ಬಾರ್ಕೂರು: ನೇಷನಲ್ ಕಾಲೇಜಿನ ದಲಿತ ಉಪನ್ಯಾಸಕರಿಗೆ ದೌರ್ಜನ್ಯ
ಆರೋಪಿಗಳ ಬಂಧನಕ್ಕೆ ದಸಂಸ (ಅಂಬೇಡ್ಕರ್ವಾದ) ಆಗ್ರಹ
ಉಡುಪಿ, ಫೆ.12: ಬಾರಕೂರಿನ ನೇಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ದಲಿತ ಉಪನ್ಯಾಸಕರಾದ ವಿರೂಪಾಕ್ಷ ಎನ್. ಸುಂಕದ ಇವರಿಗೆ ಜೇಷ್ಠತೆ ಆಧಾರದಲ್ಲಿ ಪ್ರಾಂಶುಪಾಲ ಹುದ್ದೆ ನೀಡದೆ ಮಾನಸಿಕ ಹಿಂಸೆ, ಕಿರುಕುಳ, ದೌರ್ಜನ್ಯ ಎಸಗಿರುವ ಆರೋಪಿತರಾಗಿರುವ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಅಧ್ಯಕ್ಷರಾದ ಶಾಂತಾರಾಮ ಶೆಟ್ಟಿ, ಉಪಾಧ್ಯಕ್ಷರಾದ ವಿಠಲ ಶೆಟ್ಟಿ, ಜತೆ ಕಾರ್ಯದರ್ಶಿ ಶಂಕರ್, ಕೋಶಾಧಿಕಾರಿ ಕೃಷ್ಣ ಹಾಗೂ ಉಪನ್ಯಾಸಕರಾದ ಕೊಟ್ರಸ್ವಾಮಿ ಇವರ ಮೇಲೆ ಪ.ಜಾತಿ/ಪ.ಪಂಗಡದ ದೌರ್ಜನ್ಯದಡಿ ಪ್ರಕರಣ ದಾಖಲಾಗಿದ್ದು, ಇವರನ್ನು ತಕ್ಷಣ ಬಂಧಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆ.
ಫಿರ್ಯಾದಿದಾರರಾದ ವಿರೂಪಾಕ್ಷ ಎನ್. ಸುಂಕದ ಇವರು 1991ರಲ್ಲಿ ಬಾರಕೂರಿನ ನೇಷನಲ್ ಪದವಿಪೂರ್ವ ಕಾಲೇಜಿನಲ್ಲಿ ನೇಮಕಾತಿ ಹೊಂದಿದ್ದು, ಸಂಸ್ಥೆಯು ಸರಕಾರಿ ಅನುದಾನಕ್ಕೆ ಒಳಪಟ್ಟಿದೆ. ಇವರು ಈ ಕಾಲೇಜಿನಲ್ಲಿ ಜೇಷ್ಠತೆಯಲ್ಲಿದ್ದರೂ, ವಾಸುದೇವ ಶೆಟ್ಟಿ ಎಂಬವರನ್ನು ಪ್ರಾಂಶುಪಾಲರಾಗಿ ಮಾಡಿದರು. ವಾಸುದೇವ ಶೆಟ್ಟಿ ನಿವೃತ್ತಿಯಾದ ನಂತರ ಆರೋಪಿತರಾದ ಕೊಟ್ರಸ್ವಾಮಿ ಅವರನ್ನು ಪ್ರಭಾರ ಪ್ರಾಂಶುಪಾಲ ರಾಗಿ ನೇಮಿಸಿದರು ಎಂದು ಸುಂದರ ಮಾಸ್ತರ್ ಒತ್ತಾಯಿಸಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿದವರೆಂಬ ಒಂದೇ ಕಾರಣದಿಂದ ವಿರೂಪಾಕ್ಷ ಅವರನ್ನು ಪ್ರಾಂಶುಪಾಲರ ಹುದ್ದೆಗೆ ನೇಮಕ ಮಾಡದೆ, ಈ ಮೇಲಿನ ಆರೋಪಿಗಳು ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಓರ್ವ ದಲಿತ ಉಪನ್ಯಾಸಕರಿಗೆ ಅವಮಾನ, ವಂಚನೆ ಮಾಡಿದ್ದಾರೆ. ಆರೋಪಿತರೆಲ್ಲರೂ ಅಸಾಂವಿಧಾನಿಕವಾಗಿ ಹಾಗೂ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ 2006ರ ನಿಯಮ 5ಕ್ಕೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಡಳಿತ ಮಂಡಳಿ ನೀಡಿರುವ ಎಲ್ಲಾ ಪ್ರಸ್ತಾವನೆಗಳನ್ನು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಪರಿಶಿಷ್ಟ ಜಾತಿ, ಪಂಗಡದ ಆಯೋಗ, ಅಪರ ಕಾರ್ಯದರ್ಶಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ರಾಜ್ಯ ಉಚ್ಛ ನ್ಯಾಯಾಲಯ ತಿರಸ್ಕರಿಸಿದ್ದು, ವಿರೂಪಾಕ್ಷ ಸುಂಕದರವರಿಗೆ ಪ್ರಾಂಶುಪಾಲ ಹುದ್ದೆ ನೀಡುವಂತೆ ಆದೇಶ ನೀಡಿದ್ದರೂ, ದಲಿತ ವಿರೋಧಿ ನೀತಿಯಿಂದ ಇವರಿಗೆ ಮಾನಸಿಕ ಹಿಂಸೆ ಹಾಗೂ ಕಿರುಕುಳ, ದೌರ್ಜನ್ಯವೆಸಗಿರುವುದು ಖಂಡನೀಯವಾಗಿದೆ ಎಂದು ಸುಂದರ ಮಾಸ್ತರ್ ಹೇಳಿದ್ದಾರೆ.
ಇಂತಹ ಪ್ರಕರಣಗಳು ಜಿಲ್ಲೆಯ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸಬೇಕು ಹಾಗೂ ಈ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿ ಗಳನ್ನು ಕೂಡಲೇ ಬಂಧಿಸುವಂತೆ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ ಬಿರ್ತಿ, ಪರಮೇಶ್ವರ ಉಪ್ಪೂರು, ಭಾಸ್ಕರ ಮಾಸ್ತರ್, ಗೋಪಾಲಕೃಷ್ಣ ಕುಂದಾಪುರ, ಹೊನ್ನಪ್ಪ ನಕ್ರೆ, ಶ್ರೀಧರ ಕುಂಜಿಬೆಟ್ಟು, ಶ್ಯಾಮಸುಂದರ್ ತೆಕ್ಕಟ್ಟೆ, ತಾಲೂಕು ಸಂಚಾಲಕರಾದ ಶಂಕರದಾಸ್ ಉಡುಪಿ, ರಾಘವ ಕಾರ್ಕಳ, ಲೋಕೇಶ್ ಕಾಪು, ನಾಗರಾಜ ಕುಂದಾಪುರ, ದೇವಣ್ಣ ಹೆಬ್ರಿ ಹಾಗೂ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಒತ್ತಾಯಿಸಿದ್ದಾರೆ.