ಸಿಎಎ ಸಭೆಯಲ್ಲಿ ಘರ್ಷಣೆ: ಮೇಘಾಲಯದಲ್ಲೂ ಓರ್ವ ಬಲಿ
ಫೈಲ್ ಚಿತ್ರ
ಗುವಾಹತಿ: ಖಾಸಿ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್ಯು) ಮತ್ತು ಬುಡಕಟ್ಟು ಜನಾಂಗದವರಲ್ಲದ ನಾಗರಿಕರ ನಡುವೆ ಪೌರತ್ವ ಕಾಯ್ದೆ ಕುರಿತಂತೆ ನಡೆದ ಸಭೆಯಲ್ಲಿ ಘರ್ಷಣೆ ಸ್ಫೋಟಗೊಂಡಾಗ ಕೆಎಸ್ಯು ಮುಖಂಡರೊಬ್ಬರು ಮೃತಪಟ್ಟು ಇತರ ಹಲವು ಮಂದಿ ಗಾಯಗೊಂಡಿದ್ದಾರೆ.
ರಾಜ್ಯ ರಾಜಧಾನಿ ಶಿಲ್ಲಾಂಗ್ನಿಂದ 90 ಕಿಲೋಮಿಟರ್ ದೂರದ ಪೂರ್ವ ಖಾಲ್ಸಿ ಬೆಟ್ಟ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂಟರ್ನೆಟ್ ಡಾಟಾ ಮತ್ತು ಎಸ್ಎಂಎಸ್ ಸೇವೆಗಳನ್ನು 48 ಗಂಟೆಗಳ ಕಾಲ ರದ್ದುಪಡಿಸಲಾಗಿದೆ.
ಘಟನೆ ನಡೆದ ಶೆಲ್ಲಾ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಶಿಲ್ಲಾಂಗ್ನಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ಘಟನೆಯಲ್ಲಿ ಬಾಂಗ್ಲಾದೇಶದ ಗಡಿ ಗ್ರಾಮದಲ್ಲಿ ಶೋಹ್ರಾ ಎಂಬಲ್ಲಿನ ಇಚಾಮತಿಯ ಲೂರ್ಶಾಹಿ ಹೈನೇವ್ತಾ ಮೃತಪಟ್ಟಿದ್ದಾರೆ ಎಂದು ಕೆಎಸ್ಯು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮತ್ತು ಮೇಘಾಲಯದಲ್ಲಿ ಆಂತರಿಕ ಗಡಿರೇಖೆ ಪರವಾನಗಿ (ಐಎಲ್ಪಿ) ನೀಡಬೇಕು ಎಂದು ಆಗ್ರಹಿಸಿ ಕೆಎಸ್ಯು ಹಾಗೂ ಇತರ ನಾಗರಿಕ ಸಮಾಜ ಸಂಘಟನೆಗಳು ನಡೆಸಿದ ಸಭೆಯಲ್ಲಿ ಈ ಗಲಭೆ ನಡೆದಿದೆ.
ಘಟನೆಯಲ್ಲಿ ಹಲವು ಮಂದಿ ಕೆಎಸ್ಯು ಸದಸ್ಯರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ. ವಾಹನಗಳನ್ನೂ ಉದ್ರಿಕ್ತರ ಗುಂಪುಗಳು ಜಖಂಪಡಿಸಿವೆ. ಸಭೆಯಲ್ಲಿ ಹಾಜರಿದ್ದವರ ಮೇಲೆ ಗುಂಪು ದಾಳಿ ನಡೆಯಲು ಕಾರಣ ತಿಳಿದುಬಂದಿಲ್ಲ.