ಟೋಲ್ದರ ಹೆಚ್ಚಳ ಹಿನ್ನೆಲೆ : ಖಾಸಗಿ ಎಕ್ಸ್ಪ್ರೆಸ್ ಬಸ್ಗಳ ಪ್ರಯಾಣ ದರ ಏರಿಕೆ
ಮಂಗಳೂರು : ಟೋಲ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ಮಂಗಳೂರು-ಉಡುಪಿ-ಕುಂದಾಪುರ ಹಾಗೂ ಮಂಗಳೂರು-ಪಡುಬಿದ್ರಿ-ಕಾರ್ಕಳ ಮಾರ್ಗದ ಖಾಸಗಿ ಎಕ್ಸ್ಪ್ರೆಸ್ ಬಸ್ಗಳಲ್ಲಿ ಪ್ರಯಾಣ ದರವನ್ನು ಸ್ಟೆಜ್ಗೆ 1 ರೂ.ನಂತೆ ಏರಿಕೆ ಮಾಡಲಾಗಿದೆ. ಇದು ರವಿವಾರದಿಂದಲೇ ಜಾರಿಗೆ ಬಂದಿದೆ.
ಟೋಲ್ ದರ ಹೆಚ್ಚಳವಾಗಿರುವುದರಿಂದ ಮಂಗಳೂರು-ಕಾರ್ಕಳ ಮಾರ್ಗದಲ್ಲಿ ಪ್ರತೀ ಬಸ್ಸಿಗೆ ದಿನಕ್ಕೆ 700 ರೂ. ಹಾಗೂ ಮಂಗಳೂರು-ಉಡುಪಿ-ಕುಂದಾಪುರ ಮಾರ್ಗದಲ್ಲಿ ಪ್ರತೀ ಬಸ್ಸಿಗೆ 1500 ರೂ. ಹೆಚ್ಚುವರಿ ಹೊರೆ ಬೀಳುತ್ತಿದೆ. ಹಾಗಾಗಿ ಪ್ರಯಾಣ ದರ ಏರಿಸುವುದು ಅನಿವಾರ್ಯವಾಗಿತ್ತು ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜ ವರ್ಮ ಬಲ್ಲಾಳ್ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಧಾನಿಗೆ ಮನವಿ: ಸಾರ್ವಜನಿಕ ಸೇವೆಯ ಬಸ್ಸುಗಳಿಗೆ ಟೋಲ್ ವಿನಾಯಿತಿ ನೀಡಬೇಕು ಅಥವಾ ಈ ಹಿಂದಿನಂತೆ ದಿನಕ್ಕೆ ಒಂದು ಬಾರಿ ಮಾತ್ರ ಟೋಲ್ ಶುಲ್ಕ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿ ರಿಯಾಯಿತಿ ತೋರಿಸುವಂತೆ ಪ್ರಧಾನಿ ಮೋದಿಗೆ ಬಸ್ ಮಾಲಕರ ಸಂಘದ ವತಿಯಿಂದ ಪತ್ರ ಬರೆಯಲಾಗಿದೆ. ಈ ಪತ್ರವನ್ನು ಪ್ರಧಾನಿ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಕಳುಹಿಸಲಾಗಿದೆ. ಆದರೆ ಎನ್ಎಚ್ಎಐ ಈ ತನಕ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಹಾಗಾಗಿ ಪ್ರಯಾಣ ದರ ಹೆಚ್ಚಿಸಲಾಗಿದೆ ಎಂದು ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.