ನಿತೀಶ್ ಕುಮಾರ್ ಗುರಿಯಾಗಿಸಿ ‘ಬಾತ್ ಬಿಹಾರ್ ಕಿ’ ಅಭಿಯಾನ ಆರಂಭಿಸಿದ ಪ್ರಶಾಂತ್ ಕಿಶೋರ್
ಹೊಸದಿಲ್ಲಿ, ಫೆ.18: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮಂಗಳವಾರ ‘ಬಾತ್ ಬಿಹಾರ್ ಕಿ'ಅಭಿಯಾನ ಆರಂಭಿಸಿದ್ದಾರೆ. ಬಿಹಾರ ದೇಶದ 10 ಶ್ರೇಷ್ಠ ರಾಜ್ಯಗಳಲ್ಲಿ ಒಂದಾಗಿಸುವ ನಿಟ್ಟಿನಲ್ಲಿ ನಾನು ಕಾರ್ಯಪ್ರವೃತ್ತನಾಗುವೆ ಎಂದು ಘೋಷಿಸಿದ್ದಾರೆ.
ನಿತೀಶ್ ಕುಮಾರ್ರನ್ನು ಗುರಿಯಾಗಿಸಿದ ಕಿಶೋರ್,‘‘ಜೆಡಿಯುನ ಸೈದ್ದಾಂತಿಕ ನಿಲುವು ಮುಖ್ಯಮಂತ್ರಿಯೊಂದಿಗೆ ಹಿತಾಸಕ್ತಿ ಸಂಘರ್ಷಕ್ಕೆ ಮುಖ್ಯ ಕಾರಣ. ಫೆಬ್ರವರಿ 20ರಿಂದ ತನ್ನ ಅಭಿಯಾನವನ್ನು ಆರಂಭಿಸುತ್ತೇನೆ. ಬಿಹಾರದಲ್ಲಿ ಹೊಸ ನಾಯಕತ್ವವನ್ನು ಬಯಸುವ ಜನರನ್ನು ತಲುಪುತ್ತೇನೆ’’ ಎಂದರು.
"ನಿತೀಶ್ಕುಮಾರ್ ಜೊತೆಗಿನ ನನ್ನ ಸಂಬಂಧ ಸಂಪೂರ್ಣವಾಗಿ ರಾಜಕೀಯವಾಗಿರಲಿಲ್ಲ. ಅವರು ನನ್ನನ್ನು ಮಗನಂತೆ ನೋಡಿಕೊಂಡಿದ್ದರು. ನನಗೆ ಅವರ ಮೇಲೆ ಭಾರೀ ಗೌರವವಿದೆ. ಅವರ ನಿರ್ಧಾರವನ್ನು ನಾನು ಪ್ರಶ್ನಿಸುವುದಿಲ್ಲ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಅಥವಾ ಹೊರಗಿಟ್ಟಿರುವುದು ಅವರ ವಿಶೇಷಾಧಿಕಾರವಾಗಿದೆ’’ಎಂದರು.
‘‘ನನ್ನ ಹಾಗೂ ಜೆಡಿಯು ಪಕ್ಷದ ಮಧ್ಯೆ ಭಿನ್ನಾಭಿಪ್ರಾಯ ತಿಂಗಳ ಹಿಂದೆ ಆರಂಭವಾಗಿರುವುದಲ್ಲ. ಗಾಂಧಿ ಹಾಗೂ ಗೋಡ್ಸೆಯ ಸಿದ್ದಾಂತದ ಕುರಿತು ಜೆಡಿಯು ಸ್ಪಷ್ಟ ನಿಲುವು ತೆಗೆದುಕೊಂಡಿರಲಿಲ್ಲ. ನನ್ನ ಪ್ರಕಾರ ಗಾಂಧೀಜಿ ಹಾಗೂ ಗೋಡ್ಸೆ ಒಂದಾಗಿ ಸಾಗಲು ಸಾಧ್ಯವಿಲ್ಲ’’ ಎಂದರು.