲ್ಲಿ ಮಹಿಳೆ-ಮಗುವಿನ ಮೇಲೆ ನಡೆದ ಆ್ಯಸಿಡ್ ದಾಳಿ ಖಂಡನೀಯ. ಸಂತ್ರಸ್ತೆ ಆ್ಯಸಿಡ್ ಉರಿ ತಾಳದೇ ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ನಡೆದುಕೊಂಡ ವರ್ತನೆ ಕ್ಷಮಿಸಲಾಗದು. ಅಂದು ಪೊಲೀಸರು ಮಾನವೀಯತೆ ಇಲ್ಲದ ಕುರುಡರಾಗಿದ್ದರು ಎಂದು ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯೂ) ಸದಸ್ಯೆ ಶ್ಯಾಮಲಾ ಕುಂದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ್ಯಸಿಡ್ ದಾಳಿ ಸಂತ್ರಸ್ತೆಯನ್ನು ಮಂಗಳವಾರ ಬೆಳಗ್ಗೆ ಭೇಟಿಯಾಗಿ ಸಮಸ್ಯೆ ಆಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಕಿಟಕಿಯಿಂದ ಆ್ಯಸಿಡ್ ದಾಳಿ ನಡೆಸಲಾಗಿದೆ. ಉರಿಯನ್ನು ತಾಳಲಾಗದೇ ಸಂತ್ರಸ್ತೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಸಂತ್ರಸ್ತರು ಅನ್ಯಾಯವಾದಾಗ, ರಕ್ಷಣೆ ನೀಡಲು ಕೂಡಲೇ 100 ನಂಬರ್ಗೆ ಕರೆ ಮಾಡುತ್ತಾರೆ. ಆದರೆ ಇಲ್ಲಿ ಪೊಲೀಸರಿಂದ ಕ್ಷಮಿಸಲಾರದಷ್ಟು ಕರ್ತವ್ಯ ಲೋಪವಾಗಿರುವುದು ಸತ್ಯ. ಸಂತ್ರಸ್ತೆ ಪೊಲೀಸರ ಮೇಲಿಟ್ಟ ಭರವಸೆ ಇಲ್ಲಿ ಹುಸಿಯಾಗಿದೆ ಎಂದು ಹೇಳಿದರು.
ಕರೆಗೆ ಸ್ಪಂದಿಸದಿದ್ದಾಗ ಮಹಿಳೆ ಘಟನೆ ಸ್ಥಳದಿಂದ ಮೂರು ಕಿ.ಮೀ. ದೂರದ ಪೊಲೀಸ್ ಠಾಣೆಗೆ ಉರಿ ತಾಳಿಕೊಂಡು ನಡೆದುಕೊಂಡೇ ತೆರಳಿದ್ದಾರೆ. ಈ ಸಂದರ್ಭ ದೂರನ್ನು ಲಿಖಿತವಾಗಿ ಬರೆದು ಕೊಡಲು ಸೂಚಿಸಿದ್ದರು. ‘ಉರಿ ತಾಳಲಾಗುತ್ತಿಲ್ಲ; ಬರೆದುಕೊಡಲಾಗಲ್ಲ’ ಎಂದು ಅಂಗಲಾಚುತ್ತಿದ್ದರೂ ಕೂಡಲೇ ಸ್ಪಂದಿಸಿಲ್ಲ. ಸಂತ್ರಸ್ತೆಯನ್ನು ಪೊಲೀಸರು ಆಸ್ಪತ್ರೆಗೆ ಕಳುಹಿಸಲು ವಾಹನ ವ್ಯವಸ್ಥೆ ಮಾಡಿ ಬಳಿಕ ದೂರು ಪಡೆಯಬಹುದಿತ್ತು. ಈ ವೇಳೆ ಪೊಲೀಸರ ಮಾನವೀಯತೆ ಮಣ್ಣಾಗಿತ್ತೇ ಎಂದು ಕಿಡಿ ಕಾರಿದರು.
ಪೊಲೀಸರ ಒತ್ತಡದ ಕೆಲಸದ ಬಗ್ಗೆ ಕನಿಕರವಿದೆ. ಮಾನವೀಯತೆ ಮೆರೆಯಬೇಕಾದ ಸಂದರ್ಭವೇ ಮನಸುಗಳು ಕಲ್ಲಾದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಸಂತ್ರಸ್ತೆಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಸಂತ್ರಸ್ತೆಗೆ ‘ಹೆಣ್ಣಾಗಿಯೇ ಹುಟ್ಟಿದ್ದು ತಪ್ಪು’ ಎನ್ನುವ ಭಾವನೆ ಬರುತ್ತಿದೆ. ಮಾನಸಿಕವಾಗಿ ಸ್ಥೈರ್ಯ ನೀಡಿದ್ದೇನೆ. ಸಂತ್ರಸ್ತೆ ಗುಣಮುಖರಾಗುತ್ತಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ನಿನ್ನ ಜತೆ ಇರಲಿದೆ ಎಂದು ಧೈರ್ಯ ಹೇಳಿದ್ದೇನೆ ಎಂಬುದಾಗಿ ಅವರು ತಿಳಿಸಿದರು.
ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಡಬ್ಲ್ಯೂನಿಂದ ಸುಮೊಟೊ ಕೇಸು ದಾಖಲಿಸಲಾಗಿದೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಗೆ ಸಲಹೆ-ಸೂಚನೆ ನೀಡಿದ್ದೇನೆ. ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಪತ್ರ ಬರೆದು, ಶೀಘ್ರ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದರು.
ಪ್ರಕರಣದ ತನಿಖೆ ಹಾಗೂ ಕರ್ತವ್ಯ ಲೋಪ ಎಸಗಿರುವ ಪೊಲೀಸರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರಿಂದ ಮಾಹಿತಿ ಪಡೆದು, ಸೂಚನೆ ನೀಡಲಾಗಿದೆ. ಒಂದು ತಿಂಗಳು ನಂತರ ಪ್ರಕರಣದ ಬೆಳವಣಿಗೆಯ ಮಾಹಿತಿಯನ್ನು ಪಡೆಯಲಿದ್ದೇನೆ ಎಂದರು.
ಮಹಿಳಾ ಸಬಲೀಕರಣವು ಕೇವಲ ಭಾಷಣ ಮಾಡಿದರೆ ಕಾರ್ಯರೂಪಕ್ಕೆ ಬರುವುದಿಲ್ಲ. ಆ್ಯಸಿಡ್ ದಾಳಿ ನಡೆಯುವ ಪ್ರಕರಣಗಳು ಬುದ್ಧಿವಂತರ ಜಿಲ್ಲೆಯಲ್ಲಿ ನಡೆಯುತ್ತಿರುವುದು ಖೇದಕರ. ಸಂತ್ರಸ್ತೆಗೆ ಆಕೆಯ ಕುಟುಂಬ ಹಾಗೂ ಪತಿಯ ಸಹೋದರನಿಂದಲೇ ಅನ್ಯಾಯ ಆಗಿದೆ. ಪತಿಯ ಸಹೋದರ ತನ್ನೊಂದಿಗೆ ನಿರಂತರವಾಗಿ ಕೆಟ್ಟದಾಗಿ ವರ್ತಿಸುತ್ತಿದ್ದ. ಪತಿ ವಿಯೋಗದ ನಂತರವೂ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ ಎಂಬುದಾಗಿ ಸಂತ್ರಸ್ತೆ ನೋವು ಹಂಚಿಕೊಂಡಿದ್ದಾರೆ ಎಂದರು.
ಭಾರತದಲ್ಲಿ ಸ್ತ್ರೀಯರನ್ನೇ ದೇವತಾಸ್ಥಾನದಲ್ಲಿಟ್ಟು ಪೂಜೆ ಮಾಡುತ್ತೇವೆ. ಆದರೆ ಆ ವ್ಯಕ್ತಿ ಸಂತ್ರಸ್ತೆಯನ್ನು ಹೆಸರು ಹೇಳದೇ ಅತಿಕೆಟ್ಟದಾಗಿ ಕರೆಯುತ್ತಿದ್ದ. ಇದನ್ನೆಲ್ಲ ಸಂತ್ರಸ್ತೆ ಸಹಿಸಿಕೊಂಡೇ ಇದ್ದಳು. ಬಳಿಕವೂ ಆತನಿಂದ ಕೃತ್ಯ ನಡೆದಿದೆ. ಇದನ್ನು ಸಮಾಜ ಒಪ್ಪುವುದಿಲ್ಲ ಎಂದರು.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎ.ಉಸ್ಮಾನ್, ವೆನ್ಲಾಕ್ ಆಸ್ಪತ್ರೆಯ ಸರ್ಜನ್ ಶಿವಪ್ರಕಾಶ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
‘ಸಂತ್ರಸ್ತೆಯ ಮಕ್ಕಳಿಗೆ ಶಿಕ್ಷಣ ಸೌಲಭ್ಯ’
ಆ್ಯಸಿಡ್ ದಾಳಿ ಸಂತ್ರಸ್ತೆಯ ಮೂವರು ಹೆಣ್ಣುಮಕ್ಕಳಿಗೆ ಶಿಕ್ಷಣ ಸಹಿತ ಎಲ್ಲ ಸೌಕರ್ಯ ಕಲ್ಪಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆ್ಯಸಿಡ್ ಎರಚಿ ರಾಕ್ಷಸೀಯ ವರ್ತನೆ ತೋರಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ ಸಹಕಾರ ನೀಡಲಾಗುವುದು. ಮಾನಸಿಕ ಸ್ಥೈರ್ಯ ತುಂಬಲು ಸಖೀ ಕೇಂದ್ರದಿಂದ ಕೌನ್ಸಿಲರ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆ ಸ್ವಾಭಿಮಾನದಿಂದ ಬದುಕುವಷ್ಟು ಸೌಲಭ್ಯವನ್ನು ನೀಡಲು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚುವರಿ ಪೊಲೀಸ್ ರಕ್ಷಣೆ ನೀಡಲೂ ನಿರ್ದೇಶಿಸಲಾಗಿದೆ ಎಂದು ಎನ್ಸಿಡಬ್ಲ್ಯೂ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.
ಸಂತ್ರಸ್ತೆಯೇ ಪೊಲೀಸ್ ಠಾಣೆ ಮೆಟ್ಟಿಲೇರಿ ತನಗಾದ ಅನ್ಯಾಯ ತಿಳಿಯಪಡಿಸಲು ಮುಂದಾಗಿದ್ದಾಳೆ. ಆಕೆಯ ಗಟ್ಟಿತನವನ್ನು ಮೆಚ್ಚಲೇಬೇಕು. ಆ್ಯಸಿಡ್ ಎರಚಿದ ವ್ಯಕ್ತಿ ಹಾಗೂ ಕರ್ತವ್ಯ ಲೋಪ ಎಸಗಿದ ಪೊಲೀಸರಿಗೂ ಶಿಕ್ಷೆಯಾಗಬೇಕು.
- ಶ್ಯಾಮಲಾ ಕುಂದರ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ











