'ವರ್ಗಾವಣೆಗೊಳ್ಳದ ದಿಟ್ಟ ನ್ಯಾಯಾಧೀಶ ಲೋಯಾರನ್ನು ನೆನಪಿಸಿಕೊಳ್ಳುತ್ತಿದ್ದೇನೆ'
ಜ. ಮುರಳೀಧರ್ ವರ್ಗಾವಣೆ ಕುರಿತು ರಾಹುಲ್
ಹೊಸದಿಲ್ಲಿ: ದಿಲ್ಲಿ ಹಿಂಸಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಮತ್ತು ದಿಲ್ಲಿ ಹಾಗೂ ಕೇಂದ್ರ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದ ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶ ಜಸ್ಟಿಸ್ ಎಸ್. ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿಗೆ ವರ್ಗಾವಣೆಗೊಳಿಸಲಾಗಿದೆ. ಕೇಂದ್ರ ಸರಕಾರದ ಈ ಕ್ರಮವನ್ನು ಖಂಡಿಸಿದ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ 'ವರ್ಗಾವಣೆಗೊಳ್ಳದೇ ಇದ್ದ ದಿಟ್ಟ ನ್ಯಾಯಾಧೀಶ ಲೋಯಾ ಅವರನ್ನು ನೆನಪಿಸಿಕೊಳ್ಳುತ್ತಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ಈಗಿನ ಗೃಹ ಸಚಿವ ಅಮಿತ್ ಶಾ ಅವರು ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಜಸ್ಟಿಸ್ ಬಿ. ಎಚ್. ಲೋಯಾ ಅವರು 2014ರಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾದ ಘಟನೆಯನ್ನು ಉಲ್ಲೇಖಿಸಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರ ಕೂಡ ಸರಕಾರವನ್ನು ಟೀಕಿಸಿ "ಈಗಿನ ಆಡಳಿತದಡಿಯಲ್ಲಿ ಜಸ್ಟಿಸ್ ಮುರಳೀಧರ್ ಅವರ ಮಧ್ಯರಾತ್ರಿಯ ವರ್ಗಾವಣೆ ಆಘಾತಕಾರಿಯಲ್ಲದೇ ಇದ್ದರೂ ದುಃಖಕರ ಹಾಗೂ ನಾಚಿಕೆಗೇಡು. ಈ ದೇಶದ ಕೋಟ್ಯಂತರ ನಾಗರಿಕರು ನ್ಯಾಯಾಂಗದ ಮೇಲೆ ನಂಬಿಕೆಯಿರಿಸಿರುವಾಗ ಈ ಸರಕಾರ ನ್ಯಾಯದಾನದ ಪ್ರಕ್ರಿಯೆಗೆ ಅಡ್ಡಿ ಪಡಿಸಿ ಜನರು ನ್ಯಾಯಾಂಗದ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತಿದೆ'' ಎಂದು ಅವರು ಹೇಳಿದರು.
Remembering the brave Judge Loya, who wasn’t transferred.
— Rahul Gandhi (@RahulGandhi) February 27, 2020