ಕಾಂಗ್ರೆಸ್ ನಾಯಕರಿಲ್ಲದ ಮುಳುಗುತ್ತಿರುವ ನೌಕೆ: ನಳಿನ್ ಟೀಕೆ
ಉಡುಪಿ, ಫೆ.24: ಉಪಚುನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್ಗೆ ಈವರೆಗೆ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರನ್ನು ನೇಮಿಸಿಕೊಳ್ಳಲು ಸಾಧ್ಯ ವಾಗಿಲ್ಲ. ಬಿಜೆಪಿ ತುಂಬಿದ ನೌಕೆಯಾದರೆ, ಕಾಂಗ್ರೆಸ್ ನಾಯಕರಿಲ್ಲದ ಮುಳು ಗುತ್ತಿರುವ ನೌಕೆ ಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಆಯೋಜಿಸಲಾದ ನೂತನ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಅವರ ಪದಪ್ರದಾನ ಮತ್ತು ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡು ತಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಈವರೆಗೆ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯ ವಾಗಿಲ್ಲ. ಅಧ್ಯಕ್ಷರ ಆಯ್ಕೆ ಸಾಧ್ಯವಾಗದವರಿಗೆ ಈ ದೇಶವನ್ನು ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಪಕ್ಷವು ಅಧ್ಯಕ್ಷರ ಆಯ್ಕೆಯಲ್ಲಿ ಅವರಲ್ಲಿರುವ ಹಣ, ಸಂಪತ್ತು ನೋಡಲ್ಲ. ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಮನ್ನಣೆ ನೀಡುವುದೇ ಬಿಜೆಪಿಯ ಧ್ಯೇಯ ಆಗಿದೆ ಎಂದರು.
ಕಳೆದ ಆರು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ನಾವು ಕಂಡಿದ್ದೇವೆ. ಅದರಲ್ಲಿ ಒಬ್ಬರು ನಿದ್ದೆ ಮಾಡುವ ಸಿಎಂ (ಸಿದ್ದರಾಮಯ್ಯ), ಇನ್ನೊಬ್ಬರು ನಿದ್ದೆ ಮಾಡಿದಂತೆ ನಟಿಸುವ ಸಿಎಂ (ಕುಮಾರಸ್ವಾಮಿ), ಮತ್ತೊಬ್ಬರು ನಿದ್ದೆ ಬಿಟ್ಟು ಕೆಲಸ ಮಾಡುವ ಸಿಎಂ(ಯಡಿಯೂರಪ್ಪ) ಎಂದು ಅವರು ಹೇಳಿದರು.
ಇಂದು ಭಾರತ ಪರಿವರ್ತನೆಯ ಹಾದಿಯಲ್ಲಿದ್ದು, ಸುವರ್ಣ ಯುಗದಲ್ಲಿ ನಾವು ಇದ್ದೇವೆ. ನಮ್ಮ ಮುಂದೆ ಸಾಕಷ್ಟು ಜವಾಬ್ದಾರಿಗಳು ಇವೆ. ಮುಂದೆ ಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಗೆಲ್ಲುವುದು ನಮ್ಮ ಗುರಿ ಯಾಗಿದೆ ಎಂದು ನಳಿನ್ ತಿಳಿಸಿದರು.
ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಸುಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ ಮಾತನಾಡಿದರು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ನಗರ ಅಧ್ಯಕ್ಷ ಮಹೇಶ್ ಠಾಕೂರ್, ಶ್ರೀಕಾಂತ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಕುತ್ಯಾರ್ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.