'ಯಡಿಯೂರಪ್ಪ ಅವರು ಬಜೆಟ್ ಮಂಡನೆ ವೇಳೆ...': ಸಚಿವ ಎಸ್.ಟಿ.ಸೋಮಶೇಖರ್ ಅಸಮಾಧಾನ

ಬೆಂಗಳೂರು, ಮಾ.7: ಪ್ರಸ್ತುತ ಸಾಲಿನ ಆಯವ್ಯಯದಲ್ಲಿ ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ ಜಾರಿಗೊಳಿಸಬೇಕೆಂದು ಮನವಿ ಮಾಡಲಾಗಿತ್ತು. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡನೆ ವೇಳೆ ಕೈಬಿಟ್ಟಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ನಗರದ ಪುರಭವನ ಸಭಾಂಗಣದಲ್ಲಿ ಸಹಕಾರ ಭಾರತಿ ಸಂಸ್ಥೆ ಆಯೋಜಿಸಿದ್ದ, ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ಸಹಕಾರ ಸಂಘಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪಗೊಂಡಿರುವ ಯಶಸ್ವಿನಿ ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆ ಅನ್ನು ಪ್ರಸ್ತುತ ಸಾಲಿನ ಬಜೆಟ್ನಲ್ಲಿ ಸೇರ್ಪಡೆ ಮಾಡಿ, ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವರಾದ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ ಜತೆಯಲ್ಲಿ ನಾನು ಮನವಿ ಮಾಡಿದ್ದೆ. ಅದರಂತೆ, ಬಜೆಟ್ ಪುಸ್ತಕದಲ್ಲಿ ಸೇರಿಸಲಾಗಿದೆ ಎಂದು ಮಾಹಿತಿಯೂ ಬಂದಿತ್ತು. ಆದರೆ, ಏಕಾಏಕಿ, ಆಯವ್ಯಯ ಮಂಡನೆ ದಿನ ಕೈಬಿಟ್ಟಿದ್ದು, ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ಮತ್ತೊಮ್ಮೆ ತರಲಾಗುವುದು ಎಂದು ತಿಳಿಸಿದರು.
ಸಹಕಾರ ವ್ಯಾಪ್ತಿಯಲ್ಲಿನ ಬಾಂಕುಗಳಲ್ಲಿ ರಾಜಕಾರಣಿಗಳು ಸಾಲ ಪಡೆದಿದ್ದರೆ, ಮರುಪಾವತಿ ನಿರಾಕ್ಷೇಪಣಾ ಪತ್ರವನ್ನು ಕಡ್ಡಾಯವಾಗಿ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಬೇಕು ಎನ್ನುವ ಕಾನೂನು ಜಾರಿಗೆ ಚಿಂತನೆ ನಡೆಸಲಾಗಿದೆ. ಇದರಿಂದ ಕೆಲ ಸಹಕಾರ ಬ್ಯಾಂಕುಗಳ ಆರ್ಥಿಕ ನಷ್ಟದ ಸಮಸ್ಯೆ ತಗ್ಗಿಸಬಹುದು ಎಂದು ಅಭಿಪ್ರಾಯಪಟ್ಟರು.
ಬಸವನಗುಡಿಯ ಗುರು ರಾಘವೇಂದ್ರ ಕೋ-ಆಪರೇಟಿವ್ ಸೊಸೈಟಿ ಸೇರಿದಂತೆ ಇನ್ನಿತರೆ ಬ್ಯಾಂಕುಗಳ ಪರಿಸ್ಥಿತಿಯಿಂದಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಇತರೆ ಬ್ಯಾಂಕುಗಳಿಗೆ ಕೆಟ್ಟ ಹೆಸರು ಎಂದ ಅವರು, ಯಾವುದೇ ಒಂದು ಬ್ಯಾಂಕು, ಸಂಘ ದಿವಾಳಿ ಆಗಬೇಕಾದರೆ, ಅಲ್ಲಿನ ಆಡಳಿತ ಮತ್ತು ಅಧ್ಯಕ್ಷರ ಕಾರ್ಯವೈಖರಿ ಮುಖ್ಯ ಎಂದು ಸೋಮಶೇಖರ್ ನುಡಿದರು.
ಸಚಿವರ ಭೇಟಿ: ಸಹಕಾರಿ ಸಂಘಗಳಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ ಎಂಬ ಅಂಶ ಗೊತ್ತಾಗಿದೆ. ಈ ರೀತಿಯ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಲು ಮಾ.20 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸಿತಾರಾಮನ್ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದರು.
ಮೂಗರ್ಜಿಗಳ ತನಿಖೆ ಇಲ್ಲ: ಸಹಕಾರಿ ಸಂಘಗಳ ವಿರುದ್ಧ ಹಲವು ದೂರುಗಳು ಬರುತ್ತವೆ. ಜೊತೆಗೆ ಅಕ್ರಮಗಳ ಕುರಿತ ದಾಖಲೆಗಳೊಂದಿಗೆ ದೂರುಗಳು ಬಂದಿರುತ್ತವೆ. ಅಂತಹವುಗಳನ್ನು ಪರೀಶೀಲಿಸಿ ಶೇ.100 ಅವ್ಯವಹಾರ ನಡೆದಿದೆ ಎಂಬುದು ಗೊತ್ತಾದರೆ ಮಾತ್ರ ತನಿಖೆಗೆ ಸೂಚಿಸುತ್ತೇನೆ. ಆದರೆ, ಸಂಘಗಳಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ವಿಳಾಸವಿಲ್ಲದ ಮೂಗರ್ಜಿಗಳು ಬಂದಲ್ಲಿ ಯಾವುದೇ ಕಾರಣಕ್ಕೂ ತನಿಖೆಗೆ ಆದೇಶಿಸುವುದಿಲ್ಲ ಎಂದರು.
ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳ ನಷ್ಟ ಅನುಭವಿಸುವ ಮೂಲಕ ಗ್ರಾಹಕರ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದೆ. ಹೀಗೆ ಎಂದೂ ಆಗಬಾರದು. ಇದು ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಕೇಂದ್ರ ಸರಕಾರ ಮತ್ತು ಆರ್ಬಿಐ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಹಕಾರ ಬ್ಯಾಂಕುಗಳು ಬಂದ್ ಆಗಲಿವೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಆದರೆ, ಇಂತಹ ಬೆಳವಣಿಗೆ ಸರಿಯಲ್ಲ ಎಂದ ಅವರು, ಸಹಕಾರ ಕ್ಷೇತ್ರ ಅಭಿವೃದ್ಧಿಯಾದರೆ, ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಮುಂಬೈ ಆರ್ಬಿಐ ನಿರ್ದೇಶಕ ಸತೀಶ್ ಮರಾಠೆ, ಸಹಕಾರಿ ಭಾರತಿ ಪ್ರಧಾನ ಕಾರ್ಯದರ್ಶಿ ಬಿ.ಎಚ್.ಕೃಷ್ಣಾರೆಡ್ಡಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.
.jpg)







