ಮಂಗಳೂರು: ಅತ್ಯಾಚಾರ ಆರೋಪಿಗೆ 7 ವರ್ಷ ಜೈಲು

ಮಂಗಳೂರು, ಮಾ.4: ವಿವಾಹವಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿ ಕೈಕೊಟ್ಟ ಮೇಸ್ತ್ರಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಏಳು ವರ್ಷ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ನಾಗಗೊಂಡನಹಳ್ಳಿ ನಿವಾಸಿ ರಾಮ ಅಲಿಯಾಸ್ ದಾಸಪ್ಪ (34) ಶಿಕ್ಷೆಗೊಳಗಾದ ಆರೋಪಿ.
ಪ್ರಕರಣ ವಿವರ: ಸಂತ್ರಸ್ತ ಯುವತಿ ತನ್ನ ತಂದೆ, ತಾಯಿಯ ಜತೆ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಅದೇ ಮನೆಯ ಪಕ್ಕದ ಇನ್ನೊಂದು ಕೊಠಡಿಯಲ್ಲಿ ಆರೋಪಿ ರಾಮ ಯಾನೆ ದಾಸಯ್ಯ ವಾಸ್ತವ್ಯ ಮಾಡುತ್ತಿದ್ದನು.
ಯುವತಿಯನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ತಂದೆ-ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹಾಗೆ ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ 2018ರ ಜನವರಿ 11ರಂದು ಪಕ್ಕದ ಮನೆಯ ರಾಮ ಯಾನೆ ದಾಸಯ್ಯ ಆಕೆಯ ಮನೆಗೆ ತೆರಳಿ ಮದುವೆ ಆಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಬಳಿಕ ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಬೆದರಿಕೆ ಹಾಕಿದ್ದನು.
ನಂತರದ ದಿನಗಳಲ್ಲೂ ಆತ ಆಕೆಯ ಮನೆಗೆ ತೆರಳಿ ಅತ್ಯಾಚಾರ ಎಸಗಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು. ಆರು ತಿಂಗಳ ಗರ್ಭಿಣಿಯಾದಾಗ ಮನೆ ಮಂದಿಗೆ ವಿಷಯ ಗೊತ್ತಾಗಿ ಮದುವೆಯಾಗಲು ಒತ್ತಾಯಿಸಿದಾಗ, ಆರೋಪಿ ರಾಮ ಯಾನೆ ದಾಸಯ್ಯ ತನಗೆ ಈಗಾಗಲೇ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ ಎಂದು ಹೇಳಿ ಈ ಯುವತಿಯ ಜತೆ ಮದುವೆಗೆ ನಿರಾಕರಿಸಿದ್ದನು. ಈ ಹಿನ್ನೆಲೆಯಲ್ಲಿ ಯುವತಿ ಮತ್ತು ಆಕೆಯ ಹೆತ್ತವರು ಮಂಗಳೂರು ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ 2018ರ ಜೂನ್ 19ರಂದು ಆತನ ವಿರುದ್ಧ ದೂರು ದಾಖಲಿಸಿದ್ದರು. ಜೂನ್ 21ರಂದು ಪೊಲೀಸರು ಆರೋಪಿ ರಾಮ ಯಾನೆ ದಾಸಯ್ಯನನ್ನು ಬಂಧಿಸಿದ್ದರು. ಇನ್ಸ್ಪೆಕ್ಟರ್ ಸಿದ್ದಗೌಡ ಭಜಂತ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಯೀದುನ್ನೀಸಾ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಶಿಕ್ಷೆಯ ವಿವರ: ಅತ್ಯಾಚಾರ ಆರೋಪಕ್ಕೆ (ಐಪಿಸಿ 376) ಏಳು ವರ್ಷ ಕಠಿಣ ಶಿಕ್ಷೆ ಮತ್ತು 25,000 ರೂ. ದಂಡ, ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ (ಐಪಿಸಿ 417) ಆರೋಪಕ್ಕೆ ಒಂದು ವರ್ಷ ಶಿಕ್ಷೆ ಮತ್ತು 10,000 ರೂ. ದಂಡ, ಬೆದರಿಕೆ ಒಡ್ಡಿದ ಆರೋಪಕ್ಕೆ (ಐಪಿಸಿ 506) ಒಂದು ವರ್ಷ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 25,000 ರೂ.ನ್ನು ಸಂತ್ರಸ್ತ ಯುವತಿಗೆ ನಷ್ಟ ಪರಿಹಾರವಾಗಿ ನೀಡಬೇಕು.
ರಾಮ ಯಾನೆ ದಾಸಯ್ಯನೇ ಈ ಯುವತಿ ಜನ್ಮ ನೀಡಿದ ಹೆಣ್ಣು ಮಗುವಿನ ಜೈವಿಕ ತಂದೆ ಎಂಬುದಾಗಿ ಡಿಎನ್ಎ ಪರೀಕ್ಷೆಯಿಂದ ದೃಢ ಪಟ್ಟ ಹಿನ್ನೆಲೆಯಲ್ಲಿ ಮೇಲೆ ಸೂಚಿಸಿದ ದಂಡ ಮೊತ್ತದ ಹೊರತಾಗಿ ಹೆಚ್ಚುವರಿಯಾಗಿ 50,000 ರೂ.ನ್ನು ಈ ಹೆಣ್ಣು ಮಗುವಿನ ಮುಂದಿನ ಜೀವನಕ್ಕಾಗಿ ಮಗುವಿನ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇರಿಸುವಂತೆಯೂ ಆರೋಪಿ ರಾಮನಿಗೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.







