ಮುಂಬೈ ಬಾರ್ ಮಾಲಕನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ವಶಿಷ್ಟ
ಹಿರಿಯಡ್ಕ, ಫೆ.11: ನವಿಮುಂಬೈಯ ಮಾಯಾ ಬಾರ್ ಮಾಲಕ ವಶಿಷ್ಠ ಸತ್ಯನಾರಾಯಣ ಯಾದವ್ (45) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿಯ ಹುಸಮನ್ಪುರ ನಿವಾಸಿ ಸುಮಿತ್ ಮಿಶ್ರ (23), ಸುರತ್ಕಲ್ ಚೊಕ್ಕಬೆಟ್ಟುವಿನ ಅಬ್ದುಲ್ ಶುಕೂರ್ ಯಾನೆ ಅದ್ದು (35), ಮಂಗಳೂರು ತೆಂಕಮಿಜಾರು ಗ್ರಾಮದ ಕಂದಾಲ್ಬೆಟ್ಟುವಿನ ಅವಿನಾಶ್ ಕರ್ಕೇರ (25), ಕರಂಬಳ್ಳಿ ಜನತಾ ಕಾಲನಿಯ ಮುಹಮ್ಮದ್ ಶರೀಫ್(32) ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಫೆ.4ರಂದು ಮುಂಬೈಯಿಂದ ಉಡುಪಿಗೆ ಬಂದಿದ್ದ ವಶಿಷ್ಟ ತನ್ನ ಗೆಳೆಯರೊಂದಿಗೆ ಉಡುಪಿಯ ಲಾಡ್ಜ್ವೊಂದರಲ್ಲಿ ತಂಗಿದ್ದರು. ಫೆ.9ರಂದು ರಾತ್ರಿ ಕಾರಿನಲ್ಲಿ ಹೋಗುತ್ತಿದ್ದಾಗ ಹಿಂಬದಿಯಲ್ಲಿ ಕುಳಿತಿದ್ದ ಮೂವರು ಆರೋಪಿಗಳು, ಕಾರಿನ ಎದುರು ಸೀಟಿನಲ್ಲಿ ಕುಳಿತಿದ್ದ ವಶಿಷ್ಟ ಸತ್ಯ ನಾರಾಯಣ ಯಾದವ್ ಅವರ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಬೆಳ್ಳಂಪಳ್ಳಿ ದೊಡ್ಡಣಗುಡ್ಡೆ ಎಂಬಲ್ಲಿ ಎಸೆದು ಪರಾರಿಯಾಗಿದ್ದರು. ಫೆ.10ರಂದು ಬೆಳಗ್ಗೆ ಮೃತದೇಹವು ಬೆಳ್ಳಂಪಳ್ಳಿಯ ಪೊದೆಯಲ್ಲಿ ಪತ್ತೆಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಹಾಗೂ ಹಿರಿಯಡ್ಕ ಎಸ್ಸೈ ಸುಧಾಕರ್ ತೋನ್ಸೆ ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದೆ. ಕೊಲೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬಂಧಿತರಲ್ಲಿ ಸುಮಿತ್ ಮಿಶ್ರ, ವಶಿಷ್ಠ ಅವರ ಮಾಯ ಬಾರ್ನ ಉದ್ಯೋಗಿಯಾಗಿದ್ದು, ಮೂರು ತಿಂಗಳು ಹಿಂದೆ ವಶಿಷ್ಟರೊಂದಿಗೆ ಜಗಳವಾಡಿ ಕೆಲಸ ಬಿಟ್ಟಿದ್ದನು. ಅದೇ ರೀತಿ ಉಳಿದ ಮೂವರು ಆರೋಪಿಗಳು ಎಕೆಎಂಎಸ್ ಬಸ್ನಲ್ಲಿ ಉದ್ಯೋಗಿಗಳಾಗಿದ್ದಾರೆ.
ಎಸ್ಪಿ ವಿಷ್ಣುವರ್ಧನ, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮತ್ತು ಉಡುಪಿ ಡಿವೈಎಸ್ಪಿ ಜೈ ಶಂಕರ್ ಮಾರ್ಗದರ್ಶನದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಮತ್ತು ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಸುಧಾಕರ ತೋನ್ಸೆ ಮತ್ತು ಎಎಸ್ಐ ಗಂಗಪ್ಪ, ಸಿಬ್ಬಂದಿಗಳಾದ ಜಯಂತ, ಯಶವಂತ್, ಸದಾಶಿವ, ರಘು, ದಿನೇಶ್, ಇಂದ್ರೇಶ್, ಬಸವರಾಜ್, ನಿತೀನ್, ರಾಕೇಶ್ ಶೆಟ್ಟಿ, ಭೀಮಪ್ಪ, ಆಂದ್ ಈ ಕಾರ್ಯಾಚರಣೆ ನಡೆಸಿದ್ದಾರೆ.







