ನೇತ್ರಾವತಿ ನದಿಗೆ ಹಾರಿದ ತಂದೆ ಮಗನ ಮೃತದೇಹದ ಗುರುತು ಪತ್ತೆ
ಕಾಪು : ಉದ್ಯಾವರ ಪಡುಕೆರೆ ಸಮುದ್ರ ಕಿನಾರೆಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾದ ಮೃತದೇಹಗಳು ಕೆಲವು ದಿನಗಳ ಹಿಂದೆ ನೇತ್ರಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದ ಬಂಟ್ವಾಳದ ಶಂಭೂರು ನಿವಾಸಿ ಗೋಪಾಲಕೃಷ್ಣ ರೈ (45) ಮತ್ತು ಅವರ ಮಗ ಅನೀಶ್ ರೈ(6) ಎಂಬವರದ್ದು ಎಂದು ದೃಢಪಟ್ಟಿದೆ.
ಮಾಹಿತಿ ತಿಳಿದು ಇಂದು ಬೆಳಗ್ಗೆ ಆಗಮಿಸಿದ ಗೋಪಾಲಕೃಷ್ಣ ರೈ ಅವರ ಸಹೋದರ ಹರೀಶ್ ರೈ ಮೃತದೇಹದ ಗುರುತು ಪತ್ತೆ ಹಚ್ಚಿದ್ದು, ಬಳಿಕ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ನಡೆಸಲಾಯಿತು.
ಮಧ್ಯಾಹ್ನ ವೇಳೆ ಮೃತದೇಹವನ್ನು ಹರೀಶ್ ರೈ ಅವರಿಗೆ ಹಸ್ತಾಂತರಿಸ ಲಾಗಿದ್ದು, ಅವರು ಊರಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಕಾಪು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಕಾಪು ಠಾಣಾಧಿಕಾರಿ ರಾಜಸೇಖರ್ ಸಾಗನೂರು ಹಾಜರಿದ್ದರು.
ಸುಮಾರು ಹತ್ತು ದಿನಗಳ ಹಿಂದೆ ಕೋಣಾಜೆ ಸಮೀಪ ಕುಟುಂಬದ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಗೋಪಾಲಕೃಷ್ಣ ರೈ ತನ್ನ ಮಗನೊಂದಿಗೆ ನೇತ್ರಾವತಿ ನದಿಗೆ ಹಾರಿ ನಾಪತ್ತೆಯಾಗಿದ್ದರು.





