ತುಳುವನ್ನು ಸರಕಾರ ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಿಸಲಿ: ದಯಾನಂದ ಕತ್ತಲ್ಸಾರ್

ಉಡುಪಿ, ಫೆ.28: ದೆಹಲಿ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ರಾಜ್ಯಗಳು ಒಂದಕ್ಕಿಂತ ಹೆಚ್ಚು ರಾಜ್ಯಭಾಷೆಗಳನ್ನು ಹೊಂದಿವೆ. ಆದರೆ ಕರ್ನಾಟಕ ರಾಜ್ಯದಲ್ಲಿರುವ ಸಮೃದ್ಧ ಭಾಷೆಯಾಗಿರುವ ತುಳು, ಈವರೆಗೂ ಅಧಿಕೃತವಾಗಿ ರಾಜ್ಯ ಭಾಷೆ ಆಗಿಲ್ಲ. ಇದರಿಂದಾಗಿ ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇಧಕ್ಕೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ರಾಜ್ಯ ಸರಕಾರ ಈ ಬಗ್ಗೆ ಕಣ್ಣು ತೆರೆಯಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉಡುಪಿ ಎಂಜಿಎಂ ಕಾಲೇಜಿನ ತುಳುಸಂಘ ಹಾಗೂ ಉಡುಪಿ ತುಳುಕೂಟದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಮುದ್ದಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾದ ತುಳು ಸಂಸ್ಕೃತಿ ಹಬ್ಬ ‘ತುಳು ಐಸಿರಿ’ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಸ್ವತಂತ್ರ ಭಾಷೆ ಯಾಗಿದೆ. ಜಗತ್ತಿನ ವ್ಯಾವಹಾರಿಕ ಭಾಷೆಯಾಗಿರುವ ಇಂಗ್ಲಿಷ್, ಕರ್ನಾಟಕದ ಮಾತೃಭಾಷೆಯಾಗಿರುವ ಕನ್ನಡ ಹಾಗೂ ದೇವಭಾಷೆಯಾಗಿರುವ ಸಂಸ್ಕೃತಗಳಿಗೆ ಸ್ವಂತ ಲಿಪಿ ಎಂಬುದು ಇಲ್ಲ. ಸಂಸ್ಕೃತಕ್ಕೆ ಲಿಪಿ ಕೊಟ್ಟ ಹೆಗ್ಗಳಿಕೆ ತುಳು ಭಾಷೆಗೆ ಇದೆ. ಅದೇ ರೀತಿ ಮಲಯಾಳಂ ಭಾಷೆಗೂ ತುಳು ಲಿಪಿಯನ್ನೇ ಬಳಸಲಾಗುತ್ತಿದೆ ಎಂದರು.
ಪ್ರಕೃತಿಗೆ ವಿರುದ್ಧ ನಡೆದರೆ ಪ್ರಕೃತಿಯೇ ಸರಿಯಾದ ಪಾಠ ಕಲಿಸುತ್ತದೆ ಎಂಬುದಕ್ಕೆ ಕೇರಳ ಹಾಗೂ ಕೊಡಗುವಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಗಳೇ ಸಾಕ್ಷಿ. ಪ್ರಕೃತಿಯ ಆರಾಧಕರಾಗಿರುವ ತುಳುವರು, ಪ್ರಕೃತಿಯ ಬಗ್ಗೆ ತಪ್ಪು ಹೆಜ್ಜೆಗಳನ್ನು ಇಟ್ಟರೆ, ತುಳುನಾಡಿನಲ್ಲಿಯೂ ಇಂತಹ ದುರಂತ ನಡೆಯ ಬಹುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸ ಲಾಯಿತು. ತುಳು ಚಿತ್ರನಟರಾದ ಮಂಜು ರೈ, ಮರ್ವಿನ್ ಶಿರ್ವ, ತುಳು ಕೂಟದ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಸಿಟಿ ಜೆಸಿಐ ಅಧ್ಯಕ್ಷ ತನುಜಾ ಮಾಬೆನ್, ಪಿಯು ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಅಕಾಡೆಮಿಯ ಸದಸ್ಯ ಚೇತಕ್ ಪೂಜಾರಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ವಹಿಸಿ ದ್ದರು. ತುಳುಸಂಘದ ಸಂಚಾಲಕ ಡಾ.ಪುತ್ತಿ ವಸಂತ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವೀಕ್ಷಿತ್ ವಂದಿಸಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದ್ದವು.
ಜನಗಣತಿಯಲ್ಲಿ ‘ತುಳು’ ನಮೂದಿಸಿ
ಈ ವರ್ಷದಿಂದ ಆರಂಭಗೊಳ್ಳುವ ಜನಗಣತಿಯಲ್ಲಿ ತುಳುವರು ತಮ್ಮ ಮಾತೃಭಾಷೆಯನ್ನು ಕನ್ನಡದ ಬದಲು ತುಳು ಎಂಬುದಾಗಿ ನಮೂದಿಸಬೇಕು. ಆ ಮೂಲಕ ತುಳು ಭಾಷೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಇದರಿಂದ ಕನ್ನಡ ಸೇರಿದಂತೆ ಯಾವುದೇ ಭಾಷೆಗಳಿಗೆ ನಷ್ಟ ಆಗುವುದಿಲ್ಲ ಎಂದು ದಯಾನಂದ ಜಿ.ಕತ್ತಲ್ಸಾರ್ ಹೇಳಿದರು.
ತುಳು ಅಕಾಡೆಮಿಯು ಈ ವರ್ಷ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿಶ್ವ ತುಳು ಸಮ್ಮೇಳನ ಮುಖ್ಯವಾಗಿದೆ. ಅದೇ ರೀತಿ ಅರ್ಧಕ್ಕೆ ನಿಂತಿ ರುವ ತುಳುಭವನದ ಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರಕಾರ 3.5 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು.








