ಸಿರಿಯದ ಮಾನವ ನಿರ್ಮಿತ ಮಾನವೀಯ ಬಿಕ್ಕಟ್ಟು ಕೊನೆಯಾಗಬೇಕು ಆಂಟೋನಿಯೊ ಗುಟೆರಸ್
ವಿಶ್ವಸಂಸ್ಥೆ, ಫೆ. 22: ಸಿರಿಯದ ಇದ್ಲಿಬ್ನಲ್ಲಿನ ‘ಮಾನವ ನಿರ್ಮಿತ ಮಾನವೀಯ ಬಿಕ್ಕಟ್ಟು’ ತುರ್ತಾಗಿ ಕೊನೆಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಶುಕ್ರವಾರ ಹೇಳಿದ್ದಾರೆ. ಆದರೆ, ಸಿರಿಯದ ಕೊನೆಯ ಬಂಡುಕೋರ ನೆಲೆಯಲ್ಲಿ ನಡೆಯುತ್ತಿರುವ ರಕ್ತಪಾತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಯಾವುದೇ ನಿರ್ದಿಷ್ಟ ಯೋಜನೆಯನ್ನು ಅವರು ಘೋಷಿಸಿಲ್ಲ.
ಇದ್ಲಿಬ್ನಲ್ಲಿ ಬಂಡುಕೋರರ ವಿರುದ್ಧ ಸಿರಿಯ ಸರಕಾರ ನಡೆಸುತ್ತಿರುವ ಯುದ್ಧಕ್ಕೆ ರಶ್ಯ ವಾಯು ದಾಳಿಯ ಮೂಲಕ ಬೆಂಬಲ ನೀಡುತ್ತಿದೆ. ಇದರಿಂದಾಗಿ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಪಲಾಯನಗೈದಿದ್ದಾರೆ. ಇದು 9 ವರ್ಷದ ಆಂತರಿಕ ಯುದ್ಧದಲ್ಲಿನ ಅತಿ ದೊಡ್ಡ ನಿರ್ವಸತಿಯಾಗಿದೆ.
‘‘ದೀರ್ಘಾವಧಿಯಿಂದ ಸಂಕಷ್ಟಕ್ಕೆ ಈಡಾಗಿರುವ ಸಿರಿಯದ ಜನರಿಗೆ ಈಗ ಎದುರಾಗಿರುವ ಈ ಮಾನವ ನಿರ್ಮಿತ ಸಂಕಟ ಕೊನೆಗೊಳ್ಳಬೇಕು. ಅದು ಈಗಲೇ ಕೊನೆಗೊಳ್ಳಬೇಕು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಗುಟೆರಸ್ ಹೇಳಿದರು.
Next Story