ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ 13.12 ರೂ. ಹೆಚ್ಚಳ: ಬಿ.ಎಂ.ಭಟ್
ಬೆಳ್ತಂಗಡಿ: ಬೆಲೆ ಏರಿಕೆಗನುಗುಣವಾಗಿ ಏರಿಕೆಯಾಗುವ ತುಟ್ಟೀಬತ್ತೆ ಗ್ರಾಹಂಕ ಸೂಚ್ಯಾಂಕದರ 328 ಅಂಶ ಹೆಚ್ಚಳವಾಗಿದ್ದು ಬೀಡಿ ಕಾರ್ಮಿಕರಿಗೆ ದರ 4 ಪೈಸೆಯಂತೆ ರೂ. 13.12 ವೇತನ ಏರಿಕೆಯಾಗಿದ್ದು ಅದು ಎ.1ರಿಂದ ಜಾರಿಯಾಗಲಿದೆ ಹಾಗೂ ಆಮೂಲಕ ಬೀಡಿ ಕಾರ್ಮಿಕರಿಗೆ ವೇತನ ಪ್ರತಿ 1000 ಬೀಡಿಗೆ 240.12 ರೂ. ರಷ್ಟುಆಗಲಿದೆ ಎಂದು ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್ ತಿಳಿಸಿದ್ದಾರೆ.
ಆದರೆ ಮಾಲಕರು ಸರಕಾರ ನಿಗಿದಿಗೊಳಿಸಿದ ಕನಿಷ್ಟ ಕೂಲಿಯನ್ನೇ ನೀಡದೆ ವಂಚಿಸುತ್ತಿದ್ದರೂ ಸರಕಾರ ಬೀಡಿಕಾರ್ಮಿಕರ ನೆರವಿಗೆ ಬರುತ್ತಿಲ್ಲ. ಕನಿಷ್ಟ ಕೂಲಿಯನ್ನೇ ನೀಡದ ಮಾಲಕರ ಮೇಲೆ ಏನೂ ಮಾಡಲಾಗದೆ ಮೌನದಿಂದಿರುವ ಸರಕಾರ ಈ ತುಟ್ಟೀ ಭತ್ತೆಯನ್ನೂಕೊಡಿಸದೇ ಇದ್ದರೆ ತೀವ್ರ ಸ್ವರೂಪದ ಹೊರಾಟ ನಡೆಸಲು ನಾವು ಸಿದ್ಧ ಎಂದು ಅವರು ಸರಕಾರವನ್ನೂ ಎಚ್ಚರಿಸಿದ್ದಾರೆ.
ಅಲ್ಲದೆ ನೂರಾರು ಕಾರ್ಮಿಕರನ್ನು ಹೊಂದಿರುವ ದೇಸಾಯಿ ಬೀಡಿ ಸಂಸ್ಥೆ ಕೈಗಾರಿಕೆಯನ್ನೇ ಮುಚ್ಚುತ್ತಿದ್ದರೂ ಸರಕಾರ ಕಾರ್ಮಿಕರಿಗೆ ಸಿಗಬೇಕಾದ ಕ್ಲೋಸರ್ ವೇತನ, ಗ್ರಾಚ್ಯುವಿಟಿ, ಪರಿಹಾರ ಧನ ಮೊದಲಾದ ಸವಲತ್ತು ಕೊಡಿಸಿಲ್ಲ. ಮಾತ್ರವಲ್ಲ ಸರಕಾರದ ಅನುಮತಿಯನ್ನೇ ಪಡೆಯದೆ ಕಂಪೆನಿ ಮುಚ್ಚಲು ನಿರ್ಧರಿಸಿ ಕಾರ್ಮಿಕರಿಗೆ ಕೆಲಸ ನೀಡದೆ ವಂಚಿಸುತ್ತಿದೆ ಎಂದರು.
ಇನ್ನು ಹಲವು ಕಂಪೆನಿಗಳು ಬೀಡಿ ಕಾರ್ಮಿಕರಿಗೆ ಗ್ರಾಚ್ಯುವಿಟಿ ನೀಡದೆ ವಂಚನೆ ಮಾಡುತ್ತಿವೆ. ಈ ಎಲ್ಲಾ ಸಮಸ್ಯೆಗಳ ವಿರುದ್ಧ ಮಾ. 17 ರಂದು ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಹಿತರಕ್ಷಣಾ ವೇದಿಕೆ ನಿರ್ಧರಿಸಿದೆ ಎಂದು ಬಿ.ಎಂ.ಭಟ್ ಅವರು ತಿಳಿಸಿದ್ದಾರೆ.







