ವಿಶ್ವ ಶ್ರವಣ ದಿನ
ಉಡುಪಿ, ಮಾ.6: ವಿಶ್ವ ಶ್ರವಣ ದಿನವನ್ನು ಶ್ರವಣ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನಾಗಿ ಆಚರಿಸಲಾಗುತಿದ್ದು, ಶ್ರವಣದೋಷ ಎಂಬ ಆರೋಗ್ಯ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.
ಜಗತ್ತಿನ ಎಲ್ಲೆಡೆಯಂತೆ ನಮ್ಮ ದೇಶದಲ್ಲಿಯೂ ಶ್ರವಣೇಂದ್ರಿಯದ ಕೊರತೆ ಇದ್ದು, ಭಾರತದಲ್ಲಿ ಇದರ ಅಂದಾಜು ಪ್ರಮಾಣವು ಶೇ.6.3ರಷ್ಟಿದೆ. ಇದು ಅನುವಂಶಿಕ ಕಾರಣಗಳು, ಜನನದ ಸಮಯದಲ್ಲಿ ಉಂಟಾಗುವ ತೊಡಕು ಗಳು, ಕೆಲವು ಸೋಂಕುಗಳು ದೀರ್ಘಕಾಲದ ಕಿವಿ ಸೋಂಕು ಗಳು, ಕಿವಿಯ ಹಾನಿಕಾರಕ ಔಷಧಿಗಳ ಬಳಕೆ, ಅತಿಯಾದ ಶಬ್ದಕ್ಕೆ ಒಳಗಾಗುವುದು ಮತ್ತು ವಯೋವೃದ್ದಿಯಿಂದ ಉಂಟಾಗಬಹುದು. ಆದರೆ ಇದಕ್ಕಾಗಿ ಚಿಂತಿಸದೇ, ಸಾಧನಗಳು ಮತ್ತು ಸಮಯೋಚಿತ ವೈದ್ಯಕೀಯ ಸೇವೆಗಳ ಸಹಾಯದಿಂದ ರೋಗವನ್ನು ಸುಲಭವಾಗಿ ತಡೆಯಬಹುದು ಮತ್ತು ನಿರ್ವಹಿಸಬಹುದು.
ಆರಂಭಿಕ ಹಂತದಲ್ಲಿ ಶ್ರವಣ ತಪಾಸಣೆ ನಡೆಸುವುದರಿಂದ, ಶ್ರವಣ ದೋಷ ವನ್ನು ಪತ್ತೆ ಹಚ್ಚುವುದರಿಂದ ಹಾಗೂ ಹೆಚ್ಚಿನ ನಿರ್ವಹಣೆಗಾಗಿ ಆರೋಗ್ಯ ಸಂಸ್ಥೆಗಳಿಗೆ ಸೂಚಿಸುವುದರಿಂದ, ಶ್ರವಣ ದೋಷವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





