ಕಂಬಳ ಓಟಗಾರ ಶ್ರೀನಿವಾಸ ಗೌಡಗೆ ಮುಖ್ಯಮಂತ್ರಿಯಿಂದ ಸನ್ಮಾನ

ಬೆಂಗಳೂರು, ಫೆ.17: ಕಂಬಳ ಕ್ರೀಡೆಯಲ್ಲಿ ಅತ್ಯಂತ ವೇಗವಾಗಿ ಓಡಿ, ನಾಡಿನ ಗಮನ ಸೆಳೆದ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀನಿವಾಸಗೌಡರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಅಪರಾಹ್ನ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸನ್ಮಾನಿಸಿದರು.
ಕಂಬಳ ಕ್ರೀಡೆಯಲ್ಲಿ ಅತ್ಯಂತ ವೇಗವಾಗಿ ಓಡುವ ಮೂಲಕ ಶ್ರೀನಿವಾಸ ಗೌಡ ನಾಡಿನ ಗಮನ ಸೆಳೆದಿದ್ದಾರೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ, ಕ್ರೀಡಾ ಲೋಕದಲ್ಲಿ ಬೆಳೆಯಲು ವಿಪುಲ ಅವಕಾಶಗಳನ್ನು ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಸರಕಾರವೂ ಮುಂದೆ ಬಂದಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿ ಹೇಳಿದರು.
ಕೋಣಗಳ ಜೊತೆ 146 ಮೀಟರ್ ಓಟವನ್ನು 13.68 ಸೆಕೆಂಡುಗಳಲ್ಲಿ ಓಡಿ ದಾಖಲೆ ಸ್ಥಾಪಿಸಿದ ಶ್ರೀನಿವಾಸಗೌಡ ಅವರ ಸಾಧನೆ ಅತ್ಯಂತ ಸಂತಸದ ವಿಷಯವಾಗಿದೆ. ಇದರಿಂದ ಜಾನಪದ ಕ್ರೀಡೆ ಎನಿಸಿರುವ ಕಂಬಳಕ್ಕೆ ಜಗತ್ತಿನಾದ್ಯಂತ ಮನ್ನಣೆ ದೊರೆತಂತಾಗಿದೆ ಎಂದು ಯಡಿಯೂರಪ್ಪ ಬಣ್ಣಿಸಿದರು. ಅಲ್ಲದೆ, ಕಂಬಳ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಶ್ರೀನಿವಾಸ ಗೌಡ ಇನ್ನು ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದು ಮುಖ್ಯಮಂತ್ರಿ ಶುಭ ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಸಿ.ಟಿ. ರವಿ ಮಾತನಾಡಿ, ಶ್ರೀನಿವಾಸಗೌಡ ಇಚ್ಫಿಸಿದಲ್ಲಿ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುವನ್ನಾಗಿ ತರಬೇತಿ ನೀಡುವಲ್ಲಿ ರಾಜ್ಯ ಸರಕಾರವೇ ಎಲ್ಲ ಜವಾಬ್ದಾರಿ ನಿರ್ವಹಿಸಲು ಸಿದ್ಧವಿದೆ. ಅವರಿಗೆ ಕ್ರೀಡೆಗಳಲ್ಲಿ ಭಾಗವಹಿಸುವ ಅರ್ಹತಾ ಪರೀಕ್ಷೆಯನ್ನು ನಡೆಸಿ ಅದರಲ್ಲಿ ಅವರು ತೇರ್ಗಡೆ ಹೊಂದಿದಲ್ಲಿ ಸರಕಾರವೆ ಅವರ ತರಬೇತಿ ವೆಚ್ಚವನ್ನು ಭರಿಸಲಿದೆ ಎಂದು ವಿವರಿಸಿದರು.
ಪ್ರಸಕ್ತ ತಾವು ಒಪ್ಪಿಕೊಂಡಿರುವ ಕಂಬಳಗಳನ್ನು ಪೂರ್ಣಗೊಳಿಸಿ ಮಾ.10ರ ನಂತರ ತಮ್ಮ ಕ್ರೀಡಾ ಇಲಾಖೆ ನಡೆಸುವ ಅರ್ಹತಾ ಪರೀಕ್ಷೆಗೆ ಹಾಜರಾಗಲು ಶ್ರೀನಿವಾಸಗೌಡ ಸಮ್ಮತಿಸಿದ್ದಾರೆ. ಅಲ್ಲದೆ, ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ. ಈ ಬಗ್ಗೆ ಸರಕಾರ ಚಿಂತಿಸಲಿದೆ ಎಂದು ಅವರು ಹೇಳಿದರು.
ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರೆಬೈಲ್ ಶಿವರಾಂ ಹೆಬ್ಬಾರ್ ಮಾತನಾಡಿ, ಶ್ರೀನಿವಾಸಗೌಡ ಅವರು ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ನೀಡುವ ಗುರುತಿನ ಚೀಟಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರ ಈ ಸಾಧನೆಯನ್ನು ಪರಿಗಣಿಸಿ ಕಾರ್ಮಿಕ ಇಲಾಖೆ ಮೂರು ಲಕ್ಷ ರೂ.ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದೆ ಎಂದು ತಿಳಿಸಿದರು.
ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ಯಾಪ್ಟನ್ ಅಜಯ್ ಕುಮಾರ್ ಬಾಲ್ ಮಾತನಾಡಿ, ದೇಶದ ಗಮನ ಸೆಳೆದಿರುವ ಶ್ರೀನಿವಾಸ ಗೌಡ ಅವರಿಗೆ ತರಬೇತಿ ನೀಡಿ ರಾಷ್ಟ್ರಮಟ್ಟದ ಕ್ರೀಡಾಪಟುವನ್ನಾಗಿ ರೂಪಿಸಲು ಕ್ರೀಡಾ ಪ್ರಾಧಿಕಾರ ಉತ್ಸುಕವಾಗಿದೆ. ಶ್ರೀನಿವಾಸಗೌಡ ಈಗಾಗಲೇ ಒಪ್ಪಿಕೊಂಡಿರುವ ಕಂಬಳಗಳ ನಂತರ ಪ್ರಾಧಿಕಾರವನ್ನು ಸಂಪರ್ಕಿಸಿದ್ದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲು ತಾವು ಸಂತೋಷದಿಂದ ನಿರೀಕ್ಷಿಸುವುದಾಗಿ ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಗೌಡ, ಸರಕಾರದ ಗೌರವ ತಮಗೆ ಅತ್ಯಂತ ಸಂತಸ ತಂದಿದ್ದು, ಸರಕಾರದ ಈ ನಿಲುವಿಗೆ ಧನ್ಯವಾದವನ್ನು ಅರ್ಪಿಸಿದರು. ಇದರಿಂದ ಹೊರಗಿನ ಜಗತ್ತಿಗೆ ಕಂಬಳವನ್ನು ಪರಿಚಯಿಸಿದಂತಾಗಿದೆ. ಈ ಸಾಧನೆಗೆ ತಮ್ಮ ಜೊತೆಗೆ ಓಡಿದ ಕೋಣಗಳು ಹಾಗೂ ಅದರ ಮಾಲಕರು ಕಾರಣವಾಗಿದ್ದು ಅವರಿಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಿದರು.
ಕಳೆದ ಒಂದು ತಿಂಗಳಲ್ಲಿ ಹನ್ನೆರಡು ಕಂಬಳ ಕ್ರೀಡಾಕೂಟಗಳಲ್ಲಿ 35ಕ್ಕೂ ಹೆಚ್ಚು ಪದಕಗಳನ್ನು ವಿವಿಧ ನಾಲ್ಕು ವಿಭಾಗಗಳಲ್ಲಿ ಪಡೆದಿದ್ದು, ಇನ್ನೂ ಮೂರೂ ಕಂಬಳ ಪಂದ್ಯಗಳು ಬಾಕಿ ಇದೆ. ಅದರಲ್ಲಿಯೂ ಕೂಡಾ ಗೆಲ್ಲುವ ಆತ್ಮವಿಶ್ವಾಸವಿದೆ ಎಂದು ಶ್ರೀನಿವಾಸ ಗೌಡ ತಿಳಿಸಿದರು.
ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರಕಾರದ ಕಾರ್ಯದರ್ಶಿ ಪಿ.ಮಣಿವಣ್ಣನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಕಂಬಳ ಸಂರಕ್ಷಣೆ ಮತ್ತು ತರಬೇತಿ ಅಕಾಡೆಮಿಯ ಗುಣಪಾಲ್ ಕದಂಬ ಒಳಗೊಂಡಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಖಾಲಿ ಲಕೋಟೆ ಅಲ್ಲ ! ಅಭಿನಂದನಾ ಪತ್ರ ಇತ್ತು !!
ಶ್ರೀನಿವಾಸ ಗೌಡ ಅವರನ್ನು ಇಂದು ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸನ್ಮಾನಿಸಿದ ಸಂದರ್ಭದಲ್ಲಿ ಕಾರ್ಮಿಕ ಸಚಿವರು ನೀಡಿದ ಲಕೋಟೆಯಲ್ಲಿ ಮೂರು ಲಕ್ಷ ರೂ. ನೀಡುವ ಘೋಷಣೆಯನ್ನು ಒಳಗೊಂಡ ಅಭಿನಂದನಾ ಪತ್ರ ಇತ್ತು. ಅಲ್ಲದೆ, ಕಾರ್ಮಿಕ ಸಚಿವರ ಆಶಯದ ಬೆನ್ನಲ್ಲೇ, ಪತ್ರ ನೀಡಿದ ಒಂದು ತಾಸಿನೊಳಗೇ ಮೂರು ಲಕ್ಷ ರೂ ಚೆಕ್ ವಿತರಿಸಲಾಯಿತುಡಿ. ಪಿ. ಮುರಳೀಧರ್, ಉಪ ನಿರ್ದೇಶಕರು (ವಾರ್ತೆ )







