ಅಂಜುಮನ್ ನೂರ್ ಮೊಂಟೆಸ್ಸರಿ ಚಿಣ್ಣರಿಂದ ಪೊಲೀಸ್ ಠಾಣೆ ದರ್ಶನ
ಸಿಹಿ ನೀಡಿ ಸ್ವಾಗತಿಸಿದ ಪೊಲೀಸರು
ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ನೂರ್ ಮೊಂಟೆಸ್ಸರಿಯ ಚಿಣ್ಣರಿಂದ ಭಟ್ಕಳ ಪೊಲೀಸ್ ಠಾಣೆ ದರ್ಶನ ಕಾರ್ಯಕ್ರಮ ನಡೆಯಿತು.
ಪೊಲೀಸರು ಮಕ್ಕಳ ಸ್ನೇಹಿಯಾಗಲು ಇಂತಹ ಕಾರ್ಯಕ್ರಮಗಳ ಅಗತ್ಯವನ್ನು ಮನಗೊಂಡ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ದರ್ಶನ ಕಾರ್ಯಕ್ರಮ ಆಯೋಜಿಸಿತ್ತು ಎಂದು ತಿಳಿದುಬಂದಿದೆ.
ನಗರಠಾಣೆಯ ಪಿ.ಎಸ್.ಐ ಹನುಮಂತ ಕುಡಗುಂಟಿ, ಸಿಪಿಐ ಎಂ.ಎಸ್.ಪ್ರಕಾಶ್ ಪೊಲೀಸ್ ಸಿಬಂಧಿಗಳು ವಿದ್ಯಾರ್ಥಿಗಳನ್ನು ಸಿಹಿ ನೀಡುವುದರ ಮೂಲಕ ಸ್ವಾಗತಿಸಿ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ ಪೊಲೀಸರು ಎಂದರೆ ಯಾರು ಭಯಪಡಬೇಕಾದ ಅವಶ್ಯಕತೆ ಇಲ್ಲ. ನಾವೆಲ್ಲ ನಿಮ್ಮ ಗೆಳೆಯರಿದ್ದ ಹಾಗೆ. ಯಾರು ತಪ್ಪು ಕೆಲಸ ಮಾಡುತ್ತಾರೋ ಅವರಿಗೆ ನಾವು ಶಿಕ್ಷೆ ನೀಡುತ್ತೇವೆ. ನಾವೆಲ್ಲ ದಿನದ 24 ಗಂಟೆಗಳ ಕಾಲ ನಿಮ್ಮ ಸೇವೆ ಮಾಡಲಿದ್ದೇವೆ. ಭಟ್ಕಳ ತಾಲೂಕಿನ ಕೆಲವು ತಿಂಗಳಿನಿಂದ ಶರಾವತಿ ಪಡೆ ಎಂಬ ಹೊಸ ತಂಡ ನೇಮಕವಾಗಿದ್ದು ಸಮಾಜದ ಸುತ್ತಮುತ್ತ ಲೈಂಗಿಕ ದೌರ್ಜನ್ಯ ಹಾಗೂ ಇತರೆ ಸಮಸ್ಯೆ ಬಗ್ಗೆ ನಮ್ಮ ತಂಡಕ್ಕೆ ಕರೆ ಮಾಡಿ ತಿಳಿಸಬಹುದು ಎಂದು ಹೇಳಿದರು.
ಸಿ.ಪಿ.ಐ ಎಂ.ಎಸ್ ಪ್ರಕಾಶ ಮಾತನಾಡಿ ಚಿಕ್ಕ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದ್ದು. ಕಾನೂನಿನ ಪಾಠವನ್ನು ಚಿಕ್ಕ ಮಕ್ಕಳಿಗೆ ಈಗಿನಿಂದಲೇ ಹೇಳಿಕೊಟ್ಟರೆ ದೊಡ್ಡವರಾದ ಮೇಲೆ ಕಾನೂನಿನ ಪರಿಜ್ಞಾನ ಮೂಡುತ್ತದೆ. ಚಿಕ್ಕ ಮಕ್ಕಳನ್ನು ನಾವೆಲ್ಲರು ಪ್ರೀತಿಸಬೇಕು ಅವರೇ ಮುಂದಿನ ದೇಶದ ಭವಿಷ್ಯ ವನ್ನು ರೂಪಿಸುತ್ತಾರೆ ಎಂದು ಹೇಳಿದರು.