ಕಾಡುಗಳ್ಳ ವೀರಪ್ಪನ್ ಪುತ್ರಿ ಬಿಜೆಪಿಗೆ ಸೇರ್ಪಡೆ
ಚೆನ್ನೈ, ಫೆ.23: ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದಾರೆ ಎಂದು ವರದಿಯಾಗಿದೆ.
ವೃತ್ತಿಯಲ್ಲಿ ವಕೀಲರಾಗಿದ್ದು, ಸಾಮಾಜಿಕ ಕಾರ್ಯಕರ್ತೆಯಾಗಿ ಸಕ್ರಿಯರಾಗಿರುವ ವಿದ್ಯಾ ರಾಣಿ ಅವರು ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಹಾಗೂ ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಉಪಸ್ಥಿತರಿದ್ದರು.
‘‘ನನ್ನ ತಂದೆ ಕೂಡ ಜನರ ಸೇವೆ ಮಾಡಬೇಕೆಂದು ಬಯಸಿದ್ದರು. ಆದರೆ, ಅವರು ತಪ್ಪು ಹಾದಿ ಆರಿಸಿಕೊಂಡರು. ಜನರ ಹಾಗೂ ದೇಶದ ಸೇವೆ ಮಾಡುವ ಉದ್ದೇಶದಿಂದ ಬಿಜೆಪಿ ಪಕ್ಷವನ್ನು ಸೇರಿದ್ದೇನೆ ಎಂದು ಪಕ್ಷ ಸೇರ್ಪಡೆಯ ಬಳಿಕ ರಾಣಿ ಹೇಳಿದ್ದಾರೆ’’ ಎಂದು ‘ಮಲಯಾಳ ಮನೋರಮಾ’ ವರದಿ ಮಾಡಿದೆ.
ದಂತಚೋರ ವೀರಪ್ಪನ್ನ ಹಿರಿಯ ಮಗಳಾಗಿರುವ ವಿದ್ಯಾರಾಣಿಯ ಮದುವೆಗೆ ಸಂಬಂಧಿಸಿ ತಮಿಳುನಾಡು ಹೈಕೋರ್ಟ್ ಮಧ್ಯಪ್ರವೇಶಿಸಿ ವಿವಾಹಕ್ಕೆ ಅವಕಾಶ ನೀಡಿದಾಗ ರಾಣಿ ಸುದ್ದಿಯಾಗಿದ್ದರು. ರಾಣಿ ಪ್ರೀತಿಸಿ ವಿವಾಹವಾಗುವುದಕ್ಕೆ ಆಕೆಯ ತಾಯಿ ಮುತ್ತುಲಕ್ಷ್ಮೀ ಆಕ್ಷೇಪ ವ್ಯಕ್ತಪಡಿಸಿದ್ದರು.