ಮಲೇಶ್ಯ ವಿರುದ್ಧ ಭಾರತಕ್ಕೆ 1-4 ಅಂತರದ ಸೋಲು
ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್
ಮನಿಲಾ (ಫಿಲಿಪೈನ್ಸ್)ಫೆ.13:ಗುರುವಾರ ಇಲ್ಲಿ ನಡೆದ ಏಶ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಬಿ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತದ ಪುರುಷರ ತಂಡವು ಮಲೇಶ್ಯತಂಡದ ವಿರುದ್ಧ 1-4ರಿಂದ ಸೋಲನುಭವಿಸಿದೆ.
ಡಬಲ್ಸ್ ತಜ್ಞ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರ ಅನುಪಸ್ಥಿತಿಯು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ.
ಕಾಲು ನೋವಿನಿಂದಾಗಿ ಸಾತ್ವಿಕ್ ಸ್ಪರ್ಧೆಯಿಂದ ದೂರ ಸರಿದಿದ್ದರು. ಭಾರತವು ಎಂ.ಆರ್. ಅರ್ಜುನ್ ಮತ್ತು ಚಿರಾಗ್ ಶೆಟ್ಟಿ ಮತ್ತು ಧ್ರುವ್ ಕಪಿಲಾ ಮತ್ತು ಲಕ್ಷ ಸೇನ್ ಕಣಕ್ಕಿಳಿಸಿತ್ತು. ಇದರಿಂದ ಯಾವುದೇ ಪ್ರಯೋಜನ ದೊರೆಯಲಿಲ್ಲ.
ಕಿಡಂಬಿ ಶ್ರೀಕಾಂತ್ ಮಾತ್ರ ಜಯ ಗಳಿಸಿದ್ದರು. ವಿಶ್ವದ ನಂ. 11 ಬಿ ಸಾಯಿ ಪ್ರಣೀತ್ ಮತ್ತು ಎಚ್.ಎಸ್.ಪ್ರಣಾಯ್ ಸೋಲು ಅನುಭವಿಸಿದರು.
ಈ ಸೋಲಿನ ನಂತರ ಭಾರತವು ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದೆ ಮತ್ತು ಇದೀಗ ಶುಕ್ರವಾರ ಕ್ವಾರ್ಟರ್ ಫೈನಲ್ನಲ್ಲಿ ಥಾಯ್ಲೆಂಡ್ ವಿರುದ್ಧ ಸೆಣಸಲಿದೆ.
ಆರಂಭಿಕ ಪಂದ್ಯದಲ್ಲಿ ದುರ್ಬಲ ಕಝಕಿಸ್ತಾನ್ ವಿರುದ್ಧ 4-1 ಅಂತರದ ಜಯಗಳಿಸಿದ ನಂತರ ಭಾರತವು ಮಲೇಶ್ಯದ ವಿರುದ್ಧ ಆಡಿದೆ. ಸಾತ್ವಿಕ್ ಅನುಪಸ್ಥಿತಿಯಲ್ಲಿ ಭಾರತಕ್ಕೆ ಉತ್ತಮ ಆರಂಭವನ್ನು ನೀಡುವ ಜವಾಬ್ದಾರಿ ಪ್ರಣೀತ್ ಅವರ ಮೇಲಿತ್ತು. ಆದರೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತ ಪ್ರಣಿತ್ ಆರಂಭದಲ್ಲಿ ಚೆನ್ನಾಗಿ ಆಡಿದರೂ ಬಳಿಕ 18-21 15-21 ಅಂತರದಲ್ಲಿ ಸೋತರು.
ಚಿರಾಗ್ ಮತ್ತು ಅರ್ಜುನ್ ಕೇವಲ 31 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ 18-21 15-21 ಅಂತರದಲ್ಲಿ ವಿಶ್ವದ ನಂ. 8 ಮಲೇಶ್ಯದ ಆ್ಯರನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ವಿರುದ್ಧ ಸೋಲು ಅನುಭವಿಸಿದರು. ವಿಶ್ವದ ಮಾಜಿ ನಂ.1 ಶ್ರೀಕಾಂತ್ ಅವರು 23 ವರ್ಷದ ಚೀಮ್ ಜೂನ್ ವೀ ವಿರುದ್ಧ 14-21 21-16 21-19ರಲ್ಲಿ ಜಯ ಗಳಿಸಿದರು.
ಆದಾಗ್ಯೂ, ತಾತ್ಕಾಲಿಕ ಜೋಡಿ ಧ್ರುವ ಮತ್ತು ಲಕ್ಷ ಅವರು ವಿಶ್ವದ ನಂ. 17 ಜೋಡಿ ಓಂಗ್ ಯೂ ಸಿನ್ ಮತ್ತು ಟಿಯೋ ಇ ಯಿ, ವಿರುದ್ಧ 27 ನಿಮಿಷಗಳಲ್ಲಿ 14-21 14-21ರಲ್ಲಿ ಶರಣಾದರು. ಏಕೆಂದರೆ ಮಲೇಶ್ಯ 3-1 ಮುನ್ನಡೆ ಸಾಧಿಸಿತು.
ಮೂರನೇ ಸಿಂಗಲ್ಸ್ನಲ್ಲಿ 2017ರ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ಮತ್ತು 2017ರ ಏಷ್ಯನ್ ಜೂನಿಯರ್ ಚಾಂಪಿಯನ್ ಲಿಯಾಂಗ್ ಜುನ್ ಹಾವೊ ವಿರುದ್ಧ ಪ್ರಣಯ್ 10-21, 15-21 ಅಂತರದಲ್ಲಿ ಸೋಲು ಅನುಭವಿಸಿದರು.