ರಾಜ್ಯ ಮಟ್ಟದ ಸಹ್ಯಾದ್ರಿ ವಿಜ್ ಕ್ವಿಝ್ : ‘ಮ್ಯಾಪ್ಸ್’ ವಿದ್ಯಾರ್ಥಿಗಳ ತಂಡ ಚಾಂಪಿಯನ್
ಉಜಿರೆ ಎಸ್ಡಿಎಂ ಕಾಲೇಜು ರನ್ನರ್ಅಪ್

ಮಂಗಳೂರು, ಮಾ.6: ಸಹ್ಯಾದ್ರಿ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ವ್ಯವಹಾರಿಕ ಆಡಳಿತ ವಿಭಾಗವು ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ 6ನೇ ಆವೃತ್ತಿಯ ಸಹ್ಯಾದ್ರಿ ವಿಜ್ ಕ್ವಿಝ್ ನಲ್ಲಿ ಮಂಗಳೂರು ಅಕಾಡಮಿ ಆಫ್ ಪ್ರೊಫೆಷನಲ್ ಸ್ಟಡೀಸ್ (ಮ್ಯಾಪ್ಸ್) ವಿದ್ಯಾರ್ಥಿಗಳ ತಂಡವು ಕ್ವಿಜ್ನ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಮಂಗಳೂರು ಎನ್ಐಪಿಎಂ ಅಧ್ಯಕ್ಷ ಮತ್ತು ಕಾರ್ಡೋಲೈಟ್ನ ಪ್ರಧಾನ ವ್ಯವಸ್ಥಾಪಕ ದಿವಾಕರ್ ಕದ್ರಿ, ವಿದ್ಯಾರ್ಥಿಗಳ ಪಾಲಿಗೆ ಇಂತಹ ಕ್ಷಣಗಳು ಅತಿಮುಖ್ಯ. ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ದೆಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಸದಾ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಅತ್ಯುತ್ತಮ ಅಂಕ ದಾಖಲಿಸಿದ ಮ್ಯಾಪ್ಸ್: ಮೊದಲ ಎರಡು ಸುತ್ತುಗಳಲ್ಲಿ ಮಂಗಳೂರು ಅಕಾಡಮಿ ಆಫ್ ಪ್ರೊಫೆಷನಲ್ ಸ್ಟಡೀಸ್ (ಮ್ಯಾಪ್ಸ್) ತಂಡವು ಮುನ್ನಡೆ ಸಾಧಿಸಿತ್ತು. ಅದರಂತೆ, ಕೊನೆಯ ಸುತ್ತಿನಲ್ಲೂ ಅತ್ಯುತ್ತಮ ಅಂಕ ದಾಖಲಿಸಿ ಚಾಂಪಿಯನ್ಆಗಿ ಹೊರಹೊಮ್ಮಿತು. ಚಾಂಪಿಯನ್ ತಂಡದಲ್ಲಿ ಸ್ಕಂದಕೃಷ್ಣ, ತ್ರಿಶೂಲ್ ಎಂ.ವಿ. ಮತ್ತು ಅನುರಾಗ್ ಇದ್ದರು. ವಿಜೇತ ತಂಡವು ಟ್ರೋಫಿ ಹಾಗೂ 25 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡಿತು.
ರನ್ನರ್ ಅಪ್: ಸಹ್ಯಾದ್ರಿ ವಿಜ್ ಕ್ವಿಝ್ ರನ್ನರ್ ಅಪ್ ಪ್ರಶಸ್ತಿಯು ಉಜಿರೆ ಎಸ್ಡಿಎಂ ಕಾಲೇಜಿನ (ಸ್ವಾಯತ್ತ) ತಂಡದ ಪಾಲಾಯಿತು. ಸುಮಂತ್ ಕೆ, ಶ್ರೀರಾಮ ಮತ್ತು ವರ್ಗಿಸ್ ಥಾಮಸ್ ಉತ್ತಮ ಸ್ಪರ್ಧೆ ನೀಡಿದರೂ, ಮೊದಲ ಸ್ಥಾನ ಪಡೆಯುವ ಕನಸು ಈಡೇರಲಿಲ್ಲ. ವಿಜೇತ ತಂಡಕ್ಕೆ ಟ್ರೋಫಿ ಹಾಗೂ 15 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.
ಮೂರನೇ ಸ್ಥಾನವು ನಿಟ್ಟೆಯ ಡಾ.ಎನ್ಎಸ್ಎಎಂ ಪ್ರಥಮ ದರ್ಜೆ ಕಾಲೇಜಿನ ತಂಡದ ಪಾಲಾಯಿತು. ಗಗನ್ ವಿ. ಪಲಿಮಾರ್, ಕೆ.ಗೌತಮ್ ಮತ್ತು ರಿಯಾ ಮೆನೆಜಸ್ ತಂಡವು ಟ್ರೋಫಿ ಹಾಗೂ 10 ಸಾವಿರ ರೂ. ನಗದು ಪ್ರಶಸ್ತಿ ಪಡೆಯಿತು.
ರಕ್ಷಿತ್ ಶೆಟ್ಟಿ ಕ್ವಿಜ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು. ಸಹ್ಯಾದ್ರಿ ಕಾಲೇಜಿನ ಪ್ರಾಚಾರ್ಯ ಶ್ರೀನಿವಾಸ್ ಕುಂಟೆ ಹಾಗೂ ವಸಂತ ಕೇದಿಗೆ, ಮುಖ್ಯ ಸಂಯೋಜಕ ಪ್ರೊ.ಪದ್ಮನಾಭ ಬಿ., ಡಾ.ವಿಶಾಲ್ ಸಮರ್ಥ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.






.jpg)
.jpg)
.jpg)

