ಕೊಣಾಜೆ: ಸಂಶೋಧನಾರ್ಥಿಗಳಿಗಾಗಿ ಹತ್ತು ದಿನಗಳ ಸಂಶೋಧನ ವಿಧಾನ ಶಾಸ್ತ್ರ ಕೋರ್ಸ್ ಉದ್ಘಾಟನೆ

ಕೊಣಾಜೆ: ಸಂಶೋಧನೆಗಳು ಕೇವಲ ನಮ್ಮ ಬೆಳವಣಿಗೆಗೆ ಮಾತ್ರವಲ್ಲ ಸಮಾಜಕ್ಕೆ ಕೊಡುಗೆಯಾಗಿ ರೂಪುಗೊಂಡರೆ ಸಾರ್ಥಕತೆಯನ್ನು ಕಾಣಲು ಸಾಧ್ಯವಾಗುತ್ತದೆ. ಸಂಶೋಧಕರಿಗೆ ಇಂತಹ ಕಾರ್ಯಾಗಾರಗಳು ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದು ಒಡಿಶಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ವಿ.ಕೃಷ್ಣಭಟ್ಟ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಯೋಗ ವಿಜ್ಞಾನ ವಿಭಾಗದ ವತಿಯಿಂದ ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ( ಐಸಿಎಸ್ಎಸ್ ಆರ್) ಇದರ ಪ್ರಾಯೋಜಕತ್ವದಲ್ಲಿ ಸಮಾಜ ವಿಜ್ಞಾನ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ನಡಯುವ ಹತ್ತು ದಿನಗಳ ಸಂಶೋಧನಾ ವಿಧಾನ ಶಾಸ್ತ್ರ ಕೋರ್ಸನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಇಂದು ಉನ್ನತ ಶಿಕ್ಷಣ , ಔದ್ಯೋಗಿಕ ರಂಗದಲ್ಲಿ ಸಂಶೋಧನೆ, ಪಿಎಚ್ ಡಿ ಇದ್ದರೆ ಅವಕಾಶಗಳು ಹೆಚ್ಚಾಗಿ ಲಭ್ಯವಾಗುತ್ತಿವೆ. ಆದರೆ ಸಂಶೋಧನೆಯ ಗುಣಮಟ್ಟ ಎಂದಿಗೂ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ಧಾರಿ ಶಿಕ್ಷಣ ಸಂಸ್ಥೆಗಳಿಗೂ ಇವೆ ಎಂದರು.
ಸಂಶೋಧನಾ ಸಮಯದಲ್ಲಿ ಎದುರಾಗುವ ಸಮಸ್ಯೆಗಳು, ಮಾಹಿತಿ ಸಂಗ್ರಹಣೆಯ ವಿನ್ಯಾಸಗಳು ಅಧ್ಯಯನ ಸಂಬಂದಿಸಿ ಕೃತಿಗಳ ಓದುವಿಕೆ, ಅಧ್ಯಯನದ ವಿವಿಧ ಆಯ್ಕೆಗಳು, ವಿಧಾನಗಳು, ವರದಿ ತಯಾರಿಸುವ ಬಗೆಗಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಇಂತಹ ತರಬೇತಿ ಸಂಶೋಧನಾರ್ಥಿಗಳಿಗೆ ಬಹಳಷ್ಟು ಸಹಕಾರಿಯಾಗುತ್ತದೆ. ಇಂತಹ ಅವಕಾಶಗಳು ಸಂಶೋಧಕರು ಬಳಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರ ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ಸಂಶೋಧನೆ ಇಲ್ಲದೆ ಯಾವುದೇ ಅಧ್ಯಯನವು ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
ಜ್ಣಾನವೇ ನಮ್ಮ ಶಕ್ತಿಯಾಗಿದ್ದು, ಅದನ್ನು ಬಳಸಿಕೊಂಡು ಮುನ್ನಡೆಯುವ ಚಾಕಚಕ್ಯತೆ ನಮ್ಮಲ್ಲಿರಬೇಕು ಎಂದರು.
ಉತ್ತಮ ಸಂಶೋಧಕನಾಗಬೇಕಾದರೆ ಸಂಶೋಧನಾ ವಿಧಾನಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಬಗೆಯನ್ನೂ ಅರಿತುಕೊಳ್ಳಬೇಕು. ಇಂತಹ ಕಾರ್ಯಾಗಾರಗಳು ಸಂಶೋಧನಾರ್ಥಿಗಳಿಗೆ ಎದುರಾಗುವ ಸಂಶೋಧನಾ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿಕೊಡುತ್ತದೆ, ಜೊತೆಗೆ ಸಂಶೋಧನಾ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಮುನ್ನಡೆಯಲು ದಾರಿ ದೀಪವಾಗುತ್ತದೆ ಎಂದು ಹೇಳಿದರು.
ಮಂಗಳೂರು ವಿವಿಯ ಹಣಕಾಸು ಅಧಿಕಾರಿ ಪ್ರೊ.ಶ್ರೀಪತಿ ಕಲ್ಲೂರಾಯ, ಯೋಗ ವಿಜ್ಞಾನ ವಿಭಾಗದ ನಿರ್ದೇಶಕರಾದ ಪ್ರೊ.ಕೃಷ್ಣ ಶರ್ಮ, ಡಾ. ಉದಯ ಕುಮಾರ್ ಬಿ ಮೊದಲಾದವರು ಉಪಸ್ಥಿತರಿದ್ದರು.







