ರಾಜ್ಯಪಾಲರ ಭಾಷಣ ಕಟ್ ಆ್ಯಂಡ್ ಪೇಸ್ಟ್: ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು, ಫೆ. 17: ‘ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ಕಟ್ ಆ್ಯಂಡ್ ಪೇಸ್ಟ್ ಭಾಷಣ. ಮೈತ್ರಿ ಸರಕಾರದ ಕಾರ್ಯಕ್ರಮ, ಸಾಧನೆಗಳ 20 ಪುಟಗಳ ಭಾಷಣ ಬರೆದುಕೊಟ್ಟು ರಾಜ್ಯಪಾಲರಿಂದ ಓದಿಸಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ರಾಜ್ಯಪಾಲರ ಭಾಷಣದ ಬಳಿಕ ಮಾತನಾಡಿದ ಅವರು, ನೆರೆ ಪೀಡಿತ ಪ್ರದೇಶಗಳ ಲಕ್ಷಾಂತರ ಕುಟುಂಬಗಳು ಇನ್ನೂ ಬೀದಿಯಲ್ಲಿವೆ. ಆದರೆ, ಈ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಹೇಳಿಲ್ಲ. ಕೇಂದ್ರ ಸರಕಾರ ಎಷ್ಟು ಮೊತ್ತದ ಅನುದಾನ ನೀಡಿದೆ ಎಂಬ ಬಗ್ಗೆಯೂ ಉಲ್ಲೇಖವಿಲ್ಲ ಎಂದು ದೂರಿದರು.
ಮೈತ್ರಿ ಸರಕಾರದಲ್ಲಿ ರೈತರ ಸಾಲಮನ್ನಾ ಮಾಡಿದ್ದಲ್ಲದೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಕೊಟ್ಟ ಬಳಿಕವೂ ಆರ್ಥಿಕವಾಗಿ ಸದೃಢವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ 6 ತಿಂಗಳಿಂದ ಮಾಡಿದ ಒಂದೇ ಒಂದು ಕೆಲಸದ ಬಗ್ಗೆಯೂ ರಾಜ್ಯಪಾಲದ ಉಲ್ಲೇಖ ಮಾಡಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
ಅಂಕಿ-ಸಂಖ್ಯೆಗಳನ್ನು ಇಡಬೇಕಾದ ಸರಕಾರ ಮುಚ್ಚಿಡುತ್ತಿದೆ. ಕೇಂದ್ರದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಬರಬೇಕಾದ ಹಣ ಎಷ್ಟು ಬಾಕಿ ಇದೆ. ಜಿಎಸ್ಟಿ ಪರಿಹಾರದ ಮೊತ್ತವೂ ಬಂದಿಲ್ಲ. ಹೀಗಾಗಿ ರಾಜ್ಯದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ. ಮೈತ್ರಿ ಸರಕಾರದ ಅವಧಿಯಿಂದ ಈ ಸರಕಾರಕ್ಕೆ ಈ ತರನಾದ ಪರಿಸ್ಥಿತಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸರಿಯಲ್ಲ: ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಸರಕಾರದ ನಡವಳಿಕೆ ಸರಿಯಲ್ಲ. ಅಧಿಕಾರಿಗಳು ಸರಕಾರದ ನಿಯಂತ್ರಣದಲ್ಲಿ ಇದ್ದಾರೋ ಇಲ್ಲವೋ, ನನಗೆ ಗೊತ್ತಿಲ್ಲ. ಗಂಭೀರ ಸ್ವರೂಪದ ಪ್ರಕರಣದಲ್ಲಿ ಠಾಣಾ ಜಾಮೀನು ನೀಡಿ ಆರೋಪಿಗಳನ್ನು ಬಿಟ್ಟು ಕಳುಹಿಸಲಾಗಿದೆ. ಆದರೆ, ನಾಟಕದ ನೆಪದಲ್ಲಿ ಪೋಷಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ದೊಣ್ಣೆ ಮಾರಕಾಸ್ತ್ರ ಅಲ್ಲವೇ?: ‘ರಾಮನಗರದಲ್ಲಿ ಪ್ಯಾಂಟ್ ಧರಿಸಿ, ದೊಣ್ಣೆ ಹಿಡಿದುಕೊಂಡು ಪಥಸಂಚಲನ ಮಾಡಿದ್ದಾರೆ. ಮುಸ್ಲಿಮರ ಬೀದಿಯಲ್ಲಿ ದೊಣ್ಣೆ ಹಿಡಿದುಕೊಂಡು ಪಥಸಂಚಲನ ಮಾಡಲು ಅವಕಾಶ ಕೊಟ್ಟವರು ಯಾರು? ಕಾನೂನಿನಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡಲು ಅವಕಾಶವಿದೆಯೇ? ದೊಣ್ಣೆ ಮಾರಕಾಸ್ತ್ರ ಅಲ್ಲವೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
‘ರಾಮನಗರ ರಾಮರಾಜ್ಯವಾಗೇ ಇರಬೇಕು. ಅದು ಯಾವುದೇ ಕಾರಣಕ್ಕೂ ರಾವಣನ ರಾಜ್ಯ ಆಗೋಕೆ ಬಿಡುವುದಿಲ್ಲ. ಬೇರೆಯವರು ದೊಣ್ಣೆ ಹಿಡಿದುಕೊಂಡು ಪ್ರತಿಭಟನೆ ಮಾಡಲು ಸರಕಾರ ಅವಕಾಶ ನೀಡುವುದೇ? ರಾಮನಗರಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಕೊಡುಗೆ ಏನು? ಕಪಾಲ ಬೆಟ್ಟದ ನೆಪದಲ್ಲಿ ರಾಮನಗರದಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆಂದು ಎಚ್ಡಿಕೆ ವಾಗ್ದಾಳಿ ನಡೆಸಿದರು.







