ಪೇಸ್ಟ್ ರೂಪದಲ್ಲಿ ಅಕ್ರಮ ಚಿನ್ನ ಸಾಗಾಟ: ಓರ್ವ ಸೆರೆ
ಮಂಗಳೂರು, ಫೆ.11: ಪೇಸ್ಟ್ ರೂಪದ ಚಿನ್ನವನ್ನು ಗುದದ್ವಾರದ ಮೂಲಕ ಅಕ್ರಮ ಸಾಗಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಒಬ್ಬನನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ.
ಕಾಸರಗೋಡು ಮೂಲದ ಸೈಫುದ್ದೀನ್ ತೆಕ್ಕಿಲ್ ಪಝೆವಳಪ್ಪಿಲ್ (23) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 25.57 ಲಕ್ಷ ರೂ. ವೌಲ್ಯದ 633 ಗ್ರಾಂ ಚಿನ್ನ ವಶಪಡಿಸಲಾಗಿದೆ.
ಈತ ದುಬೈನಿಂದ ಏರ್ ಇಂಡಿಯಾ ವಿಮಾನದ ಮೂಲಕ ಮುಂಜಾನೆ 4:45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಚಲನವಲನದ ಕುರಿತು ಸಂಶಯಗೊಂಡ ಅಧಿಕಾರಿಗಳು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ ಚಿನ್ನ ಕಳ್ಳಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ.
ಗಮ್ನೊಂದಿಗೆ ಚಿನ್ನ ಬೆರೆಸಿದ್ದ: ಆರೋಪಿ ಸೈಫುದ್ದೀನ್ ಚಿನ್ನವನ್ನು ಗಮ್ನೊಂದಿಗೆ ಬೆರೆಸಿ ಪೇಸ್ಟ್ ರೂಪದಲ್ಲಿ 4 ಉಂಡೆಗಳನ್ನು ತಯಾರಿಸಿದ್ದ. ಅವುಗಳನ್ನು ಗುದನಾಳದಲ್ಲಿ ಇರಿಸಿ ಮಂಗಳೂರಿಗೆ ಬಂದಿಳಿದಿದ್ದ ಎಂದು ಕಸ್ಟಮ್ಸ್ ಇಲಾಖೆಯ ಜಂಟಿ ಆಯುಕ್ತ ಜೋನ್ನೆಸ್ ಜಾರ್ಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ಬಾರಿಗೆ ಸುದೀರ್ಘ ಕಸ್ಟಡಿ: ಆರೋಪಿಯನ್ನು 6ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.25ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದುವರೆಗೆ ಕಳ್ಳಸಾಗಾಟ ಪ್ರಕರಣಗಳಲ್ಲಿ ಇಷ್ಟು ಸುದೀರ್ಘ ಕಾಲ ಯಾವುದೇ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರಲಿಲ್ಲ. ಇಂತಹ ಪ್ರಕರಣಗಳ ಗಂಭೀರತೆಯನ್ನು ನ್ಯಾಯಾಲಯಕ್ಕೆ ವಿವರಿಸಲಾಗಿದ್ದು, ಇದೇ ಮೊದಲ ಬಾರಿಗೆ ಸುದೀರ್ಘ ಅವಧಿಯ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಜಾರ್ಜ್ ತಿಳಿಸಿದರು.
ಭಾರೀ ಸಿಗರೆಟ್ ವಶಕ್ಕೆ: ಇನ್ನೊಂದು ಪ್ರಕರಣದಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಿ ಸಿಗರೆಟ್ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಡನ್ಹಿಲ್ ಮತ್ತು ಗುಡಂಗ್ ಗರಮ್ ಸಿಗರೆಟ್ಗಳು ಇದಾಗಿದ್ದು, ತಲಾ 200 ಸಿಗರೆಟ್ಗಳಿರುವ 120 ಪ್ಯಾಕೆಟ್ಗಳು ಪತ್ತೆಯಾಗಿವೆ. ಈ ಪ್ರಕರಣ ತನಿಖೆ ಹಂತದಲ್ಲಿದೆ. ಪ್ರಸ್ತುತ ದಿನಗಳಲ್ಲಿ ಸಿಗರೆಟ್ ಕಳ್ಳಸಾಗಾಟ ಪ್ರಕರಣಗಳು ಹೆಚ್ಚುತ್ತಿವೆ ಎಂದು ಜಂಟಿ ಆಯುಕ್ತರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಸ್ಟಮ್ಸ್ ಸೂಪರಿಂಟೆಂಡೆಂಟ್ ಶ್ರೀನಾಥ್, ಇನ್ಸ್ಪೆಕ್ಟರ್ ಸಿನ್ಮಯ ಪ್ರಧಾನ್, ಡೆಪ್ಯುಟಿ ಕಮಿಷನರ್ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.