ಸಹೋದರತೆಯಿಂದ ಮಾತ್ರ ದೇಶವನ್ನು ಕಟ್ಟಲು ಸಾಧ್ಯ : ಶಾಫಿ ಸಅದಿ
ಕನ್ನಂಗಾರ್ ಉರೂಸ್ ಸಮಾರೋಪ

ಪಡುಬಿದ್ರಿ: ಉದ್ರೇಕ, ಆವೇಶ, ಉದ್ವೇಗದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಶಾಂತಿ, ಪ್ರೀತಿ, ಸಹನೆ, ಸಹೋದರತೆಯಿಂದ ಮಾತ್ರ ಅಭಿವೃದ್ಧಿಯ ದೇಶವನ್ನು ಕಟ್ಟಲು ಸಾಧ್ಯ ಎಂದು ರಾಜ್ಯ ವಕ್ಫ್ ಬೋರ್ಡು ನಿರ್ದೇಶಕ ಎನ್.ಕೆ.ಎಮ್. ಶಾಫಿ ಸಅದಿ ಹೇಳಿದರು.
ಶನಿವಾರ ರಾತ್ರಿ ಕನ್ನಂಗಾರ್ ಜುಮಾ ಮಸೀದಿ ಹೆಜಮಾಡಿ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ ಕನ್ನಂಗಾರ್ ಉರೂಸ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾವೈಕ್ಯತೆ, ಸಹಬಾಳ್ವೆ, ವಿವಿಧತೆಯಲ್ಲಿ ಏಕತೆ, ಜಾತ್ಯಾತೀತ, ಪ್ರಜಾಪಭುತ್ವ ಎಂದು ಜಗತ್ತಿಗೆ ಸಾರಿದ ಭಾರತದ ರಾಜಧಾನಿ ದೆಹಲಿಯ ಘಟನೆ ಇದಕ್ಕೆ ಕೊಡಲಿ ಏಟು ನೀಡಿದಂತಾಗಿದೆ. ಈ ಘಟನೆಯಿಂದ ದೆಹಲಿ ಸರ್ಕಾರಕ್ಕೂ ಕೇಂದ್ರದಷ್ಟೇ ಜಾವಾಬ್ದಾರಿ ಇದೆ. ಯಾರೇ ಆಗಲಿ ದೆಹಲಿಯ ಘಟನೆಯ ತಪ್ಪಿತಸ್ಥರನ್ನು ಕಾನೂನಿ ಅಡಿಯಲ್ಲಿ ಕ್ರಮಜರಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು. ಇಂತಹ ಘಟನೆ ಎಂದೂ ಮರುಕಳಿಸಬಾರದು ಎಂದು ಹೇಳಿದರು.
ಶಾಸಕ ಲಾಲಾಜಿ ಅರ್. ಮೆಂಡನ್ ಮಾತನಾಡಿ, ಕರಾವಳಿಯು ಹಿಂದಿನಿಂದಲೂ ಸೌಹಾರ್ದತೆಗೆ ಹೆಚ್ಚು ಒತ್ತು ನೀಡಿದೆ. ಇಂದು ಸಾಮರಸ್ಯ, ಸಹೋದರತೆಯಿಂದ ಬದುಕಬೇಕಾದ ಅನಿವಾರ್ಯತೆ ಇದೆ ಎಂದರು.
ಉರೂಸ್ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಮಿಲಾಫ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಿದರು. ಸೈಯ್ಯದ್ ಅಬ್ದುಲ್ಲಾ ಹಬೀಬುರ್ರಹ್ಮಾನ್ ಬುಖಾರಿ ತಂಙಳ್ ಕಡಲುಂಡಿ ದುವಾ ನೆರವೇರಿಸಿದರು.
ಕನ್ನಂಗಾರ್ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯ, ಮಾಜಿ ಸಚಿಚರಾದ ಪ್ರಮೋದ್ ಮಧ್ವರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಗ್ರಾಮ ಪಂಚಾಯಿತಿ ಒಕ್ಕೂಟದ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ವಕ್ಫ್ ಬೋರ್ಡ್ ಸಲಹಾ ಸಮಿತಿಯ ಜಿಲ್ಲಾ ಅಧ್ಯಕ್ಷ ಹಾಜಿ ಇಬ್ರಾಹಿಂ ಮಟಪಾಡಿ, ಉಪಾಧ್ಯಕ್ಷ ಗುಲಾಂ ಮುಹಮ್ಮದ್, ಹೆಜಮಾಡಿ ಗ್ರಾಮ ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ. ಸುಕುಮಾರ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹೆಜಮಾಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ. ಅಮೀನ್, ಕಾಪು ಬ್ಲಾಕ್ ಜೆಡಿಎಸ್ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ, ಕನ್ನಂಗಾರ್ ಜುಮಾ ಮಸೀದಿ ಅಧ್ಯಕ್ಷ ಎಚ್.ಬಿ. ಮುಹಮ್ಮದ್, ಕನ್ನಂಗಾರ್ ವೆಲ್ಫೇರ್ ಅಸೋಸಿಯೇಶನ್ ಅಲ್ಜುಬೈಲ್ ಗೌರವಾಧ್ಯಕ್ಷ ಅಶ್ರಫ್ ಶ್ಯಾಕೊ, ಉದ್ಯಮಿಗಳಾದ ಮೌಲಾನಾ ಇಬ್ರಾಹಿಂ ಲೆಗಾಡೋ ಗೋವಾ, ಎಂ.ಎಸ್. ರಝಾಕ್, ಅಕ್ರಂ ಹಾಜಿ ಮೂಡಿಗೆರೆ, ನ್ಯಾಯವಾದಿ ಹಂಝತ್ ಹೆಜಮಾಡಿ ಕೋಡಿ ಉಪಸ್ಥಿತರಿದ್ದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಹಿಫ್ಲುಲ್ ಕುರ್ ಆನ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಫಿಳ್ ಪದವಿ ಪ್ರಧಾನ ನಡೆಯಿತು. ಅಸಯ್ಯದ್ ತ್ವಾಹಾ ತಂಙಳ್ ಗಾಣೆಮಾರ್ ಹಾಗೂ ಹಾಫಿಳ್ ಮುಹಮ್ಮದ್ ಸ್ವಾದಿಕ್ ಫಾಳಿಲಿ ಗೂಡಲ್ಲೂರು ಇವರಿಂದ ಬುರ್ಧಾ ಮಜ್ಲಿಸ್ ನಡೆಯಿತು.
ಇರ್ಷಾದ್ ಕೋಡಿ ಕಾರ್ಯಕ್ರಮ ನಿರ್ವಹಿಸಿದರು.








