ಮಾ.7: ಪತ್ರಕರ್ತ ರವೀಂದ್ರ ಶೆಟ್ಟಿಯವರ ‘ನಮ್ಮ ಮಂಗಳೂರು’ ಕೃತಿ ಬಿಡುಗಡೆ

ಮಂಗಳೂರು, ಮಾ.5: ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯ ಉಪಸಂಪಾದಕ ಬಿ. ರವೀಂದ್ರ ಶೆಟ್ಟಿ ಬರೆದಿರುವ ‘ನಮ್ಮ ಮಂಗಳೂರು’ ಮಂಗಳೂರು ಮಹಾನಗರ ಪಾಲಿಕೆಯ ಸಮಗ್ರ ನೋಟ ಎಂಬ ಕೃತಿ ಮಾ.7ರಂದು ಮಂಗಳೂರು ಪುರಭವನದಲ್ಲಿ ಪೂರ್ವಾಹ್ನ 11ಗಂಟೆಗೆ ಬಿಡುಗಡೆಯಾಗಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಮಂಗಳೂರು ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ನೇತೃತ್ವದಲ್ಲಿ ನಡೆಯಲಿರುವ ರಾಜ್ಯ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಕೃತಿ ಬಿಡುಗಡೆಯಾಗಲಿದೆ.
ಕೃತಿಗೆ ಪ್ರೊ.ಬಿ.ಎ.ವಿವೇಕ ರೈ ಮುನ್ನುಡಿ ಬರೆದಿದ್ದು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಬೆನ್ನುಡಿ ಬರೆದಿದ್ದಾರೆ. ವಿಜಯ ಕರ್ನಾಟಕ ಮಂಗಳೂರಿನ ಸ್ಥಾನೀಯ ಸಂಪಾದಕ ಯು.ಕೆ.ಕುಮಾರ್ನಾಥ್ ಅವರ ಆಶಯ ಮಾತುಗಳಿವೆ.
ಮಂಗಳೂರಿನ ಸಮಗ್ರ ಚಿತ್ರಣ: ಈ ಗ್ರಂಥದಲ್ಲಿ ಈ ಗ್ರಂಥದ ಕೃತಿಯಲ್ಲಿ ಮಂಗಳೂರಿನ ಜನಪ್ರತಿನಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಕಿರುನೋಟ, ಮಂಗಳೂರು ಮಹಾನಗರ ಪಾಲಿಕೆಯ ಪ್ರಮುಖ ಅಂಕಿಅಂಶಗಳು, ಮಂಗಳೂರಿನ ಆಡಳಿತದ ಇತಿಹಾಸ, ನಗರಸಭೆ, ನಗರ ಪಾಲಿಕೆ, ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ಆಡಳಿತ ನಡೆಸುವ ವ್ಯವಸ್ಥೆ ಸಮಗ್ರ ವಿವರಗಳಿವೆ.
ಮಂಗಳೂರು ಮಹಾನಗರ ಪಾಲಿಕೆಗೆ ನಡೆದ 1983ರ ಮೊದಲ ಚುನಾವಣೆಯಿಂದ ತೊಡಗಿ 2019ರ ವರೆಗಿನ ಚುನಾವಣೆಯ ಸಮಗ್ರ ವಿವರಗಳು, ಆಡಳಿತ ನಡೆಸಿದ ಪಕ್ಷಗಳು, ಜನಪ್ರತಿನಿಧಿಗಳ ವಿವರಗಳು, ವಿಶೇಷವಾಗಿ ಕಳೆದ 36 ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಪೊರೇರ್ಟಗಳಾಗಿ ಕರ್ತವ್ಯನಿರ್ವಹಿಸಿದವರ ಹೆಸರು, ಭಾವಚಿತ್ರಗಳಿವೆ. ಸಾರ್ವಜನಿಕರಿಗೆ ಪಾಲಿಕೆಯಿಂದ ಏನೇನು ಸೌಲಭ್ಯಗಳು ದೊರೆಯುತ್ತವೆ. ಅವುಗಳನ್ನು ಪಡೆಯುವುದು ಹೇಗೆ ಸೇರಿದಂತೆ ಪಾಲಿಕೆಯ ಆಡಳಿತ ಹಾಗೂ ಸೌಲಭ್ಯದ ವಿವರಗಳು ಈ ಗ್ರಂಥದಲ್ಲಿ ಅಡಕವಾಗಿವೆ.
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕೆರೆ, ಪಾರ್ಕ್, ಮೈದಾನ, ಗ್ರಂಥಾಲಯ, ಉದ್ಯಾನವನ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಹೊಟೇಲ್ ಗಳು, ಪ್ರಮುಖ ಶ್ರದ್ಧಾ ಕೇಂದ್ರಗಳು, ಮುಖ್ಯ ಪ್ರವಾಸಿ ತಾಣಗಳು, ತುಳು ಸಿನಿಮಾಗಳು, ಚಿತ್ರಮಂದಿರಗಳು, ಮಾಧ್ಯಮ ಸಂಸ್ಥೆ, ಪೊಲೀಸ್ ಠಾಣೆಗಳ ವಿವರಗಳು, ಸಂಚಾರ ವ್ಯವಸ್ಥೆಯ ಮಾಹಿತಿಗಳು ಹೀಗೆ ಹತ್ತು ಹಲವು ವಿಚಾರಗಳು ಈ ಗ್ರಂಥದಲ್ಲಿ ಅಡಕವಾಗಿವೆ.







