ಸಿವಿಲ್ ವಿಚಾರಗಳ ಬಗ್ಗೆ ಹೆಚ್ಚಿನ ಜ್ಞಾನ ಅಗತ್ಯ: ನ್ಯಾ.ಪಾಟೀಲ್
ಉಡುಪಿ, ಫೆ.15: ಸಿವಿಲ್ ದಾವೆಯ ಮೇಲ್ಮನವಿ, ಪರಿಷ್ಕರಣೆ ಮತ್ತು ಪುನರ್ ಪರಿಶೀಲನೆಯ ವಿಚಾರಗಳು ವಕೀಲರು ಹಾಗೂ ನ್ಯಾಯಾಧೀಶರ ದಿನನಿತ್ಯದ ಕೆಲಸದಲ್ಲಿ ಬರುತ್ತಿರುತ್ತವೆ. ಈ ಬಗ್ಗೆ ಎಷ್ಟು ತಿಳಿದು ಕೊಂಡರು ಕೂಡ ಕಡಿಮೆಯೇ. ಆದುದರಿಂದ ಕಾರ್ಯಾಗಾರದ ಮೂಲಕ ವಕೀಲರು ಈ ಕುರಿತು ಹೆಚ್ಚು ಜ್ಞಾನವನ್ನು ಪಡೆಯುವ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಪಿ.ಜಿ.ಎಂ.ಪಾಟೀಲ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಉಡುಪಿ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಶನಿವಾರ ಆಯೋಜಿಸಲಾದ ‘ಸಿವಿಲ್ ಮೇಲ್ಮನವಿ, ಪರಿಷ್ಕರಣೆ ಮತ್ತು ಪುನರ್ ಪರಿಶೀಲನೆಯ ವಿವಿಧ ಆಯಾಮಗಳು’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಮಾತನಾಡಿದರು. ಈ ಸಂದರ್ಭದಲ್ಲಿ 25ವರ್ಷಗಳ ನ್ಯಾಯಾಂಗ ಸೇವೆ ಪೂರೈಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಹಿರಿಯ ವಕೀಲ ಮಟ್ಟಾರು ರತ್ನಾಕರ ೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸನತ್ ಕುಮಾರ್ ಜೈನ್ ಉಪಸ್ಥಿತರಿ ದ್ದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ವಕೀಲೆ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.