ಮುಂಡ್ಕೂರು: ಶ್ರೀಗೋಕರ್ಣ ಮಠಾಧೀಶರ ಮೊಕ್ಕಾಂ
ಮುಂಡ್ಕೂರು, ಫೆ.21: ಮುಂಡ್ಕೂರಿನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಆಡಳಿತಕ್ಕೊಳಪಟ್ಟ ಶ್ರೀವಿಠೋಬ ದೇವಸ್ಥಾನದಲ್ಲಿ ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀ ವಡೇರ್ ಸ್ವಾಮೀಜಿ ಹಾಗೂ ಅವರ ಪಟ್ಟ ಶಿಷ್ಯರಾದ ಶ್ರೀಮದ್ ವಿದ್ಯಾಧೀಶ ತೀರ್ಥ ವಡೇರ್ ಸ್ವಾಮೀಜಿಯವರ ಮೊಕ್ಕಾಂ ಜರಗಲಿದೆ ಎಂದು ಶ್ರೀ ವಿಠೋಬ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ವೆಂಕಟೇಶ ಕೇಶವ ಕಾಮತ್ ತಿಳಿಸಿದ್ದಾರೆ.
ಫೆ.23ರ ಸಂಜೆ ಗೋವಾದ ಶ್ರೀ ರಾಮನಾಥ ಸಂಸ್ಥಾನದಿಂದ ಮುಂಡ್ಕೂರಿಗೆ ಆಗಮಿಸಲಿರುವ ಉಭಯ ಶ್ರೀಗಳು ಮಾರ್ಚ್ 1ರ ಸಂಜೆ ಗಂಗೊಳ್ಳಿ ಮೊಕ್ಕಾಂಗೆ ನಿರ್ಗಮಿಸಲಿದ್ದಾರೆ ಎಂದು ತಿಳಿಸಿರುವ ವೆಂಕಟೇಶ ಕಾಮತ್, ಗೋಕರ್ಣ ಶ್ರೀಗಳ ಮೊಕ್ಕಾಂ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು, ಸಂಕೀರ್ತನೆ, ಹವನಾದಿಗಳು, ಅರ್ಚನೆ, ಸಂತರ್ಪಣೆ ಇತ್ಯಾದಿಗಳು ಜರಗಲಿವೆ ಎಂದು ಹೇಳಿದ್ದಾರೆ.
ದಿನಂಪ್ರತಿ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮುಂಡ್ಕೂರು ಮೊಕ್ಕಾಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಎಂ.ವೆಂಕಟೇಶ ಕೇಶವ ಕಾಮತ್ ವಿನಂತಿಸಿದ್ದಾರೆ.