'ಪೋಡಿ ಮುಕ್ತ ಗ್ರಾಮ ಅಭಿಯಾನ’ಕ್ಕೆ ವೇಗ, ಹಳ್ಳಿಗೆ ಅಧಿಕಾರಿಗಳ ರವಾನೆ: ಸಚಿವ ಆರ್.ಅಶೋಕ್

ಬೆಂಗಳೂರು, ಮಾ. 9: ರಾಜ್ಯದಲ್ಲಿ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ವೇಗ ನೀಡುವ ದೃಷ್ಟಿಯಿಂದಲೇ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶಿಲ್ದಾರ್ ಸೇರಿ ಹಿರಿಯ ಅಧಿಕಾರಿಗಳನ್ನು ಹಳ್ಳಿಗಳಿಗೆ ತೆರಳಲು ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಬೆಳ್ಳಿ ಪ್ರಕಾಶ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಜಮೀನುಗಳ ಸರ್ವೆ ಕಾರ್ಯ ಕಗ್ಗಂಟಾಗಿದ್ದು, ಮೂಲ ದಾಖಲೆ ಒದಗಿಸಬೇಕು. ಆದರೆ ಸರ್ವೇ ನಂಬರ್ವೊಂದರಲ್ಲಿ 100 ಎಕರೆ ಜಮೀನಿದ್ದರೆ 150 ಎಕರೆಯಷ್ಟು ಮಂಜೂರಾಗಿದ್ದು, ಇಂತಹ ಪ್ರಕರಣಗಳನ್ನು ಬೇಧಿಸಬೇಕಾಗಿದೆ. ತಹಶೀಲ್ದಾರ್ ನಿವೃತ್ತಿ ನಂತರವೂ ಸಹಿ ಮಾಡಿ ಮಂಜೂರಾತಿ ನೀಡಿರುವ ಪ್ರಕರಣಗಳಿವೆ. ಇಂತಹ ಪ್ರಕರಣಗಳಿಂದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ. ಹೀಗಾಗಿ ಇದನ್ನು ಸರಿಪಡಿಸಲು 2015ರಿಂದ ಪೋಡಿ ಮುಕ್ತ ಗ್ರಾಮ ಅಭಿಯಾನ 174 ಕ್ಷೇತ್ರಗಳಲ್ಲಿ ಪ್ರಾರಂಭವಾಗಿದೆ ಎಂದರು.
ಕಡತ ನಿರ್ವಹಣೆ ನಿಮ್ಮ ಜವಾಬ್ದಾರಿ: ಕಡತಗಳನ್ನು ನಿರ್ವಹಣೆ ಮಾಡುವುದು ಸರಕಾರದ ಜವಾಬ್ದಾರಿ. ಮೂಲ ಕಡತಗಳು ಇಲ್ಲದಿದ್ದರೆ ಹೊಸ ದಾಖಲೆ ಮಾಡುವ ಕೆಲಸ ಅತ್ಯಂತ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಹೀಗಾಗಿ ಮಾರ್ಗಸೂಚಿ 10 ನಿಬಂಧನೆಗಳಿದ್ದು, 1ರಿಂದ 5ಕ್ಕೆ ಸೀಮಿತಗೊಳಿಸಿದರೆ ಪೋಡಿ ಪ್ರಕರಣ ಬಗೆಹರಿಸಲು ಸಾಧ್ಯ ಎಂದು ಗಮನ ಸೆಳೆದರು.
ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಜೆಡಿಎಸ್ನ ಶಿವಲಿಂಗೇಗೌಡ, ಪೋಡಿ ಸಮಸ್ಯೆ ಹಿನ್ನೆಲೆಯಲ್ಲಿ ರೈತರು ಸಾಯುತ್ತಿದ್ದು, ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ. ಹೀಗಾಗಿ ಸಮಸ್ಯೆ ಪರಿಹಾರಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಕಡೂರು ಕ್ಷೇತ್ರದಲ್ಲಿ 315 ಗ್ರಾಮಗಳಿದ್ದು, 16 ಮಂದಿ ಸರಕಾರಿ ಭೂ ಮಾಪಕರು, 11 ಮಂದಿ ಪರವಾನಗಿ ಪಡೆದ ಭೂ ಮಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 86 ಗ್ರಾಮಗಳನ್ನು ಅಳತೆಗೆ ಆಯ್ಕೆ ಮಾಡಿಕೊಂಡಿದ್ದು, 82 ಗ್ರಾಮಗಳಲ್ಲಿ ಅಳತೆ ಪೂರ್ಣಗೊಳಿಸಲಾಗಿದೆ. 72 ಗ್ರಾಮಗಳಲ್ಲಿ ದುರಸ್ತಿಯಾಗಿದ್ದು, 71 ಗ್ರಾಮಗಳಲ್ಲಿ ಇಂಡೀಕರಣ ಪೂರ್ಣಗೊಳಿಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.
ಶೋಷಣೆ ತಪ್ಪಿಸಿ
‘ಪೋಡಿ ವಿಷಯದಲ್ಲಿ ರೈತರ ನಿರಂತರ ಶೋಷಣೆ ನಡೆಯುತ್ತಿದೆ. ಹಣ ನೀಡಿದರೆ ಎಲ್ಲವೂ ಸರಿಯಾಗುತ್ತದೆ. ನಿಬಂಧನೆಗಳನ್ನು ಸರಳೀಕರಣ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿ, ಪೋಡಿ ಮುಕ್ತವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು’
-ಎ.ಟಿ.ರಾಮಸ್ವಾಮಿ, ಜೆಡಿಎಸ್ನ ಹಿರಿಯ ಸದಸ್ಯ







