ರೈತ ವಿರೋಧಿ, ಜನದ್ರೋಹಿ ಬಜೆಟ್: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮಾ. 5: ಆರ್ಥಿಕ ಕುಸಿತ, ಕೇಂದ್ರದ ಅನುದಾನ ಕಡಿತ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ 2020-21ನೆ ಸಾಲಿನ ಬಜೆಟ್ ರೈತ ವಿರೋಧಿ, ಪರಿಶಿಷ್ಟರು ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಸೇರಿ ಸಾಮಾಜಿಕ ನ್ಯಾಯಕ್ಕೆ ಪೆಟ್ಟು ನೀಡುವ ಅಭಿವೃದ್ಧಿ ವಿರೋಧಿ, ಜನದ್ರೋಹಿ ಬಜೆಟ್ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.
ಗುರುವಾರ ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆ ಬಳಿಕ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿರು ಶಾಲು ಹೊದ್ದರೆ ಅಭಿವೃದ್ಧಿ ಸಾಧ್ಯವೇ? ಅಸಲಿಗೆ ನೀವು ಎಂದಾದರೂ ಕೃಷಿ ಮಾಡಿದ್ದೀರಾ? ಎಂದು ಖಾರವಾಗಿ ಪ್ರಶ್ನಿಸಿದರು. ನಿರೀಕ್ಷಿತ ಆದಾಯವೂ ಇಲ್ಲ, ಸಾಲದ ಪ್ರಮಾಣವೂ ಜಾಸ್ತಿ, ಕೇಂದ್ರ ಹಾಗೂ ರಾಜ್ಯದಲ್ಲಿಯೂ ಬಿಜೆಪಿ ಸರಕಾರವಿದ್ದರೆ ‘ರಾಮರಾಜ್ಯವಾಗಲಿದೆ ಎಂಬ ಬಿಎಸ್ವೈ ಮಾತು ಹುಸಿಯಾಗಿದೆ ಎಂದ ಅವರು, ಕೃಷಿ, ನೀರಾವರಿಗೆ ಆದ್ಯತೆ ನೀಡಿಲ್ಲ. ಯಾವುದೇ ಮುನ್ನೋಟವೂ ಬಜೆಟ್ನಲ್ಲಿ ಇಲ್ಲ ಎಂದು ಆರೋಪಿಸಿದರು.
2013ರ ನನ್ನ ಮೊದಲ ಬಜೆಟ್ ಹಾಗೂ 2018ರ ಕೊನೆಯ ಬಜೆಟ್ ಗಾತ್ರದ ನಡುವಿನ ವ್ಯತ್ಯಾಸ 1.16 ಲಕ್ಷ ಕೋಟಿ ರೂ., ಈ ಬಾರಿಯ ಬಜೆಟ್ ಗಾತ್ರ ಹಿಂದಿನ ಬಜೆಟ್ಗಿಂತ ಕೇವಲ 4 ಸಾವಿರ ಕೋಟಿ ರೂ.ಹೆಚ್ಚಿದೆ. ಅಂದರೆ ಶೇ.1.5ರಷ್ಟು ಹೆಚ್ಚಾಗಿದೆ ಅಷ್ಟೆ. ಹೀಗಾದಾಗ ಎಲ್ಲ ವಲಯಗಳ ಅಭಿವೃದ್ಧಿಗೆ ಅಗತ್ಯ ಪ್ರಾಶಸ್ತ್ಯ ನೀಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.
14ನೆ ಹಣಕಾಸು ಆಯೋಗದ ಪ್ರಕಾರ ನಮ್ಮ ರಾಜ್ಯಕ್ಕೆ ಶೇ.4.71ರಷ್ಟು ಅನುದಾನ ಹಂಚಿಕೆಯಾಗಿತ್ತು. ಇತ್ತೀಚೆಗೆ ಮಂಡಿಸಲಾದ 15ನೆ ಹಣಕಾಸು ಆಯೋಗದ ಪ್ರಕಾರ ನಮ್ಮ ಹಂಚಿಕೆ ಪಾಲು ಶೇ.3.64ಕ್ಕೆ ಇಳಿಕೆಯಾಗಿದೆ. ಇದರಿಂದ 11,215 ಕೋಟಿ ರೂ.ನಷ್ಟವಾಗಿದೆ. ಬಿಎಸ್ವೈ ಅವರು ಎಲ್ಲದಕ್ಕೂ ಬಜೆಟ್ ಮೂಲಕ ಉತ್ತರಿಸುತ್ತೇನೆ ಎನ್ನುತ್ತಿದ್ದರು, ಈಗೇನು ಹೇಳುತ್ತಾರೆಂದು ಪ್ರಶ್ನಿಸಿದರು.
ಮಹದಾಯಿಗೆ 500 ಕೋಟಿ ರೂ., ಎತ್ತಿನಹೊಳೆಗೆ 1,500 ಕೋಟಿ ರೂ., ತುಂಗಭದ್ರಾ ಹೂಳೆತ್ತಲು 20 ಕೋಟಿ ರೂ.ಅನುದಾನ ನೀಡಲಾಗುವುದು ಎಂದು ಬಜೆಟ್ನಲ್ಲಿ ಹೇಳಲಾಗಿದೆ. ರಾಜ್ಯದ ಎರಡು ಜೀವನದಿಗಳಾದ ಕೃಷ್ಣ ಮೇಲ್ದಂಡೆ ಮತ್ತು ಕಾವೇರಿ ನದಿ ಯೋಜನೆಗಳ ಅನುದಾನದ ಬಗ್ಗೆ ಬಜೆಟ್ನಲ್ಲಿ ಯಾವ ಉಲ್ಲೇಖವು ಇಲ್ಲ ಎಂದು ಟೀಕಿಸಿದರು.
ಪ್ರಸಕ್ತ ಬಜೆಟ್ನಲ್ಲಿ ರೈತರ ಸಾಲಮನ್ನಾದ ಬಗ್ಗೆ ಒಂದಕ್ಷರವೂ ಮಾಹಿತಿ ಇಲ್ಲ. ಹಿಂದಿನ ಸಮ್ಮಿಶ್ರ ಸರಕಾರ ಹಂತ-ಹಂತವಾಗಿ ಸಾಲಮನ್ನಾ ಮಾಡುವ ಘೋಷಣೆ ಮಾಡಿತ್ತು, ಅದರ ಬಗ್ಗೆ ಕನಿಷ್ಠ ಮಾಹಿತಿಯನ್ನಾದರೂ ನೀಡಬೇಕಲ್ಲವೇ? ಇಂತಹ ಪ್ರಮುಖ ವಿಚಾರವೇ ಇಲ್ಲದ ಇದನ್ನು ರೈತಪರ ಬಜೆಟ್ ಎನ್ನಲು ಹೇಗೆ ಸಾಧ್ಯ? ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಪರಿಶಿಷ್ಟರ ಕಲ್ಯಾಣಕ್ಕೆ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಕಳೆದ ಬಾರಿ 30,150 ಕೋಟಿ ರೂ.ನೀಡಲಾಗಿತ್ತು. ಈ ಬಾರಿ 26,131ಕೋಟಿ ರೂ.ನೀಡಲಾಗಿದೆ. 4 ಸಾವಿರ ಕೋಟಿ ರೂ.ಕಡಿಮೆಯಾಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಅನುದಾನದ ಗಾತ್ರವೂ ಹೆಚ್ಚಾಗಬೇಕು. ಇದು ಬಿಜೆಪಿ ಸಾಮಾಜಿಕ ನ್ಯಾಯದ ವಿರೋಧಿ ಎಂಬುದನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
‘ಸಬ್ ಕ ಸಾಥ್, ಸಬ್ ಕ ವಿಕಾಸ್’ ಎನ್ನುವ ಬಿಜೆಪಿ ನಾಯಕರು ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. 5 ಅಲ್ಪಸಂಖ್ಯಾತ ವಸತಿ ಶಾಲೆಗಳ ಮೇಲ್ದರ್ಜೆಗೇರಿಸುವ ಯೋಜನೆ ಹೊರತುಪಡಿಸಿದರೆ ಈ ಸಮುದಾಯದ ಅಭಿವೃದ್ಧಿಗೆ ಬೇರೆಲ್ಲೂ ನಯಾಪೈಸೆ ಅನುದಾನ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
2018ರ ಬಜೆಟ್ನಲ್ಲಿ ಕೃಷಿ, ತೋಟಗಾರಿಕೆ, ನೀರಾವರಿ ಸೇರಿ ಇದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಒಟ್ಟು 38,073ಕೋಟಿ ರೂ.ಮೀಸಲಿಟ್ಟಿದ್ದೆ. ಪ್ರಸಕ್ತ ಸಾಲಿನಲ್ಲಿ ಇದನ್ನು 32,259 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಹಾಗಿದ್ದರೆ, ಇದು ಹೇಗೆ ರೈತಪರ ಬಜೆಟ್ ಆಗಲು ಸಾಧ್ಯ? ಎಂದು ಅವರು ಕೇಳಿದರು.
ಬಿಜೆಪಿ ‘ಕಲ್ಯಾಣ ಕರ್ನಾಟಕ’ ಎಂಬುದು ಬರೀ ಘೋಷಣೆಗಷ್ಟೇ ಸೀಮಿತ. ನಮ್ಮ ಸರಕಾರದ ಎರಡು ಬಜೆಟ್ನಲ್ಲಿ ಈ ಭಾಗದ ಅಭಿವೃದ್ಧಿಗೆ ತಲಾ 1,500 ಕೋಟಿ ರೂ.ನೀಡಿದ್ದೆ, ಈ ಬಾರಿಯೂ ಅಷ್ಟೇ ಅನುದಾನ ಮೀಸಲಿಡಲಾಗಿದೆ. ಹೆಸರು ಬದಲಾಯಿಸಿದ ಮಾತ್ರಕ್ಕೆ ಈ ಭಾಗದ ಕಲ್ಯಾಣವಾಗುತ್ತದೆಯೇ? ಎಂದು ಅವರು ಲೇವಡಿ ಮಾಡಿದರು.
‘ವಿತ್ತೀಯ ಹೊಣೆಗಾರಿಕೆ ನೀತಿಯಲ್ಲೇ ಸಾಲ ಪಡೆಯಲು ಅವಕಾಶಗಳಿದ್ದರೂ ನಮ್ಮ ಸರಕಾರವಿದ್ದಾಗ ‘ಸಾಲ ಮಾಡಿ ಹೋಳಿಗೆ ತಿನ್ನುತ್ತೀರಿ’ ಎಂದು ಬಿಜೆಪಿಯವರು ಹಂಗಿಸುತ್ತಿದ್ದರು. ಈಗ ಅವರೇ 52 ಸಾವಿರ ಕೋಟಿ ರೂ. ಸಾಲ ಮಾಡಲು ಹೊರಟಿದ್ದಾರೆ. ಇದೊಂದು ರೀತಿ ‘ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ’ ಎಂಬಂತೆ ಆಯಿತಲ್ಲವೇ? ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಮೊನ್ನೆತಾನೆ ಶೇ.12ರಷ್ಟು ಬಸ್ ದರವನ್ನು ಹೆಚ್ಚಿಸಲಾಗಿತ್ತು. ಎಪ್ರಿಲ್-2020ರಿಂದ ಪ್ರತಿ ಲೀಟರ್ ಪೆಟ್ರೋಲ್ 1.60 ರೂ., ಡಿಸೇಲ್ 1.59 ರೂ.ಏರಿಕೆಯಾಗಲಿದೆ. ಇದರ ಜೊತೆಗೆ ಸ್ಲೀಪರ್ ಬಸ್, ಮಿನಿಬಸ್ಗಳ ಮೇಲೆ ಹೊಸದಾಗಿ ಹೆಚ್ಚುವರಿ ತೆರಿಗೆ ವಿಧಿಸಲು ಹೊರಟಿದ್ದಾರೆಂದು ಟೀಕಿಸಿದರು.
ಬಜೆಟ್ ತಯಾರಿಕೆ ಎನ್ನುವುದು ಗಂಭೀರವಾದ ಪವಿತ್ರ ಕಾರ್ಯ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್ ನೋಡಿದರೆ ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಗಣಿತವೂ ಇಲ್ಲ, ವೃತ್ತಿಪರತೆಯೂ ಇಲ್ಲ. ಎಲ್ಲವೂ ಅಸ್ಪಷ್ಟ, ಗೊಂದಲಮಯ
-ಸಿದ್ದರಾಮಯ್ಯ, ವಿಪಕ್ಷ ನಾಯಕ







