ಉಳ್ಳಾಲದಲ್ಲಿ 3ನೇ ಹಂತದ ನದಿ ದಂಡೆ ಯಾತ್ರೆ

ಮಂಗಳೂರು, ಮಾ.6: ಉಳ್ಳಾಲ ನದಿ ತೀರದ ಸಂಪನ್ಮೂಲಗಳನ್ನು ಸಂರಕ್ಷಿಸಿ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಉಳ್ಳಾಲ ಉಳಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರನ್ನು ಒಳಗೊಂಡ ಪರಿಸರ ಸಂರಕ್ಷಣಾ ನಾಗರಿಕ ಒಕ್ಕೂಟ ಹಮ್ಮಿಕೊಂಡಿರುವ ನದಿ ಸಂರಕ್ಷಣಾ ಅಭಿಯಾನದ ಅಂಗವಾಗಿ ನದಿ ಪರಿಸರದ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು ರೋಶನಿ ನಿಲಯದ ವಿದ್ಯಾರ್ಥಿ ಗಳೊಂದಿಗೆ ನದಿ ದಂಡೆ ಯಾತ್ರೆ ಎಂಬ ವಿನೂತನ ಕಾರ್ಯಕ್ರಮದ 3ನೇ ಹಂತವು ಶುಕ್ರವಾರ ನಡೆಯಿತು.
ಉಳ್ಳಾಲ ಕೋಡಿ ತೋಟ, ಉಪ್ಪುಗುಡ್ಡೆ, ಚಿಪ್ಪಿನ ಕೊಟ್ಟಾರ ಹಾಗೂ ಬಂಡಸಾಲೆ ನದಿ ತೀರದಲ್ಲಿ ಕಾಲ್ನಡಿಗೆಯಲ್ಲಿ ಸಾಗುವುದರೊಂದಿಗೆ ಪರಿಸರ ರಕ್ಷಣೆಗೆ ಪೂರಕವಾದ ಹಾಡುಗಳು, ಘೋಷಣೆಗಳು ಸ್ಥಳೀಯ ನದಿ ಪರಿಸರದ ಜನರ ಭೇಟಿ, ಹಿರಿಯರಿಂದ ಮಾಹಿತಿ ಸಂಗ್ರಹ, ಸಲಹೆಗಳನ್ನು ಪಡೆಯುತ್ತಾ, ನದಿ ರಕ್ಷಣೆಯ ಬಗ್ಗೆ ಜನಜಾಗೃತಿ ಕಾರ್ಯ ನಡೆಸಲಾಯಿತು.
ಉಳ್ಳಾಲ ಕೊಟ್ಟಾರ ಪ್ರದೇಶದ ಹಿರಿಯ ನಾಗರಿಕರಾದ ಅಬ್ದುಲ್ಲಾ ಮತ್ತು ಅಂಗಡಿ ಉಮೇಶ್ ಉಳಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಕ್ಕೂಟದ ಸಂಚಾಲಕ ಮಂಗಳೂರು ರಿಯಾಝ್ ಸ್ವಾಗತಿಸಿ, ವಂದಿಸಿದರು.





