ಬೆಂಗಳೂರಿನ ಎನ್ಸಿಎಯಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ ಹಾರ್ದಿಕ್ ಪಾಂಡ್ಯ

ಹೊಸದಿಲ್ಲಿ, ಫೆ.12: ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಕ್ಟೋಬರ್ನಲ್ಲಿ ಇಂಗ್ಲೆಂಡ್ನಲ್ಲಿ ಬೆನ್ನುನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಟೀಮ್ ಇಂಡಿಯಾಕ್ಕೆ ಯಾವಾಗ ವಾಪಸಾಗುತ್ತಾರೆ ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ. ಪಾಂಡ್ಯಗೆ ಸಂಪೂರ್ಣ ಫಿಟ್ನೆಸ್ ಪಡೆಯಲು ಸ್ವಲ್ಪ ವಿಳಂಬವಾಗುತ್ತಿದೆ. ಇಂಗ್ಲೆಂಡ್ನಲ್ಲಿ ವೈದ್ಯರ ತಪಾಸಣೆಗೆ ಒಳಗಾಗಿ ಇತ್ತೀಚೆಗೆ ಬೆಂಗಳೂರಿಗೆ ವಾಪಸಾಗಿರುವ ಪಾಂಡ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್ಸಿಎ)ಯಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ.
ಪಾಂಡ್ಯ ಅಕಾಡಮಿಯಲ್ಲಿ ತನ್ನ ಬೌಲಿಂಗ್ನತ್ತ ಹೆಚ್ಚು ಶ್ರಮವಹಿಸುತ್ತಿದ್ದು, ಶೀಘ್ರವೇ ಆಯ್ಕೆಗೆ ಲಭ್ಯವಿರಲಿದ್ದಾರೆ. ಪಾಂಡ್ಯ ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಸರಣಿಯತ್ತ ಚಿತ್ತವಿರಿಸಿದ್ದಾರೆ. ಧರ್ಮಶಾಲಾದಲ್ಲಿ ನಡೆಯುವ ದ.ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ. ಎಲ್ಲ ಆಟಗಾರರು ಎನ್ಸಿಎಗೆ ರಿಪೋರ್ಟ್ ನೀಡಬೇಕೆಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಸ್ಪಷ್ಟಪಡಿಸಿದ್ದಾರೆ.
‘‘ನಿನ್ನೆ ನಾನು ರಾಹುಲ್ ದ್ರಾವಿಡ್ರನ್ನು ಭೇಟಿಯಾಗಿದ್ದೆ. ನಾವು ಪದ್ಧತಿಯೊಂದನ್ನು ಆರಂಭಿಸಿದ್ದೇವೆ. ಬೌಲರ್ಗಳು ಎನ್ಸಿಎಗೆ ಹೋಗಲೇಬೇಕು. ಯಾರೇ ಆಗಲಿ ಚಿಕಿತ್ಸೆ ಪಡೆದರೆ ಅವರು ಎನ್ಸಿಎಗೆ ಬರುವುದು ಕಡ್ಡಾಯ’’ ಎಂದು ಗಂಗುಲಿ ಹೇಳಿದರು.





